ಹೆಣ್ಣೂರು ರಸ್ತೆಯಲ್ಲಿ ನಿರ್ಮಾಣ ಹಂತದ ಪಿಲ್ಲರ್‌ ಕುಸಿದು ತಾಯಿ ಮಗ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಬಿಎಂಆರ್‌ಸಿಎಲ್‌ಗೆ ನೀಡುವುದಾಗಿ ಭಾರತೀಯ ವಿಜ್ಞಾನ ಸಂಸ್ಥೆ ತಿಳಿಸಿದೆ. 

ಬೆಂಗಳೂರು (ಜ.18): ಹೆಣ್ಣೂರು ರಸ್ತೆಯಲ್ಲಿ ನಿರ್ಮಾಣ ಹಂತದ ಪಿಲ್ಲರ್‌ ಕುಸಿದು ತಾಯಿ ಮಗ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಬಿಎಂಆರ್‌ಸಿಎಲ್‌ಗೆ ನೀಡುವುದಾಗಿ ಭಾರತೀಯ ವಿಜ್ಞಾನ ಸಂಸ್ಥೆ ತಿಳಿಸಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಐಐಎಸ್‌ಸಿ ತಜ್ಞ ಚಂದ್ರಕಿಶನ್‌, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ದುರಂತದ ಹತ್ತು ದಿನಗಳ ಮೊದಲಿನ ದಾಖಲೆಗಳನ್ನು ಪಡೆದಿದ್ದೇವೆ. ಜತೆಗೆ ಪಿಲ್ಲರ್‌ಗೆ ಬಳಸಲಾದ ಕಬ್ಬಿಣ, ಸ್ಟೀಲನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಶೇ.80ರಷ್ಟು ತಾಂತ್ರಿಕ ತನಿಖೆ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. 

ಜತೆಗೆ ಬಲವರ್ಧನೆ ಇಲ್ಲದೆ 18 ಅಡಿ ಎತ್ತರದಷ್ಟು ಕಬ್ಬಿಣ, ಸ್ಟೀಲ್‌ ಸ್ಟ್ರಕ್ಚರನ್ನು ನಿಲ್ಲಿಸಿದ್ದೇ ಉರುಳಲು ಕಾರಣ ಎಂಬುದು ನಮ್ಮ ಅಭಿಪ್ರಾಯ ಎಂದು ತಿಳಿಸಿದರು. ವರದಿ ಪಡೆದ ಬಳಿಕ ನೀಲಿ ಮಾರ್ಗ ಸಿಲ್ಕ್‌ ಬೋರ್ಡ್‌-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿ ಗುತ್ತಿಗೆ ಪಡೆದಿದ್ದ ಎನ್‌ಸಿಸಿ ಹಾಗೂ ಬೇಜವಾಬ್ದಾರಿ ಪ್ರದರ್ಶಿಸಿದ ಅಧಿಕಾರಿಗಳ ವಿರುದ್ಧ ಬಿಎಂಆರ್‌ಸಿಎಲ್‌ ಯಾವ ಕ್ರಮ ಜರುಗಿಸಲಿದೆ ಎಂಬುದು ಕಾದು ನೋಡಬೇಕಿದೆ.

Namma Metro ಪಿಲ್ಲರ್‌ ದುರಂತದ ಕಾರಣ ಇನ್ನೂ ನಿಗೂಢ!

ಗುಣಮಟ್ಟದ ತಳಪಾಯ ಹಾಕದೇ ಎಂಜಿನಿಯ​ರ್‍ಸ್ ನಿರ್ಲಕ್ಷ್ಯ: ಇತ್ತೀಚೆಗೆ ನಗರದಲ್ಲಿ ನಡೆದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿದು ತಾಯಿ ಮತ್ತು ಮಗು ಸಾವಿನ ಪ್ರಕರಣದಲ್ಲಿ ಇಂಜಿನಿಯರ್‌ಗಳು ಪಿಲ್ಲರ್‌ಗೆ ಸಮರ್ಪಕ ಸಪೋರ್ಟ್‌ ನೀಡದಿರುವುದೇ ಪಿಲ್ಲರ್‌ ಕುಸಿಯಲು ಕಾರಣ ಎಂದು ಹೈದರಾಬಾದ್‌ ಐಐಟಿ ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. 

ಪ್ರಕರಣ ಸಂಬಂಧ ಐಐಟಿ ತಜ್ಞರ ತಂಡ ಘಟನಾಸ್ಥಳ ಪರಿಶೀಲಿಸಿ ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ನಗರ ಪೊಲೀಸ್‌ ಆಯುಕ್ತರಿಗೆ ನೀಡಿದ್ದಾರೆ. ಈ ವರದಿಯಲ್ಲಿ ಪಿಲ್ಲರ್‌ ನಿರ್ಮಾಣದ ವೇಳೆ ಪಿಲ್ಲರ್‌ಗೆ ಸರಿಯಾದ ಸಪೋರ್ಟ್‌ ನೀಡದಿರುವುದೇ ಪಿಲ್ಲರ್‌ ಕುಸಿಯಲು ಕಾರಣ ಎಂದು ತಿಳಿಸಿದ್ದಾರೆ. ಪಿಲ್ಲರ್‌ ಬೇಸ್‌ಮೆಂಟ್‌ ಗಟ್ಟಿಮಾಡಿಕೊಂಡು ಬಳಿಕ ಎತ್ತರಕ್ಕೆ ಕಂಬಿ ಕಟ್ಟಬೇಕು. 

ಬೆಂಗಳೂರು: ಮೆಟ್ರೋದ ಮತ್ತೊಂದು ಭಾರೀ ಅವಾಂತರ..!

ಆದರೆ, ಇಲ್ಲಿ ಬೇಸ್‌ಮೆಂಟ್‌ ಗಟ್ಟಿಯಿಲ್ಲ. ಇನ್ನು ಆ ಪಿಲ್ಲರ್‌ಗೆ ಸಮರ್ಪಕ ಸಪೋರ್ಟ್‌ ನೀಡಿಲ್ಲ. ಹೀಗಾಗಿ ಭಾರ ಹೆಚ್ಚಾಗಿ ಪಿಲ್ಲರ್‌ ಕುಸಿದೆ. ಇದರಲ್ಲಿ ಎಂಜಿನಿಯರ್‌ಗಳ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ಜ.10ಕ್ಕೆ ಕಲ್ಯಾಣ ನಗರದಿಂದ ಎಚ್‌ಬಿಆರ್‌ ಲೇಔಟ್‌ನಲ್ಲಿನ ಪಿಲ್ಲರ್‌ ಬಿದ್ದು ಸಾಫ್‌್ಟವೇರ್‌ ಎಂಜಿನಿಯರ್‌ ತೇಜಸ್ವಿನಿ ಮತ್ತು ಆಕೆಯ ಎರಡೂವರೆ ವರ್ಷದ ಪುತ್ರ ವಿಹಾನ್‌ ಮೃತಪಟ್ಟಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮೆಟ್ರೋ ಕಾಮಗಾರಿ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೈದರಾಬಾದ್‌ ಐಐಟಿ ತಜ್ಞರಿಗೆ ಮನವಿ ಮಾಡಿದ್ದರು.