'ಚಂದನ್ ಶೆಟ್ಟಿಯಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ'
ದಸರಾ ಪಾಸ್, ಚಂದನ್ ಶೆಟ್ಟಿಯಿಂದ ಬಿಪಿ, ಶುಗರ್ ಹೆಚ್ಚಳ- ಸಚಿವ ಸೋಮಣ್ಣ ಅಳಲು| ದಸರಾ ಪಾಸ್ಗಾಗಿ ಮೇಯರ್, ಪಾಲಿಕೆ ಸದಸ್ಯರ ಪ್ರತಿಭಟನೆಗೆ ಬೇಸರ
ಮೈಸೂರು[ಅ.07]: ದಸರಾ ಪಾಸ್ ಗೊಂದಲ ಹಾಗೂ ಯುವ ದಸರೆಯಲ್ಲಿ ಚಂದನ್ ಶೆಟ್ಟಿಪ್ರೇಮ ನಿವೇದನೆ ಪ್ರಕರಣದಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಿಲ್ಲ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಸ್ಯೆಗಳನ್ನು ನಿವಾರಿಸು ಅಂತ ಚಾಮುಂಡೇಶ್ವರಿ ಮುಂದೆ ನಿಂತು ಬೇಡಿಕೊಂಡಿದ್ದೇನೆ. ಎರಡು ನಿಮಿಷ ದೇವರ ಮುಂದೆ ನಿಂತೆ ಎಂದು ಅಲ್ಲಿದ್ದ ಜನರು ಬೈದು ಕಳುಹಿಸಿದರು ಎಂದರು.
ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್: ನಿವೇದಿತಾ-ಚಂದನ್ ಶೆಟ್ಟಿಗೆ ಸಂಕಷ್ಟ
ಚಂದನ್ ಶೆಟ್ಟಿನನ್ನ ಕ್ಷೇತ್ರದ ವೋಟರ್. ಫೋನ್ ಮಾಡಿ ಕ್ಷಮೆ ಕೇಳಿದ್ದಾನೆ. ನೀನ್ಯಾಕಯ್ಯ ಶನಿ ಹೆಗಲೇರಿದ ರೀತಿ ಬಂದೇ ಅಂತ ಹೇಳಿದೆ. ಅವರ ಅಮ್ಮ ನನ್ನ ಹೆಂಡತಿಗೆ ಫೋನ್ ಮಾಡಿ ಅರ್ಧ ಗಂಟೆ ಪಿಟೀಲ್ ಕುಯ್ದಿದ್ದಾರೆ. ಪವಿತ್ರ ದಸರಾದಲ್ಲಿ ಇದೆಲ್ಲ ಮಾಡಿದ್ದು ಸರಿಯಲ್ಲ. ಈಗಾಗಲೇ ಚಂದನ್ ಶೆಟ್ಟಿಗೆ ನೋಟಿಸ್ ಕೊಟ್ಟಿದ್ದೇವೆ, ದಸರೆ ಮುಗಿನ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಪಾಸ್ ಗೊಂದಲ- ಬೇಸರ
ಜಂಬೂಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಪಾಸ್ ನೀಡುವಲ್ಲಿ ಜಿಲ್ಲಾಡಳಿತ ತಾರತಮ್ಯ ಎಸಗಿದೆ ಎಂದು ಆರೋಪಿಸಿ ಮೇಯರ್ ನೇತೃತ್ವದಲ್ಲಿ ಪಾಲಿಕೆಯ ಸದಸ್ಯರು ಪ್ರತಿಭಟನೆ ನಡೆಸಿರುವುದು ನನಗೆ ನೋವುಂಟು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದೇ ಮೊದಲ ಬಾರಿಗೆ ಜಿಪಂ, ನಗರ ಪಾಲಿಕೆ ಸದಸ್ಯರನ್ನು ಒಳಗೊಂಡಂತೆ ದಸರಾ ಆಚರಣೆಗೆ ನಾನು ಅವರ ಬಳಿಯೇ ಹೋಗಿ ಸಭೆ ನಡೆಸಿದ್ದೆ. ಜೊತೆಗೆ ಅವರನ್ನೂ ಒಳಗೊಂಡಂತೆ ಈವರೆಗೆ ದಸರಾ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಆದರೆ, ಜೊತೆಯಲ್ಲಿದ್ದವರೇ ಈ ರೀತಿ ಪಾಸ್ಗಾಗಿ ಜನಪ್ರತಿನಿಧಿಗಳು ಪ್ರತಿಭಟನೆಗಿಳಿದಿರುವುದು ಮೈಸೂರು ಸಂಸ್ಕೃತಿ, ಘನತೆಗೆ ಅಪಮಾನ ಮಾಡಿದಂತೆ ಎಂದರು.
ದಸರಾ ವೇದಿಕೆಯಲ್ಲಿ ಪ್ರೇಮ ನಿವೇದನೆ: ಚಂದನ್ ನಡೆಗೆ ನೆಟ್ಟಿಗರು ಗರಂ
ಕಳೆದ ವರ್ಷದಂತೆ ಈ ಬಾರಿಯು ಅವರಿಗೆ ತಲುಪಿಸಬೇಕಾದಷ್ಟುಪಾಸ್ಗಳನ್ನು ನೀಡಲಾಗಿದೆ. ಆದರೆ, ಅವರು ಕೇವಲ 5 ಪಾಸುಗಳನ್ನು ನೀಡಿದ್ದಾರೆ ಎಂದು ಹೇಳುತ್ತಾರೆ. ಅವರ ನಡೆ ನನಗೆ ಘಾಸಿ ಮಾಡಿದೆ. ಶಾಸಕರಾದ ಸಾ.ರಾ. ಮಹೇಶ್, ತನ್ವೀರ್ ಸೇಠ್ ಅವರು ಮೇಯರ್ ಪ್ರತಿಭಟನೆ ಕೈಬಿಡಿಸಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಸಲ್ಲಿಸುತ್ತೇನೆ. ಪಾಲಿಕೆ ಸದಸ್ಯರು ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ ಪ್ರತ್ಯೇಕ ಗ್ಯಾಲರಿಯನ್ನು ಇದೇ ಮೊದಲ ಬಾರಿಗೆ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ದಸರಾ ವೀಕ್ಷಣೆಗೆ ದೇಶಾದ್ಯಂತ ಲಕ್ಷಾಂತರ ಮಂದಿ ಬರುತ್ತಾರೆ. ಎಲ್ಲರಿಗೂ ಪಾಸ್ ವ್ಯವಸ್ಥೆ ಮಾಡಲಾಗುವುದಿಲ್ಲ. ಅರಮನೆ ಆವರಣದಲ್ಲಿ ಇರುವುದು 27 ಸಾವಿರ ಆಸನ ವ್ಯವಸ್ಥೆ. ಮೈಸೂರಿಗರು ಪ್ರತಿ ವರ್ಷ ದಸರಾ ನೋಡುತ್ತಾರೆ. ಹೊರಗಿನವರಿಗೂ ಅವಕಾಶ ಮಾಡಿಕೊಡಬೇಕು. ಮುಂದಿನ ವರ್ಷ ನಾನೇ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದರೆ ಈ ಎಲ್ಲಾ ಗೊಂದಲಗಳಿಗೂ ಅಂಕಿತ ಹಾಕುತ್ತೇನೆ ಎಂದರು.
ಮೈಸೂರು: ಚಂದನ್ ಶೆಟ್ಟಿಗೆ ಪೇಮೆಂಟ್ ನೀಡದಂತೆ ಒತ್ತಾಯ
ಮೇಯರ್ ಸೇರಿದಂತೆ ಯಾರಿಗೆ ಎಷ್ಟುಪಾಸ್ ಕೊಡಬೇಕೋ ಅಷ್ಟುಕೊಟ್ಟಾಗಿದೆ. ಒಂದು ವೇಳೆ ಸಮಸ್ಯೆ ಇದ್ದರೇ ನನಗೆ ನೇರವಾಗಿ ಹೇಳಬಹುದಿತ್ತು. ಶಾಸಕರಾದ ತನ್ವೀರ್ ಸೇಠ್, ಸಾ.ರಾ. ಮಹೇಶ್ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ಪಾಸ್ ಗೊಂದಲದ ವಿಚಾರವಾಗಿ ಸಾ.ರಾ. ಮಹೇಶ್ ಕೂಡ ದೂರವಾಣಿ ಕರೆ ಮಾಡಿ ನನ್ನ ಜೊತೆ ಮಾತನಾಡಿದ್ದಾರೆ. ಅಲ್ಲದೆ, ಪ್ರತಿಭಟನೆಯಲ್ಲಿ ಕೈ ಬಿಡಿಸಿದ್ದಾರೆ. ಅವರು ಕೂಡ ನನ್ನನ್ನು ಅರ್ಥ ಮಾಡಿಕೊಂಡಿದ್ದು, ಇದಕ್ಕೆ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸೋಮಣ್ಣ ಹೇಳಿದರು.