ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀಣಗೊಂಡಿದ್ದರಿಂದ ನೊಂದ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳ್ಳಾರಿ, (ಜುಲೈ.14): ಇಂದು (ಮಂಗಳವಾರ) ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ಮನನೊಂದ ವಿದ್ಯಾರ್ಥಿನಿಯರಿಬ್ಬರೂ ಚಲಿಸುತ್ತಿದ್ದ ರೈಲಿನಡಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ

Add Asianetnews Kannada as a Preferred SourcegooglePreferred

ಹೊಸಪೇಟೆಯ ಕೆ.ಎಸ್‌.ಪಿ.ಎಲ್‌. ಕಾಲೇಜಿನ ವಿದ್ಯಾರ್ಥಿನಿಯರಾದ ರೂಪ (18), ಶ್ರೇಯಾ (18) ಗಾಯಗೊಂಡವರು. ಇಬ್ಬರೂ ನಗರದ ಮೇನ್‌ ಬಜಾರ್‌ನ ವಡಕರಾಯ ದೇವಸ್ಥಾನ ಹಿಂಭಾಗದ ನಿವಾಸಿಗಳು.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2020: ರಾಜ್ಯಕ್ಕೆ ಇವರೇ ಟಾಪರ್ಸ್..!

ಘಟನೆಯಲ್ಲಿ ಶ್ರೇಯಾ ಕೈ ಬೆರಳು ತುಂಡಾಗಿದ್ದು, ತಲೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸದ್ಯ ಶ್ರೇಯಾಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೊಯ್ಯಲಾಗಿದೆ. 

ಇನ್ನು ರೂಪಳ ಎರಡು ಕೈಬೆರಳು ತುಂಡಾಗಿದ್ದು, ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಅವರಿಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿನಿಯರು ಬೆಳಿಗ್ಗೆ ವೆಬ್‌ಸೈಟಿನಲ್ಲಿ ಫಲಿತಾಂಶ ನೋಡಿದ್ದಾರೆ. ಅನುತ್ತೀರ್ಣಗೊಂಡಿರುವ ವಿಷಯ ತಿಳಿದು, ನಗರ ಹೊರವಲಯದ ಅನಂತಶಯನಗುಡಿ ಬಳಿಯಿರುವ ರೈಲ್ವೆ ಹಳಿ ಬಳಿ ತೆರಳಿದ್ದು, ಈ ವೇಳೆ ಜೆ.ಎಸ್‌.ಡಬ್ಲ್ಯೂ ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲು ಬರುತ್ತಿದ್ದಂತೆ ಅದರಡಿ ಇಬ್ಬರೂ ಜಿಗಿದಿದ್ದಾರೆ.

ಇಬ್ಬರು ಗಾಯಗೊಂಡು ಕಿರುಚುತ್ತಿರುವ ಶಬ್ದ ಕೇಳಿ ಸ್ಥಳೀಯರು ದೌಡಾಯಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಪೋಷಕರು ಮತ್ತು ಕಾಲೇಜಿನವರನ್ನು ಸಂಪರ್ಕಿಸಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.