ಮಂಡ್ಯದಲ್ಲಿ ಘೋರ ಅವಘಡ, ಅಮಲಿನಲ್ಲಿದ್ದ ಲಾರಿ ಚಾಲಕನ ಅವಾಂತರಕ್ಕೆ 7 ಜೀವಗಳು ಬಲಿ
ಗಾಂಧೀ ಜಯಂತಿಂದೇ ಕುಡಿದ ಮತ್ತಿನಲ್ಲಿದ್ದವನೊಬ್ಬ ರಸ್ತೆ ಪಕ್ಕದಲ್ಲಿ ಸಂಚರಿಸುತ್ತಿದ್ದ ಪಾದಚಾರಿಗಳ ಮೇಲೆ ಲಾರಿ ಹಾಯಿಸಿದ್ದಾನೆ. ಪರಿಣಾಮ 7 ಜನ ದಾರುಣ ಸಾವಿಗೆ ಈಡಾಗಿದ್ದಾರೆ.
ಮಂಡ್ಯ[ಅ.2] ಮಂಡ್ಯದಲ್ಲಿ ಭೀಕರ ಅಪಘಾತ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಲಾರಿ ಚಾಲಕನ ಎಣ್ಣೆ ಏಟಿಗೆ 7 ಜನ ಅಮಾಯಕರು ಬಲಿಯಾಗಿದ್ದಾರೆ. ಮಂಡ್ಯ ನಗರದ ಗುತ್ತಲು ರಸ್ತೆಯ ಬೆನಕ ಸಮುದಾಯದ ಬಳಿ ಘೋರ ಅವಘಡ ನಡೆದಿದೆ.
ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ಲಾರಿ ಪಾದಚಾರಿಗಳ ಮೇಲೆ ಹರಿದಿದೆ. ಚಾಲಕ ಸುಮಾರು 200 ಮೀಟರ್ ದೂರದವರೆಗೆ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ. ಅಪಘಾತದಲ್ಲಿ ಗಾಯಗೊಂಡಿರುವ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಸಾವನ್ನಪ್ಪಿದವರ ಪೈಕಿ ನಾಲ್ವರ ಮಾಹಿತಿ ಮಾತ್ರ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಗಾಯಾಳುಗಳನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.