ಜನತಾ ಕರ್ಫ್ಯೂ: ಹುಬ್ಬಳ್ಳಿ-ಧಾರವಾಡ ಸ್ತಬ್ಧ, ಏನು ಇರುತ್ತೆ, ಏನೇನ್ ಇರಲ್ಲ?
ಹಾಲು, ಔಷಧಿ, ಅಗತ್ಯ ವೈದ್ಯಕೀಯ ಸೇವೆ ಹೊರತು ಪಡಿಸಿ ಎಲ್ಲವೂ ಬಂದ್ | ಸಾರಿಗೆ ಸಂಸ್ಥೆ ಬಸ್, ಬಿಆರ್ಟಿಎಸ್, ಬೇಂದ್ರೆ ಸಾರಿಗೆ, ಲಾರಿ ಆಟೋ ಯಾವ ವಾಹನಗಳು ರಸ್ತೆಗಿಳಿಯುವುದಿಲ್ಲ | ಸಣ್ಣ ಕೈಗಾರಿಕೆಗಳ ಸಂಘ, ವರ್ತಕರ ಸಂಘ ಸೇರಿ ಎಲ್ಲ ಸಂಘಟನೆಗಳಿಂದಲೂ ಬೆಂಬಲ|
ಹುಬ್ಬಳ್ಳಿ[ಮಾ.22]: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಪ್ಯೂಗೆ ಮಹಾನಗರದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ಹಾಲು, ಔಷಧಿ ಹಾಗೂ ಅಗತ್ಯ ವೈದ್ಯಕೀಯ ಸೇವೆ ಹೊರತು ಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗುವ ಸಾಧ್ಯತೆ ದಟ್ಟವಾಗಿವೆ. ಯಾವುದೇ ಬಗೆಯ ಸಾಮೂಹಿಕ ಸಾರಿಗೆ ರಸ್ತೆಗೆ ಇಳಿಯುವುದಿಲ್ಲ. ಈ ನಡುವೆ ಕಳೆದ ನಾಲ್ಕು ವರ್ಷಗಳಿಂದ ನಿರಂತರ ನಡೆಯುತ್ತಿರುವ ಮಹದಾಯಿ ಧರಣಿಗೂ ಇದೇ ಮೊದಲ ಬಾರಿಗೆ ಬ್ರೇಕ್ ಬೀಳಲಿದೆ.
ಯಾವ್ಯಾವ ವಾಹನ?:
ಸಾರಿಗೆ ಸಂಸ್ಥೆಯ ನೌಕರರ ಸಂಘ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿ ರುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ 6 ಜಿಲ್ಲೆ 8 ವಿಭಾಗಗಳ ವ್ಯಾಪ್ತಿಯಲ್ಲಿ ಯಾವ ಬಸ್ ಗಳು ಸಂಚರಿಸುವುದಿಲ್ಲ. 5000ಬಸ್ಗಳು ವಾಯವ್ಯ ಕರ್ನಾಟಕ ರಸ್ತೆ ಸಂಸ್ಥೆ ಯಲ್ಲಿವೆ. ಪ್ರತಿನಿತ್ಯ 4500 ಮಾರ್ಗಗಳಲ್ಲಿ ಸಂಚರಿಸು ತ್ತವೆ. ಭಾನುವಾರ ಎಲ್ಲ ಮಾರ್ಗಗಳು ರದ್ದಾಗಲಿವೆ. ಅತ್ಯಂತ ತುರ್ತು ಇದ್ದರೆ ಮಾತ್ರ ಕೆಲವೊಂದು ಬಸ್ಗಳು ಸಂಚರಿಸಬಹುದು. ಆಗಿನ ಪರಿಸ್ಥಿತಿ ನೋಡಿ ಕೊಂಡು ನಿರ್ಧರಿಸಲಾಗುವುದು. ಶೇ.98ರಷ್ಟು ಬಸ್ ಸಂಚಾರ ಸ್ಥಗಿತವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಪ್ರಧಾನಿ ಮೋದಿ ಸಮರಕ್ಕೆ ಕೈ ಜೋಡಿಸಿದ ಡಿಕೆಶಿ
ಇನ್ನೂ ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಬಿಆರ್ಟಿಎಸ್ ಬಸ್ಗಳು ರಸ್ತೆಗಿಳಿಯುವುದಿಲ್ಲ. ಮಿಶ್ರಪಥದಲ್ಲಿ ನಗರ ಸಾರಿಗೆಯ ತುರ್ತು ಅಗತ್ಯವಿ ದ್ದರೆ ಮಾತ್ರ ಕೆಲವೊಂದು ಬಸ್ಗಳು ಸಂಚರಿಸಲಿವೆ. ಬಿಆರ್ಟಿಎಸ್ ಬಸ್ಗಳು ಮಾತ್ರ ಸಂಪೂರ್ಣ ಬಂದ್ ಆಗಲಿವೆ. ಇನ್ನು ಖಾಸಗಿ ಸಂಸ್ಥೆಯಾಗಿರುವ ಬೇಂದ್ರೆ ಸಾರಿಗೆ ಕೂಡ ಜನತಾ ಕರ್ಪ್ಯೂಗೆ ಬೆಂಬಲಿಸಿ ಬಸ್ಗಳ ಸಂಚಾರ ರದ್ದುಗೊಳಿಸಿದೆ. ಲಾರಿ, ಆಟೋ, ಟ್ಯಾಕ್ಸಿ ಸೇರಿದಂತೆ ಯಾವ ವಾಹನಗಳು ಸಂಚರಿಸುತ್ತಿಲ್ಲ. ಹೋಟೆಲ್ಗಳು ಶನಿವಾರವೇ ಬಂದ್ ಆಗಿದ್ದು ಮಾ. ೩೧ರ ವರೆಗೆ ಬಾಗಿಲು ತೆರೆಯುವುದಿಲ್ಲ. ಇನ್ನೂ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ಸೇರಿದಂತೆ ಎಲ್ಲ ಬಗೆಯ ಮದ್ಯದಂಗಡಿಗಳೂ ಈಗಾಗಲೇ ಲಾಕ್ ಡೌನ್ ಆಗಿವೆ. ಸಣ್ಣ ಕೈಗಾರಿಕೆಗಳ ಸಂಘ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯೂ ಈ ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸಿರುವುದರಿಂದ ಎಲ್ಲ ಕೈಗಾರಿಕೆಗಳು ಬಂದ್ ಆಗಲಿವೆ.
ರೈಲ್ವೆ ಬಂದ್:
ರೈಲುಗಳಲ್ಲಿ ಸಾವಿರಾರು ಜನ ಏಕಕಾಲಕ್ಕೆ ಪ್ರಯಾಣಿಸಬಹುದಾದ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೈಲುಗಳ ಸಂಚಾರವೂ ಸ್ಥಗಿತವಾಗಲಿದೆ. ಬೆಳಗ್ಗೆ 4ರಿಂದ ರಾತ್ರಿ 10ರ ವರೆಗೆ ನಿಲ್ದಾಣಗಳಲ್ಲೇ ನಿಲ್ಲಲಿವೆ ಎಂದು ಮೂಲಗಳು ತಿಳಿಸಿವೆ.
ಏನೇನು ಲಭ್ಯ:
ಇನ್ನೂ ಔಷಧಿ ಅಂಗಡಿ, ಹಾಲು, ಪೇಪರ್ ಹಾಗೂ ಅಗತ್ಯ ವೈದ್ಯಕೀಯ ಸೇವೆ ಮಾತ್ರ ಲಭ್ಯವಾಗುತ್ತದೆ. ಔಷಧಿ ವ್ಯಾಪಾರಕ್ಕೆ ಯಾವುದೇ ಬಗೆಯ ನಿರ್ಬಂಧವಿಲ್ಲ. ಹಾಲು ಅತ್ಯಂತ ಅಗತ್ಯ ವಸ್ತುವಾಗಿದ್ದರಿಂದ ಅವುಗಳಿಗೂ ಯಾವುದೇ ಬಗೆಯ ಸಮಸ್ಯೆಯಿಲ್ಲ. ಇನ್ನೂ ವೈದ್ಯಕೀಯ ಲಭ್ಯವೆಂದರೆ ಎಲ್ಲ ಬಗೆಯ ವೈದ್ಯಕೀಯ ಸೇವೆ ಸಿಗುವುದಿಲ್ಲ. ಅಂದರೆ ದಂತ, ನೇತ್ರ ಸೇರಿದಂತೆ ಎಲ್ಲ ಕ್ಲಿನಿಕ್ಗಳು ಬಂದ್ ಆಗಿರುತ್ತವೆ. ತುರ್ತು ವೈದ್ಯಕೀಯ ಸೇವೆಗಳು ಮಾತ್ರ ಲಭ್ಯವಿರುತ್ತವೆ. ಬೆಂಬಲ ನೀಡಿ: ಎಲ್ಲರೂ ಸ್ವಯಂಪ್ರೇರಣೆಯಿಂದ ಜನತಾ ಕರ್ಪ್ಯೂಗೆ ಬೆಂಬಲಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ವಾಟ್ಸಾಆ್ಯಪ್, ಫೇಸ್ಬುಕ್ಗಳಲ್ಲಿ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಎಐಟಿಯುಸಿ, ಲಾರಿ ಮಾಲೀಕರ ಸಂಘ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಕರ್ನಾಟಕ ರೈತ ಸೇನೆ, ರೈತ ಸಂಘ, ಕಳಸಾ-ಬಂಡೂರಿ ಹೋರಾಟ ಸಮಿತಿ, ಸಂವಿ ಧಾನ ಸುರಕ್ಷಾ ಸಮಿತಿ ಸೇರಿದಂತೆ ಹತ್ತಾರು ಸಂಘಟ ನೆಗಳು ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸಿವೆ. ಒಟ್ಟಿನಲ್ಲಿ ಎಲ್ಲರೂ ಮನೆಯಲ್ಲಿ ಉಳಿಯಲು ನಿರ್ಧರಿಸಿದ್ದು, ಜನತಾ ಕರ್ಪ್ಯೂಗೆ ಭಾರಿ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ.
ಕೊರೋನಾ ರಜೆಯಲ್ಲಿ ಮಕ್ಕಳನ್ನು ಬ್ಯುಸಿಯಾಗಿಡಲು ಇಲ್ಲಿವೆ ಐಡಿಯಾಗಳು...
ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಜನತೆ ತಮಗೆ ಬೇಕಾದ ವಸ್ತುಗಳನ್ನು ಈಗಾಗಲೇ ಖರೀದಿಸಿ ಮನೆ ಯಲ್ಲಿಟ್ಟುಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಹಳೆ ಹುಬ್ಬ ಳ್ಳಿ, ಹೊಸಹುಬ್ಬಳ್ಳಿ ದುರ್ಗದ ಬೈಲ್, ಜನತಾ ಬಜಾರ್ ನಲ್ಲಿ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಯಲ್ಲಿ ಜನತೆ ಮುಗಿಬಿದ್ದ ದೃಶ್ಯ ಕಂಡು ಬಂತು. ಮಹದಾಯಿ ಹೋರಾಟ: ಕಳೆದ ನಾಲ್ಕು ವರ್ಷಕ್ಕೂ ಅಧಿಕ ಕಾಲದಿಂದ ನಡೆಯುತ್ತಿರುವ ಮಹದಾಯಿ ಹೋರಾಟಕ್ಕೆ ಕೊರೋನಾ ಭೀತಿಯಿಂದ ಮೊದಲ ಬಾರಿಗೆ ಬ್ರೇಕ್ ಬೀಳಲಿದೆ. ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸಿರುವ ಹೋರಾಟಗಾರರು ಮಾ. 22ರಂದು ಧರಣಿ ನಡೆಸದಿರಲು ನಿರ್ಧರಿಸಿದ್ದಾರೆ. ನರಗುಂದದಲ್ಲಿ 1702 ದಿನ ಗಳಿಂದ ಹೋರಾಟ ನಡೆಯುತ್ತಿದ್ದರೆ, ನವಲಗುಂದ ದಲ್ಲಿ 1684 ದಿನಗಳಿಂದ ನಿರಂತರವಾಗಿ ಧರಣಿ ನಡೆ ಯುತ್ತಿದೆ. ಇದೇ ಮೊದಲ ಬಾರಿಗೆ ಹೋರಾಟಗಾರರು ತಮ್ಮ ತಮ್ಮ ಮನೆಯಲ್ಲಿ ಉಳಿಯಲಿದ್ದಾರೆ.
ಯಥಾಸ್ಥಿತಿ ಅಗತ್ಯ ವಸ್ತುಗಳು ಸಿಗಲಿವೆ
ಕೊರೋನಾ ಸೋಂಕು ತಡೆಯಲು ಜಿಲ್ಲೆಯಾದ್ಯಂತ ಸಿಆರ್ಪಿಸಿ 144(3) ರನ್ವಯ ವಿಧಿಸಿರುವ ಪ್ರತಿಬಂಧಕಾಜ್ಞೆ, ಅಗತ್ಯ ವಸ್ತುಗಳ ಪೂರೈಕೆಗೆ ಅನ್ವಯವಾಗುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್ ಬಂಕ್, ಕಿರಾಣಿ ಅಂಗಡಿ, ಹಾಲು , ತರಕಾರಿ, ಮೆಡಿಕಲ್ ಶಾಪ್ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆಗೆ ವ್ಯತ್ಯಯ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಳ್ಳೆದೆಲೆ ಸಂತೆ ರದ್ದು ನೋವಲ್ ಕೋವಿಡ್-19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಧಾರವಾಡ ಸಮಿತಿಯ ಹಳೆಯ ಮಾರುಕಟ್ಟೆ ಪ್ರಾಂಗಣದಲ್ಲಿ ಜರುಗುವ ವಿಳ್ಳೆದೆಲೆ ಸಂತೆ ಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮಾ. 24, 28 ಮತ್ತು 31ರಂದು ರದ್ದುಗೊಳಿಸಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೌರದ ಅಂಗಡಿ ಬಂದ್ ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸ್ಪಂದಿಸಲು ಧಾರವಾಡ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಯುವ ಸೇವಾ ಸಂಘವು ಸಮಾಜ ಬಾಂಧವರಿಗೆ ಮನವಿ ಮಾಡಿದೆ. ಜನ ತಾ ಕರ್ಫ್ಯೂ ನಿಮಿತ್ತ ನಾಳೆ ಹುಬ್ಬಳ್ಳಿ- ಧಾರ ವಾಡ ಸೇರಿದಂತೆ ಜಿಲ್ಲೆಯ ಲ್ಲಿನ ಕ್ಷೌರದ ಅಂಗಡಿ ಗಳನ್ನು ನಾಳೆ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಬಂದ್ ಮಾಡಬೇಕು. ಮತ್ತು ಮನೆ ಯಲ್ಲಿಯೇ ಉಳಿದು ಸರ್ಕಾರದ ಪ್ರಯತ್ನಕ್ಕೆ ಕೈಜೋಡಿ ಸಬೇಕು ಎಂದು ಸಂಘದ ಜಿಲ್ಲಾ ಅಧ್ಯಕ್ಷ ಈರಣ್ಣ ಚಿಕ್ಕಬೆಳ್ಳಿಕಟ್ಟಿ ಮನವಿ ಮಾಡಿದ್ದಾರೆ.
ಕರ್ಫ್ಯೂಗೆ ವಿನಯ ಬೆಂಬಲ ದೇಶಾದ್ಯಂತ ನಡೆಯಲಿರುವ ಜನತಾ ಕರ್ಫ್ಯೂಗೆ ಮಾಜಿ ಸಚಿವ ವಿನಯ ಕುಲಕರ್ಣಿ ಸಹ ಬೆಂಬಲ ಸೂಚಿಸಿದ್ದಾರೆ. ದೇಶದ ಪ್ರಧಾನಿಗಳು ನೀಡಿರುವ ಕರೆಯಂತೆ ಜನರು ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಮನೆಯಿಂದ ಹೊರ ಬರದೇ ಮನವಿಯನ್ನು ಜಾತಿ-ಬೇಧ, ಪಕ್ಷ ಬೇಧ ಮರೆತು ಪ್ರತಿಯೊಬ್ಬರು ಪಾಲಿಸಬೇಕು. ಈ ಮೂಲಕ ಕೊರೋನಾ ವೈರಸ್ ಹಿಮ್ಮೆಟ್ಟಿಸಬೇಕು ಎಂದಿದ್ದಾರೆ.
ಧಾರವಾಡ ಸ್ತಬ್ಧ
ಕೊರೋನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಘೋಷಣೆಯಂತೆ ಮಾ. 22ರ ಭಾನುವಾರ ಧಾರವಾಡ ಸಂಪೂರ್ಣ ಸ್ತಬ್ಧಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದಂತೆ ಶನಿವಾರ ಬೆಳಗ್ಗೆ 10ರಿಂದಲೇ ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ಗಳು ಸಹ ಬಂದ್ ಆಗಿವೆ. ಈ ಆದೇಶ ಮಾ. 31ರ ವರೆಗೂ ಮುಂದುವರಿಯಲಿದೆ. ಇದರೊಂದಿಗೆ ಒಂದು ವಾರದಿಂದಲೇ ಧಾರವಾಡದಲ್ಲಿ ಸಿನಿಮಾ ಮಂದಿರಗಳು, ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್ಗಳು ಹಾಗೂ ಮಾಲ್ಗಳು ಬಂದ್ ಆಗಿವೆ. ಇನ್ನು, ಪ್ರಧಾನಿ ಅವರ ಘೋಷಣೆಯಂತೆ ಭಾನುವಾರ ಸಾರಿಗೆ, ವ್ಯಾಪಾರ-ವಹಿವಾಟು ಸಹ ಬಂದ್ ಆಗಲಿದ್ದು ಎಲ್ಲರೂ ಮನೆಯಲ್ಲಿಯೇ ಉಳಿಯುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಪ್ರಧಾನಿ ಅವರ ಘೋಷಣೆ ಧಾರವಾಡದಲ್ಲಿ ಸಂಪೂರ್ಣಯವಾಗಿ ಯಶಸ್ವಿಯಾಗಲಿದೆ.
ಕಟಿಂಗ್ ಶಾಪ್ ಬಂದ್:
ಜನತಾ ಕರ್ಪ್ಯೂ ನಿಮಿತ್ತ ಭಾನುವಾರ ಹುಬ್ಬಳ್ಳಿ-ಧಾರವಾಡ ಅವಳಿನಗರ ಸೇರಿದಂತೆ ಜಿಲ್ಲೆಯಲ್ಲಿನ ಕ್ಷೌರದ ಅಂಗಡಿಗಳನ್ನು ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಬಂದ್ ಮಾಡಬೇಕು. ಮತ್ತು ಮನೆಯಲ್ಲಿಯೇ ಉಳಿದು ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಯುವ ಸೇವಾ ಸಂಘವು ತೀರ್ಮಾನಿಸಿದೆ.
ಅಂಗಡಿ-ಮುಗ್ಗಟ್ಟು ಬಂದ್:
ಅಂತೆಯೇ, ಧಾರವಾಡ ವಾಣಿಜ್ಯೋದ್ಯಮ ಸಂಸ್ಥೆ ಬೆಂಬಲ ಸೂಚಿಸಿದೆ. ಕೊರೋನಾ 19 ಮಹಾಮಾರಿಯನ್ನು ಎದುರಿಸಲು ಸಮಗ್ರ ದೇಶವು ಐಕ್ಯತೆಯಿಂದ ಭಾನುವಾರ ಸ್ವಯಂಪ್ರೇರಿತ ಜನತಾ ಕರ್ಪ್ಯೂ ಆಚರಿಸಬೇಕು ಎಂಬ ಪ್ರಧಾನಿ ಅವರ ಕರೆಗೆ ನಾವೆಲ್ಲ ಸ್ಪಂದಿಸಿ ನಮ್ಮ ಅಂಗಡಿಗಳನ್ನು ಬಂದ್ ಮಾಡಲಿದ್ದೇವೆ ಎಂದು ಸಂಘದ ಅಧ್ಯಕ್ಷ ಪ್ರಭು ನಡಕಟ್ಟಿ, ಕಾರ್ಯದರ್ಶಿ ರವೀಂದ್ರ ಆಕಳವಾಡಿ ಹಾಗೂ ಸದಸ್ಯ ಉದಯ ಯಂಡಿಗೇರಿ ತಿಳಿಸಿದ್ದಾರೆ.
ಇದರೊಂದಿಗೆ ಕಲಾವಿದ ಮಂಜುನಾಥ ಹಿರೇಮಠ ಅವರು ತಮ್ಮ ಬೈಕ್ ಮೂಲಕ ಜನತಾ ಕರ್ಪ್ಯೂ ಯಶಸ್ವಿಗೊಳಿಸಲು ಶನಿವಾರ ಮಾಳಾಪುರ, ಕಮಲಾಪುರ ಭಾಗದ ಜನರಲ್ಲಿ ಜಾಗೃತಿ ಮೂಡಿಸಿದರು. ವೀರೇಶ ಅಂಚಟಗೇರಿ, ಕಿರಣ ಹಿರೇಮಠ ಹಾಗೂ ಸ್ಥಳೀಯರು ಇದ್ದರು. ಇನ್ನು, ಕೊರೋನಾ ವಿರುದ್ಧ ಹೋರಾಡುತ್ತಿರುವ ಎಲ್ಲರ ಪರವಾಗಿ ಮೋದಿ ಸಲಹೆಯಂತೆ ಭಾನುವಾರ ಜನತಾ ಕರ್ಪ್ಯೂಗೆ ಬೆಂಬಲ ನೀಡಬೇಕೆಂದು ಇಬ್ಬರು ಬೈಕ್ ಮೂಲಕ ಧಾರವಾಡದಿಂದ ಹುಬ್ಬಳ್ಳಿಯ ವರೆಗೆ ಜಾಥಾ ನಡೆಸಿದರು.
ಪ್ರತಿಯೊಬ್ಬ ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಪ್ಯೂಗೆ ಸಹಕರಿಸಬೇಕು. ನಮ್ಮನ್ನುನಾವು ರಕ್ಷಿಸಲು ಬದ್ಧರಾದಾಗಲೇ ಈ ರೋಗಾಣುವನ್ನು ಹೊಡೆದೋಡಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.