ನೈಟ್ರಿಕ್‌ ಆ್ಯಸಿಡ್‌ ವೆಸ್ಟೇಜ್‌ ತುಂಬಿದ್ದ ಟ್ಯಾಂಕರ್‌ ಕ್ಲೀನ್‌ ಮಾಡುವ ವೇಳೆ ನಡೆದ ದುರ್ಘಟನೆ

ಹುಮನಾಬಾದ್‌(ನ.17): ತೆಲಂಗಾಣಾ ರಾಜ್ಯದ ಹೈದ್ರಾಬಾದ ಮೂಲದ ಭಾಸ್ಕರ್‌ ಎನ್ನುವವರಿಗೆ ಸೇರಿದ ಚುಟುಪಲ್‌ ಕಂಪನಿ ಗುತ್ತಿಗೆ ಆಧಾರದ ಮೇಲೆ ಪಡೆದು ಸ್ಪೆಂಟ್‌ ಸಾಲ್ವೆಂಟ್‌ ಎನ್ನುವ ನೈಟ್ರಿಕ್‌ ಆ್ಯಸಿಡ್‌ ವೆಸ್ಟೇಜ್‌ ಸಾಗಿಸುವ ಟ್ಯಾಂಕರ್‌ ಕ್ಲೀನ್‌ ಮಾಡುವ ಸಂದರ್ಭದಲ್ಲಿ ಅದರ ವಾಸನೆಯಿಂದ ಕಾರ್ಖಾನೆಯ ಆವರಣದಲ್ಲಿ ಸಾವನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.

ಜಾರ್ಖಂಡ್‌ ಮೂಲದ ಜುಗಲೇಶ (22) ಎನ್ನುವ ಯುವಕ ಸಾವನಪ್ಪಿದ್ದು, ಈ ಕುರಿತು ತಹಸೀಲ್ದಾರ್‌ ಡಾ. ಪ್ರದೀಪಕುಮಾರ ಹಿರೇಮಠ ಕಾರ್ಖಾನೆಗೆ ಭೇಟಿ ನೀಡಿ ಪರೀಶಿಲಿಸುವ ಮೂಲಕ ಮಾಹಿತಿ ಪಡೆದಿದ್ದಾರೆ. ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಸ್ಯೂಟಿಕ್‌ ಲ್ಯಾಬ್‌ ಪ್ರೈವೇಟ್‌ ಲಿಮಿಟೆಡ್‌ ಕಾರ್ಖಾನೆಯಲ್ಲಿ ಸೋಮವಾರ ಸಾಯಂಕಾಲ 9 ಗಂಟೆಗೆ ಸ್ಪೆಂಟ್‌ ಸಾಲ್ವೆಂಟ್‌ ಎನ್ನುವ ನೈಟ್ರಿಕ್‌ ಆ್ಯಸಿಡ್‌ ವೆಸ್ಟೇಜ್‌ನ್ನು ಟ್ಯಾಂಕರ್‌ನಲ್ಲಿ ತುಂಬುತ್ತಿರುವ ಸಂದರ್ಭದಲ್ಲಿ ಅದರ ವಾಸನೆಯಿಂದ ಸಾವನ್ನಪ್ಪಿರಬಹುದು ಎಂದು ತಡವಾಗಿ ಬೆಳಕಿಗೆ ಬಂದಿದೆ.

ಬಿಜೆಪಿ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಸಚಿವ ಪ್ರಭು ಚವ್ಹಾಣ್‌

ವಾಸನೆಯಿಂದ ಕುಸಿದ ವ್ಯಕ್ತಿಯನ್ನು ಕಾರ್ಖಾನೆಯ ಕೆಲ ಕಾರ್ಮಿಕರು ಕೂಡಲೇ ಕಾರ್ಖಾನೆಯ ವಾಹನದಲ್ಲಿ ಯುವಕನನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸದೆ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯ ಇದನ್ನು ಗಮನಿಸಿ ತಕ್ಷಣ ಹೈದ್ರಾಬಾದ್‌ ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದ್ದು, ಬಳಿಕ ಆಸ್ಪತ್ರೆಯ ಸಮೀಪದಲ್ಲಿರುವ ಇನ್ನೊಂದು ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಯುವಕನನ್ನು ಹೈದ್ರಾಬಾದ್‌ನ ಮೀಯಾಪೂರ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಂಗಳವಾರದಿಂದ ಹುಮನಾಬಾದ್‌ ಪೊಲೀಸ್‌ ಇಲಾಖೆ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಕಾರ್ಖಾನೆಯ ಗೇಟ್‌ ಸೇರಿದಂತೆ ಕಾರ್ಖಾನೆಯ ಸಿಸಿ ಕ್ಯಾಮೆರಾದಲ್ಲಿ ಎರಡು ದಿನಗಳ ಯಾವುದೇ ತರಹದ ಘಟನೆಗೆ ಸಂಬಂಧಿಸಿದ ವಿವರ ಲಭ್ಯ ಇಲ್ಲ ಎಂಬ ಮಾಹಿತಿ ಇದೆ. ಈ ಕುರಿತು ಕಾರ್ಖಾನೆಯ ವ್ಯವಸ್ಥಾಪಕ ಒಬಲೇಶನನ್ನು ಸಂಪರ್ಕಿಸಿ ಮಾಹಿತಿ ಪಡೆದಾಗ, ಸಾವನ್ನಪ್ಪಿದ ವ್ಯಕ್ತಿಗೂ ಕಾರ್ಖಾನೆಗೂ ಯಾವುದೇ ಸಂಬಂಧವಿಲ್ಲ. ಅವನು ಕುಸಿದು ಬಿದ್ದಿದ್ದು ಆರ್‌ಟಿಒ ಕಚೇರಿ ಸಮೀಪ, ಅವನನ್ನು ಮಾನವೀಯತೆ ದೃಷ್ಠಿಯಿಂದ ಆಸ್ಪತ್ರೆಗೆ ಸಾಗಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.