ನಾನು ಕಾಂಗ್ರೆಸಿಗೆ ಬೆಂಬಲ ನೀಡುತ್ತಿದ್ದೇನೆ ಎನ್ನುವುದು ಊಹಾಪೋಹ ಅಷ್ಟೇ ಎಂದು ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ. ಹಾಗಾದ್ರೆ ಅವರ ಮುಂದಿನ ನಡೆ ಏನು?

ಸೂಲಿಬೆಲೆ [ಡಿ.14]: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಹತ್ತಿರ ಆಶೀರ್ವಾದ ಪಡೆಯಲು ಮಾತ್ರ ಭೇಟಿಯಾಗಿದಷ್ಟೇ. ಇವರ ಭೇಟಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗ್ತೀನಿ ಎನ್ನುವ ಸುದ್ದಿಗಳು ಕೇವಲ ಊಹಾಪೋಹ ಅಷ್ಟೇ ಎಂದು ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯಲ್ಲಿ ಶುಕ್ರವಾರ ನಾನಾ ದೇಗುಲ, ಮಸೀದಿಗಳಿಗೆ ಭೇಟಿ ನೀಡಿ ಮತದಾರರಿಗೆ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡಿದ ಅವರು, ರಮೇಶ್‌ ಕುಮಾರ್‌ ಅವರು ನಮ್ಮ ಕುಟುಂಬದ ಹಿತೈಷಿಗಳು. ನಾನು ಚಿಕ್ಕ ಮಗುವಾಗಿದ್ದಾಗ ಎತ್ತಿ ಆಡಿಸಿದ್ದರು. ನಮ್ಮ ತಾತ ಚನ್ನಬೈರೇಗೌಡರ ಕಾಲದಿಂದಲೂ ನಮ್ಮ ಕುಟುಂಬದ ಹಿತೈಷಿಗಳಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಅವರ ಆಶೀರ್ವಾದ ಪಡೆಯಲು ಸೌರ್ಜನ್ಯಕರವಾದ ಭೇಟಿಯಾಗಿದ್ದೆನಷ್ಟೇ ವಿನಃ ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿಲ್ಲ.

ಶರತ್‌ ಬಚ್ಚೇಗೌಡ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಭೇಟಿ: ರಾಜಕೀಯದಲ್ಲಿ ಸಂಚಲನ!

ರಮೇಶ್‌ ಕುಮಾರ್‌ ನನಗೆ ಶುಭ ಕೋರಿ ಸದನದ ನಡವಳಿಕೆಗಳು, ನಿಯಮಗಳು, ಗಾಂಭೀರ್ಯ ಕಾಪಾಡಿಕೊಳ್ಳುವುದು, ಸಮಯ ಪರಿಪಾಲನೆ ಮತ್ತಿತರ ವಿಚಾರಗಳ ಬಗ್ಗೆ ತಿಳುವಳಿಕೆ ನೀಡಿದರು.

ಅಲ್ಲದೆ ಅಟಲ್‌ ಜೀ ಬರೆದಿರುವ ಪುಸ್ತಕದಲ್ಲಿ ಅಂಶಗಳನ್ನು ಆಳವಡಿಸಿಕೊಂಡು ಸದನದ ಮೌಲ್ಯ ಎತ್ತಿ ಹಿಡಿಯುವಂತೆ ಕಿವಿಮಾತು ಹೇಳಿದರು.

ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ನಿರ್ಧರಿಸಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕ್ಷೇತ್ರದ ಮತದಾರರೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ತಾಪಂ ಮಾಜಿ ಅಧ್ಯಕ್ಷ ರಾಜಶೇಖರ್‌ ಗೌಡ ಸೇರಿದಂತೆ ಆನೇಕ ಮುಖಂಡರು ಹಾಜರಿದ್ದರು.