Asianet Suvarna News Asianet Suvarna News

ಮೋದಿಯಿಂದಾಗಿ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ: ಯಡಿಯೂರಪ್ಪ

ಭಾರತೀಯರು ಖಾದಿ ಮತ್ತು ಗ್ರಾಮೋದ್ಯೋಗ ಸಂಘಗಳಿಗೆ ಹಣ ಮತ್ತು ಭೂಮಿಯನ್ನು ದಾನ ಮಾಡಿದ ನಂತರ ಚಳುವಳಿಯು ದೊಡ್ಡ ಗ್ರಾಮ ಮತ್ತು ಆಕಾರವನ್ನು ಪಡೆಯಿತು. ಇಂದು ಪ್ರತಿ ಮನೆಯಲ್ಲೂ ಬಟ್ಟೆ ಉತ್ಪಾದನೆ ಪ್ರಾರಂಭಿಸಿ ಗ್ರಾಮವನ್ನು ಸ್ವಾಭಿಮಾನವನ್ನಾಗಿಸಲು ಗುಡಿ ಕೈಗಾರಿಕೆಗಳು ಸಹಕಾರಿಯಾಗಿವೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

India is Among Advanced Nations Because of PM Narendra Modi Says BS Yediyurappa grg
Author
First Published Dec 7, 2023, 2:25 PM IST

ಶಿವಮೊಗ್ಗ(ಡಿ.07):  ಸ್ವಾತಂತ್ರ್ಯ ಲಭಿಸಿ ಹಲವು ವರ್ಷಗಳೇ ಕಳೆದರೂ ಅಭಿವೃದ್ಧಿಯಲ್ಲಿ ಮುಂದುವರಿಯುತ್ತಿರುವ ರಾಷ್ಟ್ರ ಎನಿಸಿದ್ದ ಭಾರತ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮುಂದುವರಿದ ರಾಷ್ಟ್ರಗಳ ಪಟ್ಟಿಗೆ ಸೇರಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಇಲ್ಲಿನ ನಗರದ ಫ್ರೀಡಂ ಪಾರ್ಕ್‌ನಲ್ಲಿ ಇದೆ ಮೊದಲ ಬಾರಿಗೆ ಡಿ.6 ರಿಂದ 10ರವರೆಗೆ ನಡೆಯಲಿರುವ ಬೃಹತ್‌ ಸ್ವದೇಶಿ ಮೇಳಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ವಸ್ತುಗಳ ಉತ್ಪಾದನೆ ಮತ್ತು ತಯಾರಿಕೆಗೆ ಹೆಚ್ಚಿನ ಒತ್ತುಕೊಟ್ಟು ಭಾರತದಲ್ಲಿ ಭವಿಷ್ಯದಲ್ಲಿ ಯಾವುದೇ ವಸ್ತು ಹಾಗೂ ಯಂತ್ರಗಳಿಗೆ ಬೇರೆ ದೇಶಗಳನ್ನು ಅವಲಂಬಿಸುವ ಅಗತ್ಯವಿಲ್ಲ. ದೇಶ್ಕಕೆ ಬೇಕಾದ ವಸ್ತುಗಳನ್ನು ನಾವೇ ಉತ್ಪಾದಿಸಿಕೊಂಡು ಬಳಕೆ ಮಾಡಿಕೊಂಡು ಮುಂದುವರೆದ ರಾಷ್ಟ್ರಗಳಲ್ಲಿ ಒಂದಾಗಬೇಕು ಎಂಬ ದೂರದೃಷ್ಟಿಯಿಂದ ಸ್ವದೇಶ ವಸ್ತುಗಳ ಉತ್ಪಾದನೆ ಮತ್ತು ತಯಾರಿಕೆಗೆ ಪ್ರಾಶಸ್ತ್ಯ ನೀಡಿದ್ದಾರೆ. ಇವರ ಆಡಳಿತದಲ್ಲಿ ಭಾರತ ಮುಂದುವರೆದ ರಾಷ್ಟ್ರಗಳ ಪಟ್ಟಿಯನ್ನು ಸೇರಿದೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡಲಿ: ಕೆ.ಎಸ್‌.ಈಶ್ವರಪ್ಪ

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಕೈಮಗ್ಗ ಹಾಗೂ ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಕಲೆ ಮತ್ತು ಕರಕುಶಲ ವಸ್ತುಗಳನ್ನು ಖರೀದಿಸಲು ಕರೆ ಕೊಟ್ಟಿದ್ದರು ಎಂದು ಹೇಳಿದರು.
ಸ್ವದೇಶಿ ಆಂದೋಲನ ಸ್ವಾವಲಂಬನೆ ಉದ್ದೇಶ ಹೊಂದಿದ್ದು, ಭಾರತೀಯ ಸ್ವತಂತ್ರ್ಯ ಚಳುವಳಿಯ ಭಾಗವಾಗಿತ್ತು. ಭಾರತೀಯ ರಾಷ್ಟ್ರೀಯತೆಗೆ ಕೊಡುಗೆ ನೀಡಿದೆ. ವಿದೇಶಿ ಸರಕುಗಳನ್ನು ತಡೆಯಲು ಆರಂಭವಾದ ಸ್ವದೇಶಿ ಆಂದೋಲನವನ್ನು ಮಹತ್ಮ ಗಾಂಧಿ ಅವರು ಇದನ್ನು ಸ್ವರಾಜ್ಯದ ಆತ್ಮ ಎಂದು ವರ್ಣಿಸಿದ್ದರು ಎಂದರು.

ಭಾರತೀಯರು ಖಾದಿ ಮತ್ತು ಗ್ರಾಮೋದ್ಯೋಗ ಸಂಘಗಳಿಗೆ ಹಣ ಮತ್ತು ಭೂಮಿಯನ್ನು ದಾನ ಮಾಡಿದ ನಂತರ ಚಳುವಳಿಯು ದೊಡ್ಡ ಗ್ರಾಮ ಮತ್ತು ಆಕಾರವನ್ನು ಪಡೆಯಿತು. ಇಂದು ಪ್ರತಿ ಮನೆಯಲ್ಲೂ ಬಟ್ಟೆ ಉತ್ಪಾದನೆ ಪ್ರಾರಂಭಿಸಿ ಗ್ರಾಮವನ್ನು ಸ್ವಾಭಿಮಾನವನ್ನಾಗಿಸಲು ಗುಡಿ ಕೈಗಾರಿಕೆಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಕೇವಲ ಆರ್ಥಿಕತೆಗೆ ಸೀಮಿತವಲ್ಲ:

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ವದೇಶಿ ಎಂದರೆ ಬರೀ ಆರ್ಥಿಕತೆಗೆ ಮಾತ್ರ ಸೀಮಿತವಲ್ಲ. ಅದು ನಮ್ಮ ಬದುಕು, ಚಿಂತನೆ, ಸಂಸ್ಕೃತಿಯಾಗಿದೆ. ಸರಳ ಬದುಕು, ಪ್ರಕೃತಿಗೆ ಹತ್ತಿರವಾಗಿರುವ ಬದುಕಿಗೆ ಹೆಚ್ಚು ಒತ್ತುವನ್ನು ಸ್ವದೇಶಿ ಜಾಗರಣ ಮಂಚ್‌ನಿಂದ ಆದ್ಯತೆ ನೀಡಲಾಗುತ್ತಿದೆ. ಈ ಮೇಳ ಶಿವಮೊಗ್ಗ ಸೇರಿದಂತೆ ದೇಶದಲ್ಲಿ 100 ಕೇಂದ್ರದಲ್ಲಿ ನಡೆಯುತ್ತಿದೆ ಎಂದರು.

ದೇಶದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್‌ ಕೊಟ್ಟ ಮೊದಲ ಮುಖ್ಯಮಂತ್ರಿ ಬಿ,ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಹಾಲಿಗೆ ಪೋತ್ಸಾಹಧನ ನೀಡುವ ಯೋಜನೆಗೆ ಜಾರಿಗೆ ತಂದಿದ್ದರು. ಕೃಷಿಕ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು ಎಂದು ಸುಮಾರು ₹2 ಸಾವಿರ ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿ, ಅದಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಒಂದೇ ವರ್ಷದಲ್ಲಿ ಕಾಮಗಾರಿಯನ್ನು ಮುಗಿಸಿದ ದಿಮಂತ ನಾಯಕ ಯಡಿಯೂರಪ್ಪ ಅವರು ಎಂದು ಬಣ್ಣಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥಿಕತೆಗೆ ಆತ್ಮ ವಿರುವುದೇ ಹಳ್ಳಿಗಳಲ್ಲಿ ಎಂದು ಅದಕ್ಕೆ ಆದ್ಯತೆ ನೀಡಿ ವಿಶ್ವಕರ್ಮ ಯೋಜನೆಯನ್ನು ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರನ್ನು ಹೊರತುಪಡಿಸಿ, ದೇಶದಲ್ಲಿ ಶೇ.60ಕ್ಕೂ ಹೆಚ್ಚು ಜನರು ಕೃಷಿಕರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಮಧ್ಯದಲ್ಲಿರುವ ಅವರ ಕುಲಕಸಬನ್ನು ಅರ್ಥೈಸಿಕೊಂಡು ಜೀವನ ನಡೆಸುತ್ತಿರುವ ಸಮಾಜವನ್ನು ಗುರುತಿಸಿ, ಅವರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ದೇಶದಲ್ಲಿ 21 ಲಕ್ಷ ಮಂದಿ ಇದಕ್ಕೆ ಅರ್ಜಿಯನ್ನು ಹಾಕಿದ್ದು, ಇದರಲ್ಲಿ ಕರ್ನಾಟಕದಲ್ಲಿ 7 ಲಕ್ಷ ಮಂದಿ ಇದ್ದಾರೆ ಎಂದು ತಿಳಿಸಿದರು.

ಸ್ವದೇಶಿ ಚಿಂತಕ ಪ್ರೊ. ಬಿ.ಎಂ. ಕುಮಾರಸ್ವಾಮಿ ಮಾತನಾಡಿ, 1850ರಲ್ಲಿ ರಾಷ್ಟ್ರೀಯತೆಯ ಭಾವವನ್ನು ಜಾಗೃತಗೊಳಿಸುವುದು ಮತ್ತು ಸ್ವಾತಂತ್ರ್ಯ ಕಿಚ್ಚನ್ನು ಹಚ್ಚುವ ಉದ್ದೇಶದಿಂದ ಸ್ವದೇಶಿ ಚಳವಳಿ ಆರಂಭವಾಯಿತು. ಜಾಗತಿಕರವನ್ನು ನೀತಿಯನ್ನು ವಿರೋಧಿಸಿ ದೇಶದಲ್ಲಿ ಸ್ವದೇಶಿ ಭಾವವನ್ನು ಉದ್ದೇಶದಿಂದ 1991ರ ನವೆಂಬರ್‌ 22ರಲ್ಲಿ ಆರಭವಾದ ಸ್ವದೇಶಿ ಜಾಗರಣ ಮಂಚ್‌ 32 ವರ್ಷಕ್ಕೆ ಕಾಲಿಟ್ಟಿದೆ. ಇವತ್ತು ಜಾಗತೀಕರಣ ಎಂಬುದು ಐಸಿಯು ಸೇರಿಕೊಂಡಿದೆ. ಸ್ವದೇಶ ಜಾಗರಣ ಮಂಚ್‌ ದೇಶದಲ್ಲಿ ಬಲಿಷ್ಠವಾಗಿ ರಾಷ್ಟ್ರವ್ಯಾಪಿಯಾಗಿ ಬೆಳೆದು ನಿಂತಿದೆ ಎಂದರು.

ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ತು ಸದಸ್ಯ ಡಿ.ಎಸ್‌. ಅರುಣ್‌, ಪ್ರಮುಖರಾದ ಡಾ.ಧನಂಜಯ ಸರ್ಜಿ, ಎಸ್‌.ದತ್ತಾತ್ರಿ, ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಇತರರು ಹಾಜರಿದ್ದರು.

ತೆರೆದ ಆಟೋದಲ್ಲಿ ಬಂದ ಬಿಎಸ್‌ವೈ, ಸ್ವಾಮೀಜಿ

ನಗರದ ಫ್ರೀಡಂ ಪಾರ್ಕ್‌ನಲ್ಲಿ ಇದೇ ಮೊದಲ ಬಾರಿಗೆ ಬೃಹತ್‌ ಸ್ವದೇಶಿ ಮೇಳ ಆಯೋಜಿಸಲಾಗಿದೆ. ಡಿ.6 ರಿಂದ 10ರವರೆಗೆ ಮೇಳ ನಡೆಯಲಿದೆ. ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ದೇಶೀಯ ವಸ್ತುಗಳ ಪರಿಚಯ ಮತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸಲು ಆಯೋಜಿಸಿದ್ದ ಮೇಳಕ್ಕೆ ಬುಧವಾರ ಚರಕ ತಿರುಗಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಮೇಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತೆರೆದ ಆಟೋದಲ್ಲಿ ಬಂದಿದ್ದು ಗಮನ ಸೆಳೆಯಿತು.

ಗ್ಯಾರಂಟಿಗಳ ಕಾಂಗ್ರೆಸ್‌ಗೆ ಮತದಾರರಿಂದ ತಪರಾಕಿ: ಶಾಸಕ ಆರಗ ಜ್ಞಾನೇಂದ್ರ

270 ಮಳಿಗೆಗಳು

ಈ ಮೇಳದಲ್ಲಿ 270 ಸ್ವದೇಶಿ ಮಳಿಗೆಗಳು ಭಾಗವಹಿಸಿವೆ. ವೈವಿಧ್ಯಮಯ ದೇಶೀಯ ಆಹಾರಗಳು, ದೇಶೀಯ ಕ್ರೀಡೆಗಳು, ಜಾನಪದ ಕಲಾ ವೈಭವ, ಯಕ್ಷಗಾನ, ಬಾನ್ಸುರಿ ವಾದನ, ನೃತ್ಯ ರೂಪಕ, ಜಾದೂ ಪ್ರದರ್ಶನ ಸೇರಿದಂತೆ 16ಕ್ಕೂ ಹೆಚ್ಚು ಶಿಬಿರ ಹಾಗೂ ತರಬೇತಿ ಕಾರ್ಯಾಗಾರಗಳು ನಡೆಯಲಿವೆ.

ಜಾನಪದ ಕಲಾ ವೈಭವ

ಬುಧವಾರ ಜಾನಪದ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭದ್ರಾವತಿ ತಾಲೂಕು ಎಮ್ಮೆಹಟ್ಟಿಯ ಶ್ರೀ ಗಜಾನನ ಡೊಳ್ಳು ಮತ್ತು ಸಾಂಸ್ಕೃತಿಕ ಕಲಾ ತಂಡ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾನಪದ ಕಲಾ ತಂಡ, ವೀರಭದ್ರ ಕುಣಿತ ಮತ್ತು ವೀರಗಾಸೆ ಪ್ರದರ್ಶನ ನಡೆಯಿತು.

Latest Videos
Follow Us:
Download App:
  • android
  • ios