ಕಾಡುಗೊಲ್ಲ ಸಮುದಾಯದ ಎಸ್‌ಟಿ ಮೀಸಲಾತಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.

ಗುಬ್ಬಿ : ಕಾಡುಗೊಲ್ಲ ಸಮುದಾಯದ ಎಸ್‌ಟಿ ಮೀಸಲಾತಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.

ತಾಲೂಕಿನ ಹಾಗಲವಾಡಿ ಹೋಬಳಿಯ ಜುಂಜಪ್ಪನಹಟ್ಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದರು.

ಜಲಜೀವನ್‌ ಮಿಷನ್‌ ಕಳಪೆ ಕಾಮಗಾರಿ ನನ್ನ ಗಮನದಲ್ಲೂ ಇದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಗುಣಮಟ್ಟದ ಕಾಮಗಾರಿ ಮಾಡಲು ತಿಳಿಸುತ್ತೇನೆ. ಪ್ರತಿ ಗ್ರಾಮಕ್ಕೂ ಹೊಸ ಪೈಪ್‌ಲೈನ್‌ ಮಾಡಿ ಕಾಮಗಾರಿ ಮಾಡಲು ಸೂಚಿಸುತ್ತೇನೆ. ಪ್ರತಿ ಮನೆಮನೆಗೆ ನಲ್ಲಿ ಸಂಪರ್ಕ ಕಾಮಗಾರಿ ತಾಲೂಕಿನಲ್ಲಿ ಬಹುತೇಕ ಆಗಿದ್ದು, ಉಳಿದ ಎಲ್ಲ ಕಾಮಗಾರಿಗಳನ್ನು ಕೂಡಲೇ ಮಾಡಿಸುತ್ತೇನೆ. ಮುಂದಿನ ವಾರ ಕಾಂಗ್ರೆಸ್‌ ಪಕ್ಷಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಘವೇಂದ್ರ, ಕರಿಬಸಮ್ಮ, ಉಪಾಧ್ಯಕ್ಷೆ ನಳಿನಮ್ಮ ಉಮೇಶ್‌, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್‌, ವನಿತಾ ರಂಗಸ್ವಾಮಿ, ಮಂಜುನಾಥ್‌, ಮುಖಂಡರಾದ ಅನಿಲ್‌ಕುಮಾರ, ಉಮೇಶ್‌, ಯರಣ್ಣ, ಮುದ್ದಣ, ಓಂಕಾರ್‌, ಕಿಟ್ಟಪ್ಪ, ಮಹೇಶ್‌, ಈಶಣ್ಣ, ಸಿದ್ದರಾಜು, ವೇಣುಗೋಪಾಲ್‌, ಹೇಮಂತ್‌ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಕಾರ್ಯಕರ್ತರೊಂದಿಗೆ ಚರ್ಚಿಸಿ ಪಕ್ಷ ಸೇರುವ ತೀರ್ಮಾನ

ಗುಬ್ಬಿ : ಯಾವುದೇ ಪಕ್ಷ ಸೇರುವ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ಅವರ ಅಂತಿಮ ತೀರ್ಮಾನಕ್ಕೆ ಬದ್ಧನಾಗಿ ಮುಂದೆ ಸಾಗುವೆ. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಶಾಸಕನಾಗಿ ಸಚಿವರಾಗುವವರೆಗೂ ನನ್ನ ಜೊತೆಯಲ್ಲೇ ಇರುವ ಕಾರ್ಯಕರ್ತರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಪುನರುಚ್ಚರಿಸಿದರು.

ತಾಲೂಕಿನ ಕಡಬ ಹೋಬಳಿ ಕೊಪ್ಪ ಗ್ರಾಮದಲ್ಲಿ ಕೋಣನಕೆರೆ ಮಾರ್ಗವಾಗಿ ಕಡಬ ರಸ್ತೆ ಸಂಪರ್ಕಿಸುವ 4 ಕೋಟಿ ರು.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಮೊದಲಿಂದ ನನ್ನ ಜೊತೆ ಇರುವ ಮುಖಂಡರು, ಕಾರ್ಯಕರ್ತರು ಈಗಲೂ ಇದ್ದಾರೆ. ಸಾಕಷ್ಟುಮಂದಿ ನನ್ನ ಜೊತೆ ಸೇರಿದ್ದಾರೆ. ಅಂತಹವರನ್ನು ವೈಭವೀಕರಿಸಿ ತೋರುವ ಕೆಲಸ ನಾನು ಮಾಡಿಲ್ಲ. ಕಾಂಗ್ರೆಸ್‌ ಸೇರುವ ಒಲವು ಕಾರ್ಯಕರ್ತರಲ್ಲಿದೆ ಎಂದರು.

ಜೆಡಿಎಸ್‌ ಅಧಿಕಾರಕ್ಕೆ ಬರೋದು ಕನಸು: ಡಿಕೆಶಿ

ಕಾಂಗ್ರೆಸ್‌ ಪಕ್ಷದ ಪಟ್ಟಿಬಗ್ಗೆ ನನಗೆ ತಿಳಿಯದು. ಅದು ಒಂದು ಪಕ್ಷದ ಆಂತರಿಕ ವಿಚಾರ. ಮಾಧ್ಯಮದಲ್ಲಿ ಪಟ್ಟಿವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಲಾಗದು. ನಾನು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಬಜೆಟ್‌ ನಂತರ ನನ್ನ ಕಾರ್ಯಕರ್ತರ ಜೊತೆ ಸಭೆ ನಡೆಸಿಯೇ ಅಂತಿಮ ತೀರ್ಮಾನ ಮಾಡಲಾಗುವುದು. ನಾನು ಎಲ್ಲಿಯೂ ಪಕ್ಷ ಸೇರ್ಪಡೆ ಬಗ್ಗೆ ತಿಳಿಸಿಲ್ಲ. ಊಹಾಪೋಹ ಬಗ್ಗೆ ಉತ್ತರ ನೀಡಲಾಗದು ಎಂದು ಸ್ಪಷನೆ ನೀಡಿ ಉಳಿದ ದಿನದಲ್ಲಿ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಲು ಮೀಸಲಿಟ್ಟು ರಾಜೀನಾಮೆ ನಂತರ ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧ ಎಂದರು.

ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಪಟ್ಟಿಮಾಡಿ ಅನುದಾನ ತರಲಾಗಿದೆ. ಸಾಕಷ್ಟುಗ್ರಾಮಗಳ ರಸ್ತೆಗೆ ಕಾಯಕಲ್ಪ ಶೀಘ್ರದಲ್ಲಿ ನೀಡಲಾಗುವುದು. ಇಂದು ಕೊಪ್ಪ ಕೋಣನಕೆರೆ ಮಾರ್ಗ ಕಡಬ ರಸ್ತೆ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಇದೇ ರೀತಿ ಚಿಕ್ಕ ಹಡಿಗೆಹಳ್ಳಿ, ದಾಸರಪಾಳ್ಯ, ಸಾರಿಗೇಹಳ್ಳಿ, ಮಂಚಲದೊರೆ, ಸಾತೇನಹಳ್ಳಿ ಗೇಟ್‌, ನಂದಿಹಳ್ಳಿ, ಹೇರೂರು, ಅಡಗೂರು, ಸಿಂಗೋನಹಳ್ಳಿ ಹಾಗೂ ಹೊಸಪಾಳ್ಯ ಗ್ರಾಮದ ರಸ್ತೆಗಳಿಗೆ ವಾರದಲ್ಲಿ ಚಾಲನೆ ದೊರೆಯಲಿದೆ. ಈಗಾಗಲೇ ಪೂಜೆ ಆಗಿರುವ ಪೆರಮಸಂದ್ರ, ನೆರಳೇಕೆರೆ, ಬಾಡೇನಹಳ್ಳಿ ಗ್ರಾಮದ ರಸ್ತೆ ಡಾಂಬರ್‌ ಹಂತಕ್ಕೆ ತಲುಪಿವೆ ಎಂದು ಕೆಲಸದ ವಿಚಾರ ವಿವರಿಸಿದರು.

ಇದೇ ಸಂದರ್ಭದಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮುಖಂಡರು ಶಾಸಕ ವಾಸಣ್ಣ ಅವರಿಗೆ ಬೃಹತ್‌ ಪುಷ್ಪಾಹಾರ ಹಾಕುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು.