Asianet Suvarna News Asianet Suvarna News

Chitradurga: ಟ್ಯಾಕ್ಸ್‌ ಕಟ್ಟಲು ನನ್ನ ಬಳಿ ಹಣವಿಲ್ಲ: ಸಚಿವ ಮಾಧುಸ್ವಾಮಿ

ಟ್ಯಾಕ್ಸ್‌ ಕಟ್ಟಲು ತಮ್ಮ ಬಳಿ ಹಣವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಸಿರಿಗೆರೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಕೃತಿಯೊಂದನ್ನು ಬಿಡುಗಡೆ ಮಾಡಿ ಮಾತನಾಡಿದರು.

I dont have money to pay taxes says minister jc madhuswamy gvd
Author
First Published Sep 25, 2022, 8:54 PM IST

ಸಿರಿಗೆರೆ (ಸೆ.25): ಟ್ಯಾಕ್ಸ್‌ ಕಟ್ಟಲು ತಮ್ಮ ಬಳಿ ಹಣವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಸಿರಿಗೆರೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಕೃತಿಯೊಂದನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಶ್ರೀಗಳು ತಮ್ಮ ಕೃತಿಯಲ್ಲಿ ರಾಜಕಾರಣಿಗಳ ಭಾಷಣಕ್ಕೆ ತೆರಿಗೆ ವಿಧಿ​ಸಿದರೆ ರಾಜ್ಯದ ಬೊಕ್ಕಸ ತುಂಬುತ್ತದೆ ಎಂದು ಬರೆದಿದ್ದಾರೆ.

ಅವರು ಆಹ್ವಾನಿಸಿದ್ದರಿಂದ ಬಂದು ಇಲ್ಲಿ ಭಾಷಣ ಮಾಡಿದ್ದೇನೆ. ನನ್ನಲ್ಲಿ ಹಣವಿಲ್ಲ. ಅವರು ಕರೆದಿರುವುದರಿಂದ ಅವರೇ ನನ್ನ ಟ್ಯಾಕ್ಸ್‌ ಕಟ್ಟಲಿ ಎಂದು ಜನರನ್ನು ನಗೆಗಡಲಲ್ಲಿ ತೇಲಿಸಿದರು. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ರಾಜ್ಯದ ಹಣಕಾಸು ಸ್ಥಿತಿ ಅಷ್ಟುಚೆನ್ನಾಗಿರಲಿಲ್ಲ. ರಾಜ್ಯದಲ್ಲಿ ಆ ಸಂದರ್ಭದಲ್ಲಿ ಕೋವಿಡ್‌ ಅಪ್ಪಳಿಸಿತು. ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಆದರೂ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈಗ ಬೊಮ್ಮಾಯಿಯವರು ಎಲ್ಲಾ ಸಂಕಷ್ಟಗಳನ್ನು ಮೀರಿ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದರು.

ಗೋಮಾಳ ಉಳುಮೆ ಮಾಡಿದ ಅರ್ಹ ರೈತರಿಗೆ ಶೀಘ್ರ ಹಕ್ಕುಪತ್ರ: ಸಚಿವ ಮಾಧುಸ್ವಾಮಿ

ಸಾಲ ಕಟ್ಟದ ರೈತರ ಆಸ್ತಿಗಳ ಜಪ್ತಿ ತಡೆಗೆ ಕಾಯ್ದೆ: ಸಾಲ ತೀರುವಳಿ ಸಂಬಂಧ ಬ್ಯಾಂಕುಗಳು ರೈತರ ಆಸ್ತಿ​ಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಿರಿಗೆರೆಯಲ್ಲಿ ಶನಿವಾರ ನಡೆದ ಲಿಂಗೈಕ್ಯ ತರಳಬಾಳು ಜಗದ್ಗುರು ಶಿವಕುಮಾರ ಶ್ರೀಗಳ 30ನೇ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಘೋಷಣೆ ಮಾಡಿದರು. ಈ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ರೈತ ಸಂಘಟನೆಗಳು ಆಸ್ತಿಪಾಸ್ತಿ ಜಪ್ತಿ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಾರೆ. ನಾಡಿನ ಕೆಲವೆಡೆ ಪ್ರವಾಹದಿಂದ ರೈತರ ಬೆಳೆ ಹಾಳಾಗಿ ಸಂಕಷ್ಟದ ಸನ್ನಿವೇಶ ಎದುರಾಗಿದೆ. ರೈತರು ಸಂಕಷ್ಟದಲ್ಲಿರುವಾಗ ಸಾಲ ವಸೂಲಾತಿಗೆ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮನೆ, ಜಮೀನು, ಆಸ್ತಿಗಳನ್ನು ಜಪ್ತಿ ಮಾಡುವುದು ಸೂಕ್ತವಲ್ಲ. ಇದಕ್ಕೆ ಅಂತ್ಯವಾಡಲು ಸರ್ಕಾರ ಬದ್ಧವಿದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ರೈತರ ಸಾಲ ಮರುಪಾವತಿಗೆ ಒತ್ತಾಯಿಸಿ ಜಪ್ತಿ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಸಾಲ ತೀರಿಸುವ ಸಂಬಂಧ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದರು. ಜತೆಗೆ, ನಮ್ಮ ಸರ್ಕಾರ ರೈತರ ನೆರವಿಗೆ ಬರಲು ಸದಾ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.

ಸಿದ್ದು ದಾವಣಗೆರೆ ಕಾರ‍್ಯಕ್ರಮಕ್ಕೆ ಜನ ಸೇರಿಸಿದ್ದರು: ಸಚಿವ ಮಾಧುಸ್ವಾಮಿ

ಇದೇ ವೇಳೆ ರಾಜ್ಯದಲ್ಲಿ 14 ಲಕ್ಷ ರೈತರ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳು ಸೇರಿದಂತೆ ಎಲ್ಲಾ ದುಡಿಯುವ ವರ್ಗದ ಮಕ್ಕಳಿಗೆ ರೈತವಿದ್ಯಾನಿಧಿ ಯೋಜನೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios