ರಾಜ್ಯದಲ್ಲಿ ಬಾದಾಮಿ, ಹಂಪಿ, ಧಾರವಾಡ, ಬೆಂಗಳೂರು, ಹೊನ್ನಾವರ ಸೇರಿದಂತೆ ಹಲವೆಡೆ ಕಂಡು ಬಂದ ಹೆಚ್ಚಿನ ಉಷ್ಣಾಂಶ, ಮನೆಯಿಂದ ಹೊರಬಾರದೇ ರಸ್ತೆಗಳಲ್ಲಿ ವಿರಳವಾಗುತ್ತಿರೋ ಜನ, ವಹಿವಾಟುಗಳು ಸಹ ವಿರಳ, ಬಿಸಿಲ ಬೇಗೆಯಿಂದ ಕಂಗಾಲಾಗಿರೋ ಜನ, ಮಕ್ಕಳು, ವಯೋವೃದ್ಧರು ಹೊರಗಡೆ ಬರಲು ಹಿಂದೇಟು. 

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

Add Asianetnews Kannada as a Preferred SourcegooglePreferred

ಬಾಗಲಕೋಟೆ(ಫೆ.23): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚಾಗುತ್ತಿರುವುದರ ಮಧ್ಯೆಯೇ ಅವಧಿಗೆ ಮುನ್ನವೇ ಉಷ್ಣಾಂಶ ಹೆಚ್ಚಾಗಿದ್ದು ಕಂಡು ಬಂದಿದೆ. ಅದ್ರಲ್ಲೂ ರಾಜ್ಯದಲ್ಲಿಯೇ ಬಾಗಲಕೋಟೆ ಜಿಲ್ಲೆಯಲ್ಲಿ ಅಂದ್ರೆ 36 ಡಿಗ್ರಿ ಸೆಲ್ಸಿಯಸ್​ ಕಂಡು ಬಂದಿದ್ದು, ಇದ್ರಿಂದ ಜಿಲ್ಲೆಯ ಜನ್ರು ಬೇಸಿಗೆ ಹೇಗಪ್ಪಾ ಕಳಿಯೋದು ಅನ್ನೋ ಚಿಂತೆಯಲ್ಲಿದ್ದಾರೆ. ಇವುಗಳ ಮಧ್ಯೆ ಜನ್ರಲ್ಲಿ ಆತಂಕವೂ ಸಹ ಶುರುವಾಗಿದೆ. ಈ ಕುರಿತ ವರದಿ ಇಲ್ಲಿದೆ...

ಹೌದು, ಒಂದೆಡೆ ಸುಡುನೆತ್ತಿಯಲ್ಲಿ ಪ್ರಖರವಾಗಿ ಕಂಡು ಬರುತ್ತಿರೋ ಸೂರ್ಯ, ಮತ್ತೊಂದೆಡೆ ಅತಿಯಾದ ಬಿಸಿಲ ಬೇಗೆಯಿಂದ ರಸ್ತೆಯಲ್ಲಿ ವಿರಳವಾಗಿರೋ ಜನ್ರು, ಇವುಗಳ ಮಧ್ಯೆ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿರೋ ಜನ, ಅಂದಹಾಗೆ ನಿತ್ಯ ಇಂತಹವೊಂದು ದೃಶ್ಯ ಕಂಡು ಬರುತ್ತಿರೋದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ಹೌದು, ರಾಜ್ಯದಲ್ಲಿ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇವುಗಳ ಮಧ್ಯೆ ರಾಜ್ಯದಲ್ಲಿ ಅವಧಿಗೆ ಮುನ್ನವೇ ಉಷ್ಣಾಂಶದಲ್ಲಿ ಹೆಚ್ಚಳ ಕಂಡು ಬಂದಿರೋದು ಇದೀಗ ಆತಂಕಕ್ಕೆ ಕಾರಣವಾಗಿದೆ. ಸಧ್ಯ ಫೆಬ್ರುವರಿ ತಿಂಗಳಾಗಿದ್ದು, ಈಗಲೇ 36 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಕಂಡು ಬಂದಿದೆ. ಇದನ್ನ ಹೊರತುಪಡಿಸಿದ್ರೆ ಬೆಂಗಳೂರು ಎಚ್​ಎಎಲ್ ವಿಮಾನ ನಿಲ್ದಾಣ, ಹಂಪಿ, ಧಾರವಾಡ, ಹೊನ್ನಾವರ ಸೇರಿದಂತೆ ಹಲವೆಡೆ ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್​​ನಷ್ಟು ಉಷ್ಣಾಂಶ ಹೆಚ್ಚು ಕಂಡು ಬಂದಿದೆ. ಇನ್ನು ಈ ಬಾರಿ ಮಳೆ ಕೊರತೆಯ ಹಿನ್ನೆಲೆಯಲ್ಲಿ ತೇವಾಂಶದಲ್ಲಿ ಕುಸಿತ ಕಂಡು ಬಂದು ಬಿಸಿ ಹವೆಯ ಪ್ರಮಾಣ ಏರಿಕೆಯಾಗಿದೆ. ಇದ್ರಿಂದ ಫೆಬ್ರುವರಿ ತಿಂಗಳಲ್ಲೇ ಈ ಪರಿಸ್ಥಿತಿಯಾದ್ರೆ ಇನ್ಮುಂದೆ ಮಾರ್ಚ, ಎಪ್ರಿಲ್​ ತಿಂಗಳಲ್ಲಿ ಪರಿಸ್ಥಿತಿ ಏನು ಅನ್ನೋ ಆತಂಕ ಇದೀಗ ಬಾಗಲಕೋಟೆ ಜಿಲ್ಲೆಯ ಜನರದ್ದಾಗಿದೆ ಅಂತಾರೆ ಸ್ಥಳೀಯರಾದ ಮೇಘಾ ಪತ್ತಾರ.

ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆದ ಮಠದ ಭಕ್ತರು!

ಕುಸಿದ ತೇವಾಂಶ, ಹೆಚ್ಚಿದ ಉಷ್ಣಾಂಶ, ಮಕ್ಕಳು, ವೃದ್ದರಿಗೆ ತಪ್ಪದ ಸಂಕಷ್ಟ....

ಇನ್ನು ರಾಜ್ಯದಲ್ಲಿಯೇ ಅತಿಹೆಚ್ಚಿನ ಉಷ್ಣಾಂಶ ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಕಂಡು ಬಂದಿದ್ದು, ಇತ್ತ ಜನ್ರು ಸಹ ಬೆಳಗಿನ 10 ಗಂಟೆ ಮೇಲಾದ್ರೆ ಹೊರ ಬರೋದಕ್ಕೂ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ಉಂಟಾಗಿದೆ. ಮಕ್ಕಳು, ವಯೋವೃದ್ದರು ಮನೆಯಿಂದ ಹೊರ ಬರೋದು ದುಸ್ತರವಾಗಿದೆ. ಇವುಗಳ ಮಧ್ಯೆ ಜನರ ಓಡಾಟ ಕಡಿಮೆಯಾಗುತ್ತಿರೋದ್ರಿಂದ ವ್ಯಾಪಾರ ವಹಿವಾಟುಗಳು ಸಹ ಕಡಿಮೆಯಾಗುತ್ತಿವೆ. ಈ ಬಾರಿ ಮೊದಲೇ ಮಳೆ ವಿರಳವಾಗಿ ಬೆಳೆಯೂ ಬಾರದೇ ರೈತರು ಸಹ ಸಂಕಷ್ಟ ಎದುರಿಸುವಂತಾಗಿದ್ದು, ಇವುಗಳ ಮಧ್ಯೆ ತೇವಾಂಶ ಕುಸಿತಗೊಂಡು ಉಷ್ಣಾಂಶ ಹೆಚ್ಚಾಗಿ ಬೋರವೆಲ್​​ಗಳು ಸಹ ಬತ್ತಿ ಹೋಗುತ್ತಿವೆ. ಇದ್ರಿಂದ ಕೆಲವಡೆ ನೀರಿನ ಸಮಸ್ಯೆ ಉದ್ಭವಿಸೋ ಸಾಧ್ಯತೆ ಇದ್ದು, ಜಿಲ್ಲಾಡಳಿತ ಈ ಸಂಭಂದ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಜನರ ಆರೋಗ್ಯ ದೃಷ್ಠಿಯಿಂದ ಮುಂಜಾಗೃತೆ ವಹಿಸಲು ಕ್ರಮಕೈಗೊಳ್ಳುವಂತಾಗಬೇಕು ಅಂತಾರೆ ಬಾಗಲಕೋಟೆ ನಿವಾಸಿ ಆತ್ಮಾರಾಮ್​​.

ಒಟ್ಟಿನಲ್ಲಿ ಫೆಬ್ರುವರಿ ತಿಂಗಳಲ್ಲಿ ರಾಜ್ಯದಲ್ಲಿಯೇ ವಾಡಿಕೆಗಿಂತ ಉಷ್ಣಾಂಶ ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚು ಕಂಡು ಬಂದಿದ್ದು, ಇಷ್ಟಕ್ಕೂ ಇನ್ಮುಂದೆ ಮಾರ್ಚ, ಎಪ್ರಿಲ್​ ಬೇಸಿಗೆ ದಿನಗಳನ್ನ ಕಳೆಯೋದು ಹೇಗೆ ಅನ್ನೋ ಆತಂಕ ಶುರುವಾಗಿದ್ದಂತು ಸುಳ್ಳಲ್ಲ.