ಧಾರವಾಡ: ಸ್ವಾತಂತ್ರ್ಯದಿನ ಕನ್ನಡ ಸಾಹಿತ್ಯ ಪ್ರೇಮಿಗಳ ಕೈಗೆ ನಾಲ್ಕು ಪುಸ್ತಕ
ಧಾರವಾಡದ ಮತ್ತು ಕನ್ನಡ ಪುಸ್ತಕ ಪ್ರೇಮಿಗಳಿಗೆ ಸ್ವಾತಂತ್ರ್ಯದ ದಿನ ಮತ್ತೊಂದು ಸಾಹಿತ್ಯದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಅವಕಾಶ ಸಿಕ್ಕಿದೆ. ಪುಸ್ತಕಗಳ ಜತೆ ಇ-ಪುಸ್ತಕ ಸಹ ಬಿಡುಗಡೆಯಾಗುತ್ತಿದೆ.
ಧಾರವಾಡ[ಆ. 13] ಧಾರವಾಡದ ಲಕ್ಷ್ಮೀ ಭವನ ಸುಭಾಸ ರಸ್ತೆಯ ಮನೋಹರ ಗ್ರಂಥ ಮಾಲಾ ಪುಸ್ತಕ ಮತ್ತು ಇ-ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಆಗಸ್ಟ್ 15ರಂದು ಆಯೋಜಿಸಿದೆ.
ಧಾರವಾಡ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಗಸ್ಟ್ 15, ಸ್ವಾತಂತ್ರ್ಯೋತ್ಸವದ ದಿನ ಬೆಳಗ್ಗೆ 11 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಒಂದೇ ದಿನ ನಾಲ್ಕು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಕಮಲಾ ಹೆಮ್ಮಿಗೆ ಅವರ ಕೇರಳ ‘ಕಾಂತಾಸಮ್ಮಿತ’[ಮಲೆಯಾಳಂ ಕತೆಗಳು], ಡಾ.ಡಿ.ವಿ.ಗುರುಪ್ರಸಾದ್ ಅವರ ‘ಸಾವಿನ ಸೆರಗಲ್ಲಿ’ [ಕತೆಗಳು] ಲೋಹಿತ್ ನಾಯ್ಕರ ‘ಉಮೇದುವಾರರು’ [ರಾಜಕೀಯ ಕಾದಂಬರಿ] ಮತ್ತು ಡಾ. ಗುರುರಾಜ ಕರಜಗಿ ಅವರ ‘ಓ ಹೆನ್ರಿ ಕತೆಗಳು’ ಪುಸ್ತಕ ಲೋಕಾರ್ಪಣೆಯಾಗಲಿದೆ.
ಕನ್ನಡಪ್ರಭ ದಿನಪತ್ರಿಕೆ ಪುರವಣಿ ಸಂಪಾದಕ, ಲೇಖಕ ಜೋಗಿ ಪುಸ್ತಕಗಳ ಲೋಕಾರ್ಪಣೆ ಮಾಡಿದರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನಂದ ಝುಂಜರವಾಡ ವಹಿಸಲಿದ್ದಾರೆ.
ಕಾರ್ಯಕ್ರಮದ ವ್ಯವಸ್ಥಾಪಕ ಸಮೀರ ಜೋಶಿ ಮತ್ತು ಸಂಪಾದಕ-ಪ್ರಕಾಶಕ ರಮಾಕಾಂತ ಜೋಶಿ ಸರ್ವರಿಗೂ ಸ್ವಾಗತ ಕೋರಿದ್ದಾರೆ. ಚಂದಾದಾರರು ಕಾರ್ಯಕ್ರಮದ ನಂತರ ತಮ್ಮ ಪುಸ್ತಕ ತೆಗೆದುಕೊಂಡು ಹೋಗಲು ತಿಳಿಸಲಾಗಿದೆ.
ಗೂಗಲ್ ಮಾರ್ಗಸೂಚಿ ಇಲ್ಲಿದೆ