ಸಂವಿಧಾನದಿಂದಲೇ ಅಧಿಕಾರಕ್ಕೆ ಬಂದವರು, ಇಂದು ಅದೇ ಸಂವಿಧಾನವನ್ನು ತುಳಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗದ ಇವರು ದೇಶಕ್ಕಾಗಿ ಯಾವ ಒಳ್ಳೆಯ ಕೆಲಸವನ್ನು ಮಾಡಿಲ್ಲ
ಬೀದರ್: ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಲ್ಲಿ ಭಾಗಿಯಾಗಿದ್ದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ಅವರು ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾನುವಾರ ರಾತ್ರಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಬಿ.ಜಿ ಕೋಲ್ಸೆ ಪಾಟೀಲ್, ಹಿಂದೂ ಅನ್ನುವುದು ಧರ್ಮವೇ ಅಲ್ಲ, ಅದು ಪರ್ಷಿಯನ್ ಪದ, ಅದರ ಅರ್ಥ ಬೈಗುಳ ಇದೆ. ಬ್ರಾಹ್ಮಣರು ಅವರ ಬುದ್ಧಿಯಿಂದ ನಮ್ಮನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಅಂತಾ ಸೃಷ್ಟಿಸಿದ್ದಾರೆ. RSS ಹಾಗೂ ಬ್ರಾಹ್ಮಣರ ವಿರುದ್ಧ ಮಾತನಾಡಲು ಭಯಪಡಬೇಡಿ ಎಂದು ಕರೆ ನೀಡಿದ್ದಾರೆ.
ಹಿಂದೂ ಅನ್ನೋದು ಬ್ರಾಹ್ಮಣರ ಧರ್ಮವಾಗಿದೆ. ಪರಕೀಯರು ನೀಡಿದ ಬೈಗುಳವೇ ಹಿಂದೂ. ಈ ಪದದ ಅರ್ಥವನ್ನು ತಿಳಿಸುವ ಕೆಲಸವನ್ನು ಮಾಡಲಾಗುತ್ತಿಲ್ಲ. ಬ್ರಾಹ್ಮಣರು ತಮ್ಮ ಬುದ್ಧಿವಂತಿಕೆಯಿಂದ ನಮ್ಮೆಲ್ಲರನ್ನು ಗುಲಾಮರನ್ನಾಗಿ ಮಾಡಲಾಯ್ತು. ಈ ಎಲ್ಲಾ ಸಂತರು, ಮೌಲ್ವಿಗಳು ಇದನ್ನು ತಿಳಿಸುವ ಕೆಲಸ ಮಾಡಬೇಕಿದೆ. ಹಿಂದೂ ಅರ್ಥ ತಿಳಿಸುವ ಕೆಲಸ ಮಾಡಲು ಇನ್ನು ಸಮಯವಿದೆ.
ಎಲ್ಲಾ ದಂಗೆಗಳಿಗೆ ಆರ್ಎಸ್ಎಸ್ ಕಾರಣ
ಸಿಖ್ ಸೇರಿದಂತೆ ಎಲ್ಲಾ ದಂಗೆಯ ಮೂಲ ಕಾರಣ ಆರ್ಎಸ್ಎಸ್. ಅವರೊಬ್ಬ ನಾಯಕ ಇಂದಿರಾ ಗಾಂಧಿ ಅವರನ್ನು ದುರ್ಗಾ ಎಂದು ಕರೆದ್ರು. ಆರ್ಎಸ್ಎಸ್ ಅವರೇ ಈ ದಂಗೆಗಳನ್ನು ಆರಂಭಿಸಿದರು. ಆದ್ರೆ ಇದೆಲ್ಲದರ ಆರೋಪ ಕಾಂಗ್ರೆಸ್ ಅವರ ಮೇಲೆ ಬಂದಿದ್ದು ತುಂಬಾ ತಪ್ಪು. ಹಾಗಾಗಿ ಇತಿಹಾಸವನ್ನು ಎಲ್ಲರೂ ಓದಬೇಕು ಎಂದು ಬಿ.ಜಿ ಕೋಲ್ಸೆ ಪಾಟೀಲ್ ಹೇಳಿದರು.
ನಾನು 1976ರಿಂದಲೂ ನಮ್ಮೆಲ್ಲರ ದುಃಖ ಮತ್ತು ನೋವುಗಳಿಗೆ ಕಾರಣ ಆರ್ಎಸ್ಎಸ್ ಎಂದು ಹೇಳಿಕೊಂಡು ಬರುತ್ತಿದ್ದೇನೆ. ಆದರೆ ಯಾರಿಗೂ ಆರ್ಎಸ್ಎಸ್ ವಿರುದ್ಧ ಮಾತನಾಡುವ ಧೈರ್ಯ ಇಲ್ಲ. ಕಳೆದ 10-12 ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ. ಈ ಹಿಂದೆಯೂ ಆಡಳಿತವನ್ನು ನಡೆಸಿದ್ದಾರೆ. ಸಂವಿಧಾನದಿಂದಲೇ ಅಧಿಕಾರಕ್ಕೆ ಬಂದವರು, ಇಂದು ಅದೇ ಸಂವಿಧಾನವನ್ನು ತುಳಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗದ ಇವರು ದೇಶಕ್ಕಾಗಿ ಯಾವ ಒಳ್ಳೆಯ ಕೆಲಸವನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
RSS ಹಾಗೂ ಬ್ರಾಹ್ಮಣರ ವಿರುದ್ಧ ಧೈರ್ಯವಾಗಿ ಮಾತನಾಡಿ
ನೀವು ಬೇಕಾದ್ರೆ ಬ್ರಾಹ್ಮಣವಾದದ ಇತಿಹಾಸವನ್ನು ನೋಡಿ ತಿಳಿದುಕೊಳ್ಳಿ. ಸಂತರು, ಸೂಫಿಗಳು ಈ ಬಗ್ಗೆ ತಿಳಿದುಕೊಂಡು ಮಾತನಾಡಬೇಕು. ಧೈರ್ಯದಿಂದ ಮಾತನಾಡದಿದ್ರೆ ಅವರು ನಿಮ್ಮನ್ನು ಬಿಡುವುದಿಲ್ಲ. ಅವರು ದೇಶದಲ್ಲಿ ಕೇವಲ ಒಂದು ಪರ್ಸೆಂಟ್ ಮಾತ್ರ ಇದ್ದಾರೆ. RSS ಹಾಗೂ ಬ್ರಾಹ್ಮಣರ ವಿರುದ್ಧ ಮಾತನಾಡಲು ಭಯಪಡಬೇಡಿ ಎಂದು ಮೌಲ್ವಿಗಳಲ್ಲಿ ಮನವಿ ಮಾಡಿಕೊಂಡರು.
ಇಂದು ನಾವೆಲ್ಲರೂ ಒಗ್ಗಟ್ಟಾಗಿ ಎಲ್ಲರೊಂದಿಗೆ ಬೆರೆಯಬೇಕು. ಈ ಹಿಂದೆ ಮುಸ್ಲಿಮರು ದೇಶ ಆಳ್ವಿಕೆ ಮಾಡಿದ್ದರು. ಹಾಗಾಗಿ ಎಲ್ಲರೊಂದಿಗೆ ಸಮನ್ವಯ ಬೆಳೆಸಿಕೊಳ್ಳಬೇಕು ಎಂದ ಬಿ.ಜಿ ಕೋಲ್ಸೆ ಪಾಟೀಲ್, ಎಲ್ಲರೊಂದಿಗೆ ಸೇರಿಕೊಂಡು ರಾಜಕೀಯ ಮಾಡಬೇಕು. ಈ ರಾಜಕೀಯ ಹಿಂದೂಗಳ ವಿರುದ್ಧ ಅಲ್ಲ. ಕೇವಲ ಆರ್ಎಸ್ಎಸ್ ಮತ್ತು ಬ್ರಾಹ್ಮಣರ ವಿರುದ್ಧ ಮಾಡಬೇಕು ಎಂದು ಹೇಳಿದರು.


