Asianet Suvarna News Asianet Suvarna News

ಸರ್ಕಾರ ಅಭಿವೃದ್ಧಿ ಪರವಾಗಿದ್ದರೆ ಹೆಚ್ಚು ಅನುದಾನ: ವಿಧಾನಸಭಾಧ್ಯಕ್ಷ ಕಾಗೇರಿ

ಅಭಿವೃದ್ಧಿ ಎಂದಿಗೂ ನಿಂತ ನೀರಲ್ಲ. ಸರ್ಕಾರಗಳು ಅಭಿವೃದ್ಧಿ ಪರವಾಗಿದ್ದರೆ ಹಣವೂ ನಿರೀಕ್ಷೆಗೆ ಮೀರಿ ಬರುತ್ತದೆ. ಪ್ರಸಕ್ತ ಅಭಿವೃದ್ಧಿಗೆ ಅಧಿಕ ಹಣ ಹರಿದುಬರುತ್ತಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 

If Government is in favor of Development more grants says Speaker Vishweshwar Hegde Kageri gvd
Author
First Published Dec 17, 2022, 8:53 PM IST

ಶಿರಸಿ/ಯಲ್ಲಾಪುರ (ಡಿ.17): ಅಭಿವೃದ್ಧಿ ಎಂದಿಗೂ ನಿಂತ ನೀರಲ್ಲ. ಸರ್ಕಾರಗಳು ಅಭಿವೃದ್ಧಿ ಪರವಾಗಿದ್ದರೆ ಹಣವೂ ನಿರೀಕ್ಷೆಗೆ ಮೀರಿ ಬರುತ್ತದೆ. ಪ್ರಸಕ್ತ ಅಭಿವೃದ್ಧಿಗೆ ಅಧಿಕ ಹಣ ಹರಿದು ಬರುತ್ತಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ತಾಲೂಕಿನ ಗಣೇಶಪಾಲದಲ್ಲಿ 11.26 ಕೋಟಿಯಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿ ಒಂದೆಡೆಯಾದರೆ, ಅದೊಂದೇ ನಮ್ಮ ಜೀವನ ರೂಪಿಸುವುದಿಲ್ಲ. ನೆಮ್ಮದಿಯ ಜೀವನಕ್ಕೆ ಬೇಕಾದ ವಾತಾವರಣ ನಿರ್ಮಿಸಿಕೊಳ್ಳಬೇಕಾಗಿದೆ ಎಂದರು.

ಜನರ ಮಾನಸಿಕ ಸ್ಥಿತಿ ಉತ್ತಮ ದಾರಿಯಲ್ಲಿರದಿದ್ದರೆ ಅಭಿವೃದ್ಧಿಯ ಪರಿಣಾಮ ಗೋಚರ ಆಗುತ್ತಿಲ್ಲ. ಆರ್ಥಿಕ ಬೆಳವಣಿಗೆಯೇ ನೆಮ್ಮದಿಗೆ ಕಾರಣ ಆಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಜನಜೀವನದಲ್ಲಿ ಇರುವ ಕಷ್ಟಗಳಿಗೆ ಸ್ಪಂದನೆ ಮಾಡುವ ಕಾರ್ಯ ಸಹ ಆಗಬೇಕು ಎಂದರು. ಅಡಕೆ ಎಲೆಚುಕ್ಕಿ ರೋಗ ಜಾಸ್ತಿ ಆಗಿದೆ. ದನಕರಗಳಿಗೆ ರೋಗವನ್ನೂ ಪರಿಣಾಮಕಾರಿಯಾಗಿ ನಿಭಾಯಿಸಿದ್ದೇವೆ. ಕಾಡುಪ್ರಾಣಿ ಹಾವಳಿಯಿಂದ ರೈತರು ಕಂಗಾಲಾಗುತ್ತಿದ್ದಾರೆ. ಅರಣ್ಯ ಇಲಾಖೆ ಮೂಲಕ ಪರಿಹಾರ ನೀಡುವ ಮೊತ್ತ ಹೆಚ್ಚಿಸಿದ್ದೇವೆ. ಜನರ ಬದುಕು ಉತ್ತಮಗೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳನ್ನು ಬಲಿಪಡೆಯುತ್ತಿದೆ ಚರ್ಮಗಂಟು ರೋಗ

ನಮ್ಮ ಪ್ರದೇಶದಲ್ಲಿ ಅನೇಕರು ಅರಣ್ಯ ಅತಿಕ್ರಮಣ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ. ನಿಮ್ಮನ್ನು ತೆರವುಗೊಳಿಸುತ್ತಾರೆಂದು ಕೆಲವರು ಅನಗತ್ಯ ಭಯ ಹುಟ್ಟಿಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ ನಾನು, ಹೆಬ್ಬಾರ ಇರುವವರೆಗೆ ಭಯ ಬೇಡ. ನಾವು ನಿಮ್ಮನ್ನು ಈ ವರೆಗೂ ರಕ್ಷಣೆ ಮಾಡಿದ್ದೇವೆ. ಮುಂದೆಯೂ ರಕ್ಷಣೆ ಮಾಡುತ್ತೇವೆ. ಸರ್ಕಾರದ ಪ್ರಕ್ರಿಯೆಯಲ್ಲಿ ಮಂಜೂರಾತಿಗೆ ಕಾನೂನಿನ ತೊಡಕಿನಿಂದಾಗಿ ವಿಳಂಬವಾಗಬಹುದು. ಈ ಕುರಿತು ಯಾರಿಗೂ ಆತಂಕ ಬೇಡ. ಜನರು ನಮ್ಮ ಮೇಲೆ ಇಟ್ಟವಿಶ್ವಾಸವನ್ನು ನಾವಿಬ್ಬರು ಉಳಿಸಿಕೊಳ್ಳುತ್ತೇವೆ. ಹೊಸ ಅತಿಕ್ರಮಣಕ್ಕೆ ಆಸ್ಪದ ನೀಡುವುದಿಲ್ಲ ಎಂದರು. ಸಚಿವ ಶಿವರಾಮ ಹೆಬ್ಬಾರ್‌ ಮಾತನಾಡಿ, ಜಿಲ್ಲೆಯ ಅರಣ್ಯ ಅಧಿಕಾರಿಗಳು ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಆರ್ಥಿಕ ಪ್ರಗತಿ ದೇಶ, ರಾಜ್ಯದಲ್ಲಿ ಆರಂಭ ಆಗಿದೆ. ಮುಚ್ಚಿದ ಕಾರ್ಖಾನೆಗಳು ಈಗ ಮರು ಆರಂಭಗೊಳ್ಳುತ್ತಿವೆ ಎಂದರು.

ಜಿಲ್ಲೆಯಲ್ಲಿ ತಲೆತಲಾಂತರದಿಂದ ಶೇ.90ರಷ್ಟು ಅರಣ್ಯ ಉಳಿಸಿಕೊಂಡು ಬಂದಿದ್ದೇವೆ. ಆದರೆ ಅಭಿವೃದ್ಧಿಗೆ ಪೂರಕವಾದ ರಸ್ತೆ, ಜಲ್ಲಿ, ರೇತಿ, ಕಲ್ಲು ಇವುಗಳು ಬದುಕಿಗೆ ಅನಿವಾರ್ಯ. ಜಿಲ್ಲೆಯ ಅಧಿಕಾರಿಗಳು ಜನಪರವಾಗಿ ಯೋಜನೆ ರೂಪಿಸಬೇಕು ಎಂದರು. ಈ ಸಂದರ್ಭದಲ್ಲಿ ಹಿತ್ಲಳ್ಳಿ ಗ್ರಾಪಂ ಅಧ್ಯಕ್ಷ ಪ್ರಸನ್ನ ಭಟ್ಟ, ಉಮ್ಮಚಗಿ ಗ್ರಾಪಂ ಅಧ್ಯಕ್ಷೆ ರೂಪಾ ಪೂಜಾರಿ, ಜಡ್ಡಿಗದ್ದೆ-ಕೊಡ್ನಗದ್ದೆ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಭಟ್ಟ, ಗುತ್ತಿಗೆದಾರ ಬಿ.ಎಸ್‌. ಗಾಂವ್ಕರ, ಲೋಕೋಪಯೋಗಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವಿ.ಎಂ. ಭಟ್ಟ, ಹಿತ್ಲಳ್ಳಿ ಪಿಡಿಒ ಜಿ.ಜಿ. ಶೆಟ್ಟಿ, ಎಂ.ಜಿ. ಭಟ್ಟಸಂಕದಗುಂಡಿ, ಪ್ರವೀಣ ಹೆಗಡೆ ಇದ್ದರು.

Uttara Kannada: ಹೊನ್ನಾವರದಲ್ಲಿ ಚಿರತೆ ಕಾಟ: ಆತಂಕದಲ್ಲಿ ಜನರು

ಬಹುವರ್ಷಗಳ ಕನಸು...: ಯಲ್ಲಾಪುರ ತಾಲೂಕು ಹಿತ್ಲಳ್ಳಿ ಗ್ರಾಮ ಪಂಚಾಯಿತಿಗೂ, ಶಿರಸಿ ತಾಲೂಕಿನ ಕೋಡ್ನಗದ್ದೆ ಗ್ರಾಮ ಪಂಚಾಯಿತಿಯ ನಡುವೆ ಹರಿಯುವ ಶಾಲ್ಮಲಾ ನದಿ ಮಳೆಗಾಲದಲ್ಲಿ ಇಲ್ಲಿಯವರ ಸಂಪರ್ಕವನ್ನೇ ತಪ್ಪಿಸುತ್ತಿತ್ತು. ನೆಂಟರ ಮನೆ, ಶಾಲಾ-ಕಾಲೇಜುಗಳಿಗೆ ತೆರಳಬೇಕೆಂದರೆ ಸಾಧ್ಯವಿರದಂತಾಗಿತ್ತು. ಬೇಸಿಗೆ ದಿನಗಳಲ್ಲಿ ಬೈಕ್‌ ಮಾತ್ರ ದಾಟಿಸಬಹುದಾದ ಸ್ಥಿತಿ ಇತ್ತು. ಈಗ 175 ಮೀ. ಉದ್ದದ ಸೇತುವೆ ನಿರ್ಮಿಸಲಾಗುತ್ತಿದೆ. ಏಳು ಮೀಟರ್‌ ಅಗಲದ ಈ ಸೇತುವೆ 18 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಧಾರವಾಡದ ಬಿಎಸ್‌ಜಿ ಇನ್‌ಫ್ರಾಸ್ಟ್ರಕ್ಚರ್‌ ನಿರ್ಮಾಣದ ಜವಾಬ್ದಾರಿ ವಹಿಸಿದೆ.

Follow Us:
Download App:
  • android
  • ios