ಕ್ಷೇತ್ರದಲ್ಲಿ ಕಳೆದ ನಾಲ್ಕೂವರೆ ವರ್ಷದಿಂದ ಯಾವುದೇ ಜನಪರ ಕೆಲಸಗಳು ಆಗಿಲ್ಲ. ಹದಗೆಟ್ಟರಸ್ತೆಗಳು, ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಸಾಕಷ್ಟುಬೇಸತ್ತಿದ್ದಾರೆ ಎಂದು ಮಾಜಿ ಶಾಸಕ ಎನ್‌.ಚಲುವರಾಯಸ್ವಾಮಿ ದೂರಿದರು.

ನಾಗಮಂಗಲ (ಡಿ.04): ಕ್ಷೇತ್ರದಲ್ಲಿ ಕಳೆದ ನಾಲ್ಕೂವರೆ ವರ್ಷದಿಂದ ಯಾವುದೇ ಜನಪರ ಕೆಲಸಗಳು ಆಗಿಲ್ಲ. ಹದಗೆಟ್ಟ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಸಾಕಷ್ಟು ಬೇಸತ್ತಿದ್ದಾರೆ ಎಂದು ಮಾಜಿ ಶಾಸಕ ಎನ್‌.ಚಲುವರಾಯಸ್ವಾಮಿ ದೂರಿದರು. ತಾಲೂಕಿನ ದೊಡ್ಡಾಬಾಲ ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಯಾರದ್ದೋ ಅಭಿಮಾನಕ್ಕೆ ಮಣಿದು ನನ್ನನ್ನು ಸೋಲಿಸಿದಿರಿ. ಗೆದ್ದವರಿಂದ ಕ್ಷೇತ್ರಕ್ಕೆ ಏನಾದರು ಪ್ರಯೋಜನವಾಗಿದೆಯೇ. ತಾಲೂಕಿನ ಹಲವು ರಸ್ತೆಗಳು ಗುಂಡಿ ಬಿದ್ದಿವೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ. 

Add Asianetnews Kannada as a Preferred SourcegooglePreferred

ಶ್ರೀಕ್ಷೇತ್ರ ಆದಿಚುಂಚನಗಿರಿ ಸೇರಿದಂತೆ 138 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂ ಅನುಷ್ಟಾನಗೊಂಡಿಲ್ಲ ಎಂದು ಆರೋಪಿಸಿದರು. ತಾಲೂಕಿನ ಹೊನ್ನಾವರಕ್ಕೆ ಹೋಗುವ ರಸ್ತೆ ದುರಸ್ತಿಯಾಗಿಲ್ಲ, ಬಿಂಡಿಗನವಿಲೆಯಿಂದ ಗೊಂಡೇನಹಳ್ಳಿ ಮಾರ್ಗವಾಗಿ ಬೆಳ್ಳೂರಿಗೆ ಹೋಗುವ ರಸ್ತೆ ಕಿತ್ತುಹೋಗಿದೆ ಪಿ.ನೇರಲಕೆರೆಯಿಂದ ಗೋವಿಂದಘಟ್ಟಕ್ಕೆ ಹೋಗುವ ರಸ್ತೆ ಹಾಳಾಗಿದೆ. ಪಾಲಗ್ರಾಹರದಿಂದ ಹರದನಹಳ್ಳಿ ರಸ್ತೆ, ಮೈಲಾರಪಟ್ಟಣದ ರಸ್ತೆ ಸ್ಥಿತಿ ಚಿಂಚಾಜನಕವಾಗಿದೆ. ಬಿಂಡೇನಹಳ್ಳಿಯಿಂದ ಭೀಮನಹಳ್ಳಿ ರಸ್ತೆ ಗುಂಡಿಬಿದ್ದಿದೆ ಎಂದು ಕಿಡಿಕಾರಿದರು.

ಜಾಮಿಯಾ ಮಸೀದಿಗೆ ಬಿಗಿ ಭದ್ರತೆ: ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ

ತಾಲೂಕಿನ ಹಲವು ಹಳ್ಳಿಗಳ ಜನರು ವಾಹನಗಳಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಮುಂದಿನ ಚುನಾವಣೆಯಲ್ಲಿ ನನ್ನನ್ನ ಗೆಲ್ಲಿಸಿ ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ 50 ವರ್ಷಕ್ಕಾಗುವಷ್ಟುಅಭಿವೃದ್ದಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು. 123 ಸ್ಥಾನ ಗೆದ್ದರೇ ಸ್ತ್ರೀ ಶಕ್ತಿ ಸಾಲಮನ್ನಾ, ದಲಿತರು ಮತ್ತು ಮುಸ್ಲಿಂರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. 123ಸ್ಥಾನ ಗೆಲ್ಲಲು ಅವರಿಗೆ ಸಾಧ್ಯವಿಲ್ಲ ಎಂಬುದು ಗೊತ್ತಿದ್ದೆ ಈ ಭರವಸೆ ನೀಡುತ್ತಿದ್ದಾರೆ. ನಾವು ಎಷ್ಟೇ ಸ್ಥಾನಗಳಲ್ಲಿ ಗೆಲ್ಲಲಿ ಯಾವುದೇ ರೀತಿಯಲ್ಲಾದರೂ ಮುಖ್ಯಮಂತ್ರಿಯಾಗಲಿ, ಕಾಂಗ್ರೆಸ್‌ ಅಥವಾ ಬಿಜೆಪಿಯೊಂದಿಗೆ ಸೇರಿಕೊಂಡು ಸರ್ಕಾರ ಮಾಡಿದರೂ ದಲಿತರು ಅಥವಾ ಮುಸ್ಲಿಂರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಲಿ ನೋಡೋಣ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಸವಾಲು ಹಾಕಿದರು.

Mandya: ಕುಮಾರಸ್ವಾಮಿ ಹೇಳಿಕೆ ಓಟಿನ ರಾಜಕಾರಣ: ಎಚ್‌.ಸಿ.ಮಹದೇವಪ್ಪ

ಇದೇ ವೇಳೆ ಗ್ರಾಪಂ ಮಟ್ಟದ ಕಾರ್ಯಕರ್ತರ ಸಭೆ ಹಿನ್ನಲೆಯಲ್ಲಿ ದೊಡ್ಡಬಾಲ ಗ್ರಾಪಂವ್ಯಾಪ್ತಿಯ ಕೈ ಪಕ್ಷದ ಕಾರ್ಯಕರ್ತರು ಆಯೋಜಿಸಿದ್ದ ಬೈಕ್‌ ರಾರ‍ಯಲಿಗೆ ಮಾಜಿ ಸಚಿವ ಚಲುವರಾಯಸ್ವಾಮಿ ಸ್ವತಃ ಸ್ಕೂಟರ್‌ ಚಾಲನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಜೆ.ರಾಜೇಶ್‌, ಮಾಜಿ ಅಧ್ಯಕ್ಷರಾದ ಎಚ್‌.ಟಿ.ಕೃಷ್ಣೇಗೌಡ, ಎಂ.ಪ್ರಸನ್ನ, ಮುಖಂಡರಾದ ಸುನಿಲ್‌ ಲಕ್ಷ್ಮೀಕಾಂತ್‌, ಆರ್‌.ಕೃಷ್ಣೇಗೌಡ, ಎಸ್‌.ಬಿ.ರಮೇಶ್‌, ಗ್ರಾಪಂ ಸದಸ್ಯ ಕುಮಾರ್‌, ಜಗದೀಶ್‌, ಚಿಟ್ಟನಹಳ್ಳಿ ರಾಜು, ಸಂಪತ್‌, ಪೀಕಾರ್ಡ್‌ ಅಧ್ಯಕ್ಷ ಸಿ.ಜೆ.ಮಂಜು, ವೆಂಕಟೇಶ್‌, ಸಂಪತ್‌ಕುಮಾರ್‌, ದೊಡ್ಡಾಬಾಲ ಗ್ರಾಮದ ಮುಖಂಡರು ಇದ್ದರು.