ಔರಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಸಂಚಾರ, ಕಾಮಗಾರಿ ಕಳಪೆಯಾಗಿದ್ದೆ ಆದಲ್ಲಿ ತಮ್ಮ ಅಧೀನಕ್ಕೆ ಪಡೆಯಬಾರದು: ಸಚಿವ ಪ್ರಭು ಚವ್ಹಾಣ್‌ ಕರೆ

ಔರಾದ್‌(ನ.18): ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ಗ್ರಾಮ ಸಂಚಾರ ಕೈಗೊಂಡು ಜನರ ಆಶಯದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಕಳಪೆಯಾದರೆ ಸಂಬಂಧಪಟ್ಟಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಎಚ್ಚರಿಸಿದರು. ತಾಲೂಕಿನ ಜಕನಾಳ, ನಂದ್ಯಾಳ, ಮಾನೂರ (ಕೆ), ನಾಗಮಾರಪಳ್ಳಿ, ಕರಂಜಿ (ಬಿ), ಕರಂಜಿ (ಕೆ), ಇಟಗ್ಯಾಳ, ಖಾಶೆಂಪೂರ ಹಾಗೂ ಯನಗುಂದಾದಲ್ಲಿ ಗ್ರಾಮ ಸಂಚಾರ ಕೈಗೊಂಡು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

ಜನರಿಗೆ ಅತ್ಯವಶ್ಯಕವಾಗಿರುವ ಕುಡಿಯುವ ನೀರು, ರಸ್ತೆ, ಚರಂಡಿ, ಶಾಲಾ ಕಾಲೇಜು ಕಟ್ಟಡ, ಅಂಗನವಾಡಿ ಕಟ್ಟಡ, ಆಸ್ಪತ್ರೆ ಕಟ್ಟಡ ಹೀಗೆ ಕೋಟ್ಯಂತರ ರು. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆಲಸ ವೀಕ್ಷಿಸಬೇಕು. ಕಾಮಗಾರಿ ಸರಿಯಾಗದೇ ಇದ್ದಲ್ಲಿ ಯಾವುದೇ ಕಾರಣಕ್ಕೂ ತಮ್ಮ ಅಧೀನಕ್ಕೆ ಪಡೆಯಬಾರದು ಎಂದು ಹೇಳಿದರು.

ಹುಮನಾಬಾದ್‌: ಆ್ಯಸಿಡ್‌ ವಾಸನೆಗೆ ಜಾರ್ಖಾಂಡ್‌ ಮೂಲದ ವ್ಯಕ್ತಿ ಸಾವು

ಗ್ರಾಮಸ್ಥರು ಸಹ ತಮ್ಮ ಬಡಾವಣೆಯಲ್ಲಿ ನಡೆಯುವ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದೆನಿಸಿದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಜನಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಎಲ್ಲ ಯೋಜನೆಗಳು ಪ್ರತಿಯೊಂದು ಗ್ರಾಮಕ್ಕೂ ಮತ್ತು ಅರ್ಹರಿಗೆ ತಲುಪಬೇಕು ಎಂಬುವದು ತಮ್ಮ ಸದಾಶಯವಾಗಿದೆ. ಅದರಂತೆ ತಾಲೂಕಿನ ಎಲ್ಲ ಅಧಿಕಾರಿಗಳೊಂದಿಗೆ ಗ್ರಾಮ ಸಂಚಾರ ನಡೆಸುತ್ತಿದ್ದೇನೆ. ಪ್ರತಿ ಗ್ರಾಮದಿಂದ ಬರುವ ಎಲ್ಲ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಬಿಜೆಪಿ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಸಚಿವ ಪ್ರಭು ಚವ್ಹಾಣ್‌

ಮಾನೂರ (ಕೆ) ಸರ್ಕಾರಿ ಪ್ರಾಥಮಿಕ ಶಾಲೆ, ನಾಗಮಾರಪಳ್ಳಿ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಭೂಮಿ ಪೂಜೆ ನೆರವೇರಿಸಿದರು. ಗ್ರಾಮ ಸಂಚಾರ ನಡೆಸಿದ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ನಾಗಮ್ಮ ಸಂಗಪ್ಪ ಘಾಟೆ, ಔರಾದ್‌ (ಬಿ) ತಹಸೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಎಇಇ ವೀರಶೆಟ್ಟಿರಾಠೋಡ್‌, ಪಶುವೈದ್ಯಕೀಯ ಸೇವಾ ಇಲಾಖೆಯ ರಾಜಕುಮಾರ ಬಿರಾದಾರ, ಪ್ರಕಾಶ ಅಲ್ಮಾಜೆ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂಎಕೆ ಅನ್ಸಾರಿ, ಜಗನ್ನಾಥ ಮಜಗೆ, ರವಿ ಕಾರಬಾರಿ, ಮುಖಂಡರಾದ ವಸಂತ ಬಿರಾದಾರ, ಪ್ರತೀಕ ಚವ್ಹಾಣ್‌, ರಾಮಶೆಟ್ಟಿಪನ್ನಾಳೆ, ಪ್ರಕಾಶ ಅಲ್ಮಾಜೆ, ದಯಾನಂದ ಹಳ್ಳಿಖೇಡೆ, ಸಂತೋಷ ಪೋಕಲವಾರ, ವಿಠಲ ಘಾಟೆ, ದೊಂಡಿಭಾ ನರೋಟೆ, ಕೇರಬಾ ಪವಾರ, ಗುರು ಪಾಟೀಲ್‌, ಹಣಮಂತ ಸುರನಾರ, ರಾವಸಾಬ್‌ ಪಾಟೀಲ್‌, ಸೇರಿದಂತೆ ಇತರರು ಉಪಸ್ಥಿತರಿದ್ದರು.