ಈ ಬಾರಿಯ ಚುನಾವಣೆ ವಿಶಿಷ್ಟ ಚುನಾವಣೆಯಾಗಿದ್ದು, ಎಲ್ಲರ ಸಹಕಾರದಿಂದ ಗೆದ್ದಿದ್ದೇನೆ ಎಂದು ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ತಿಳಿಸಿದರು.

ಗುಬ್ಬಿ : ಈ ಬಾರಿಯ ಚುನಾವಣೆ ವಿಶಿಷ್ಟಚುನಾವಣೆಯಾಗಿದ್ದು, ಎಲ್ಲರ ಸಹಕಾರದಿಂದ ಗೆದ್ದಿದ್ದೇನೆ ಎಂದು ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ತಿಳಿಸಿದರು.

ಪಟ್ಟಣದ ಎಸ್‌ಎಂ ಪ್ಯಾಲೇಸ್‌ನಲ್ಲಿ ವೀರಶೈವ ಲಿಂಗಾಯತ ಸಮುದಾಯದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದ ಶ್ರೀನಿವಾಸ್‌ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾನು ಯಾವುದೇ ಜಾತಿ ಹಿಡಿದು ರಾಜಕೀಯ ಮಾಡಿಲ್ಲ. ಆದರೆ ಇತ್ತೀಚಿನ ಚುನಾವಣೆಯಲ್ಲಿ ಜಾತಿ ರಾಜಕೀಯ ಶುರುವಾಗಿದೆ. 21ನೇ ಶತಮಾನಕ್ಕೆ ಬಂದರೂ ಸಹ ನಮ್ಮಲ್ಲಿ ಜಾತಿಯತೆ ಹೋಗಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವೆಲ್ಲರೂ ಒಂದೇ ಎಂದು ಬಾಳಬೇಕಾಗಿತ್ತು. ಆದರೆ ರಾಜಕೀಯದಲ್ಲಿ ಜಾತಿಯೇ ಮೂಲವಾಗಿರುವುದು ವಿಪರ್ಯಾಸವಾಗಿದೆ. ಚುನಾವಣೆಯಲ್ಲಿ

ಒಂದು ಸಮಾಜದ ಮತ ಪಡೆದು ಗೆಲ್ಲಲು ಸಾಧ್ಯವಿಲ್ಲ. ನಾನು ಸಾಕಷ್ಟುಜನರಿಗೆ ಕೆಲಸ ಮಾಡಿಕೊಟ್ಟಿದ್ದರೂ ಸಹ ಅಂತವರೇ ನನಗೆ ಕೈಕೊಟ್ಟಿದ್ದಾರೆ. ನಿಜವಾದ ಕಾರ್ಯಕರ್ತರು, ಸಣ್ಣ ಪುಟ್ಟಲೀಡರ್‌ಗಳೇ ಕೈ ಹಿಡಿದು ನಡೆಸಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ಕೆ.ಆರ್‌.ತಾತಯ್ಯ ಮಾತನಾಡಿ, ಈ ಬಾರಿ ಐದೂ ಸಾವಿರಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮತಬಾಂಧವರು ಶ್ರೀನಿವಾಸ್‌ ಅವರಿಗೆ ಮತವನ್ನು ನೀಡಿದ್ದಾರೆ. ಹಾಗಾಗಿ ನಮ್ಮಲ್ಲಿ ಒಬ್ಬರಿಗೆ ಒಂದು ಒಳ್ಳೆಯ ಹುದ್ದೆಯನ್ನು ನೀಡುವ ಮೂಲಕ ಗೌರವಿಸಬೇಕು ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಶಂಕರಾನಂದ, ಮುಖಂಡರಾದ ಗುರು ರೇಣುಕಾರಾಧ್ಯ, ರೇಣುಕ ಪ್ರಸಾದ್‌, ಸುರೇಶ್‌ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮುಖಂಡರಾದ ತ್ರಿವೇಣಿ, ಪ್ರಭಣ್ಣ, ಕಾಂತರಾಜು, ಸಿದ್ದಲಿಂಗಪ್ಪ, ಶಿವಪ್ಪ, ರಮೇಶ್‌, ರಾಜಣ್ಣ ಕೊಪ್ಪ ಹರ್ಷ, ಹರ್ಷವರ್ಧನ್‌ ಕರಿಬಸವಯ್ಯ, ಪ್ರಕಾಶ್‌, ಪದ್ಮಮ್ಮ ಗುರುಪ್ರಸಾದ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.