ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ರಕ್ತಪಾತ ನಡೆದಿದೆ. ಬಾರ್‍‌ನಲ್ಲಿ ಕೂತು ಗುರಾಯಿಸಿದ ಎಂಬ ಕಾರಣಕ್ಕೆ ವ್ಯಕ್ತಿಗೆ ಬೀರ್ ಬಾಟಲ್‌ನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ರಕ್ತಪಾತ ನಡೆಯುತ್ತಿರುವುದು ಆತಂಕ ಮೂಡಿಸಿದೆ. ಕೇವಲ ಗುರಾಯಿಸಿದ ಎಂಬ ಸಣ್ಣ ಕಾರಣಕ್ಕೆ ಯುವಕನೊಬ್ಬನನ್ನು ಚಾಕು ಹಾಗೂ ಬಿಯರ್ ಬಾಟಲಿಯಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕನಕಪುರ ರಸ್ತೆಯ ಜರಗನಹಳ್ಳಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಪ್ರಕರಣ?

ಉದಯ್ ಕುಮಾರ್ ಕೊಲೆಯಾದ ದುರ್ದೈವಿ. ನಿನ್ನೆ ರಾತ್ರಿ ಸುಮಾರು 8:30 ರ ಸುಮಾರಿಗೆ ಜರಗನಹಳ್ಳಿಯ ಬಾರ್‌ ಒಂದರ ಮುಂಭಾಗ ಈ ಕೃತ್ಯ ನಡೆದಿದೆ. ಆರೋಪಿಗಳಾದ ಚೆಲುವ ಮತ್ತು ತೇಜ ಎಂಬುವವರು ಉದಯ್ ಕುಮಾರ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಉದಯ್ ಕುಮಾರ್ ಮತ್ತು ಆರೋಪಿಗಳಿಗೆ ಮೊದಲೇ ಯಾವುದೇ ಪರಿಚಯವಿರಲಿಲ್ಲ. ಘಟನೆ ನಡೆದ ರಾತ್ರಿ ಬಾರ್‌ನಲ್ಲಿ ಕುಳಿತಿದ್ದಾಗ ಉದಯ್, ಆರೋಪಿಗಳ ಕಡೆಗೆ ಗುರಾಯಿಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಬಾರ್‌ನಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಜಗಳ ತಾರಕಕ್ಕೇರಿದಾಗ ಉದಯ್ ಬಾರ್‌ನಿಂದ ಹೊರಬಂದು ನಡೆಯತೊಡಗಿದ್ದಾರೆ.

ಆದರೆ, ಸಿಟ್ಟಿನಲ್ಲಿದ್ದ ಆರೋಪಿಗಳು ಉದಯ್‌ನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಾರ್‌ನಿಂದ ಸ್ವಲ್ಪ ದೂರ ಬಂದ ಮೇಲೆ ಮತ್ತೆ ಗಲಾಟೆ ಶುರು ಮಾಡಿದ್ದಲ್ಲದೆ, ಬಿಯರ್ ಬಾಟಲಿಯಿಂದ ಉದಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಬಾಟಲಿಯನ್ನು ಒಡೆದು ಉದಯ್‌ನ ಎದೆಯ ಎಡಭಾಗಕ್ಕೆ ಬಲವಾಗಿ ಚುಚ್ಚಿದ್ದಾರೆ.

ಬಾಟಲಿಯಿಂದ ಚುಚ್ಚಿದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿದ್ದು, ಉದಯ್ ಸ್ವಲ್ಪ ದೂರ ನಡೆದುಕೊಂಡು ಹೋಗಿ ಅಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪುಟ್ಟೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲೇ ಇಂತಹ ಸಣ್ಣ ವಿಚಾರಕ್ಕೆ ಕೊಲೆ ನಡೆದಿರುವುದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ.