* ಹಿಜಾಬ್ ಸಂಬಂಧ  ಹೈಕೋರ್ಟ್ ಗೆ ಮತ್ತೊಂದು ಅರ್ಜಿ * ಕುಂದಾಪುರ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಂದ ಹೈಕೋರ್ಟ್ ಮೊರೆ * ಮೂಲಭೂತ ಹಕ್ಕು ಕಸಿದುಕೊಳ್ಳಲಾಗುತ್ತಿದೆ

ಬೆಂಗಳೂರು(ಫೆ.01):  ಹಿಜಾಬ್‌(Hijab) ಧರಿಸುವುದು ಸಂವಿಧಾನದ ಮೂಲಭೂತ ಹಕ್ಕೆಂದು(Fundamental Right) ಘೋಷಿಸಬೇಕು ಹಾಗೂ ಹಿಜಾಬ್‌ ಧಾರಣೆಯನ್ನು ಶಿಕ್ಷಣ ಸಂಸ್ಥೆಗಳು ನಿರ್ಬಂಧಿಸುವಂತಿಲ್ಲ ಎಂದು ಆದೇಶಿಸುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು (Students)  ಕರ್ನಾಟಕ ಹೈಕೋರ್ಟ್ (Karnataka High Court)ಮೆಟ್ಟಿಲು ಏರಿದ್ದರು.  ಈಗ ಮತ್ತೊಂದು  ಇದೆ ತೆರನಾದ ಅರ್ಜಿ ಹೈಕೋರ್ಟ್ ಗೆ ಸಲ್ಲಿಕೆಯಾಗಿದೆ. ಇಲ್ಲಿಯವರೆಗೆ ಒಟ್ಟು ಮೂರು ಅರ್ಜಿ ಹೈಕೋರ್ಟ್ ಕದ ತಟ್ಟಿದೆ.

ಕುಂದಾಪುರ (Kundapur) ಬಂಡಾರ್ಕರ್ ಕಾಲೇಜಿನ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೊರೆ ಹೋಗಿದ್ದಾರೆ.  ಕಾಲೇಜು ಪ್ರವೇಶಕ್ಕೆ ನಮಗೆ ಅನುಮತಿ ನೀಡದೆ ಶಿಕ್ಷಣ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.  ಮಂಗಳವಾರ  ಫೆ. 08  ರಂದು ಕೃಷ್ಣ ಎಸ್ ದೀಕ್ಷಿತ್ ಇರುವ ಪೀಠದಲ್ಲಿ ಈ ಮೂರು ಅರ್ಜಿಗಳು ಏಕಕಾಲಕ್ಕೆ ವಿಚಾರಣೆಗೆ ಬರಲಿವೆ.

ಶೈಕ್ಷಣಿಕ ವರ್ಷದ ಆರಂಭದಿಂದಲೂ ನಾವು ಹಿಜಾಬ್ ಧರಿಸಿಕೊಂಡೇ ಹೋಗುತ್ತಿದ್ದೇವು. ಆಗ ಶಿಕ್ಷಣ ಸಂಸ್ಥೆಗೆ ಪ್ರವೇಶ ನೀಡಲಾಗುತ್ತಿತ್ತು. ಆದರೆ ಈಗ ಪ್ರವೇಶ ನಿರಾಕರಿಸುತ್ತಿರುವುದು ಸರಿ ಅಲ್ಲ ಎಂದು ಹೇಳಲಾಗಿದೆ.

ಈ ಮೊದಲು  ರೇಷಮ್‌ ಎಂಬ ವಿದ್ಯಾರ್ಥಿನಿ ಹೈಕೋರ್ಟ್‌ ಮೆಟ್ಟಿಲು ಏರಿದ್ದರು . ಅರ್ಜಿದಾರರ ಪರ ವಕೀಲ ಶಾಂತಬಿಷ್‌ ಶಿವಣ್ಣ ವಕಾಲತ್ತು ವಹಿಸಿಕೊಂಡಿದ್ದರು.

ಪ್ರತಿಯೊಬ್ಬರಿಗೂ ತಮ್ಮದೇ ಆದ ಧಾರ್ಮಿಕ ಆಚರಣೆಗಳನ್ನು(Religious Rituals) ಆಚರಿಸಲು ಭಾರತೀಯ ಸಂವಿಧಾನದಲ್ಲಿ(Constitution of India) ಅವಕಾಶವಿದೆ. ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಅರ್ಜಿಯಲ್ಲಿ ಕೇಳಿಕೊಳ್ಳಲಾಗಿತ್ತು.

ಹಿಜಾಬ್ ವಿವಾದಕ್ಕೆ ಗೃಹ ಸಚಿವರ ಪ್ರತಿಕ್ರಿಯೆ

ಅಲ್ಲದೆ, ಹಿಜಾಬ್‌ ಧರಿಸುತ್ತಿರುವ ಕಾರಣಕ್ಕೆ ಕಾಲೇಜು ಪ್ರವೇಶ ನಿರ್ಬಂಧ ಹೇರಿರುವುದು ಸಂವಿಧಾನದ ನಿಯಮಗಳ ಉಲ್ಲಂಘನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಸರ್ಕಾರ(Government of Karnataka) ರಾಜಕೀಯ ಪ್ರೇರಿತವಾಗಿ ಇಂತಹ ಕ್ರಮ ಅನುಸರಿಸುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಹಾಗೆಯೇ, ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹಿಜಾಬ್‌ ಧರಿಸುವುದು ಸಂವಿಧಾನದ ಕಲಂ 14 ಮತ್ತು 25ರ ಅನ್ವಯ ಮೂಲಭೂತ ಹಕ್ಕು ಎಂಬುದಾಗಿ ಘೋಷಿಸಬೇಕು. ಹಿಜಾಬ್‌ ಧಾರಣೆಯನ್ನು ಶಿಕ್ಷಣ ಸಂಸ್ಥೆಗಳು(Educational Institutions) ನಿರ್ಬಂಧಿಸುವಂತಿಲ್ಲ ಎಂದು ಆದೇಶಿಸಬೇಕು ಎಂದು ದೂರಿನಲ್ಲಿ ಕೇಳಿಕೊಳ್ಳಲಾಗಿತ್ತು.

ಹಿಜಾಬ್ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ ಸಮರಕ್ಕೂ ವೇದಿಕೆ ಮಾಡಿಕೊಟ್ಟಿದೆ.  ಮುಸ್ಲಿಂ ಧಾರ್ಮಿಕ ಹಕ್ಕು ಮೊಟಕುಗೊಳಿಸಲಾಗುತ್ತದೆ ಎನ್ನುವುದು ಕಾಂಗ್ರೆಸ್ಸಿಗರ ಆರೋಪ.  ಸಮವಸ್ತ್ರ ನಿಯಮ ಪಾಲನೆ ಮಾಡಿ ಶಿಕ್ಷಣ ಸಂಸ್ಥೆ ಪ್ರವೇಶ ಮಾಡಬೇಕು ಎನ್ನುವುದು ಬಿಜೆಪಿ ವಾದ.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ವಿವಾದ ತಲೆ ಎತ್ತಿದ್ದು ಹಿಜಾಬ್,  ಕೇಸರಿ ಶಾಲು ಮತ್ತು ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ  ನೀಡಲಾಗಿಲ್ಲ. 

ಸವಾಲು ಹಾಕಿದ್ದ ಶಾಸಕಿ:  ಹಿಜಾಬ್   ವಿಚಾರದಲ್ಲಿ ಹುಟ್ಟಿಕೊಂಡ ಗೊಂದಲ ನ್ಯಾಯಾಲಯದ  ಆವರಣದಲ್ಲಿದೆ. ಪರ ಮತ್ತು ವಿರೋಧದ ಹೇಳಿಕೆಗಳು ಬರುತ್ತಲೇ ಇವೆ. ಇದೆಲ್ಲದರ ನಡುವೆ ವಿದ್ಯಾರ್ಥಿನಿಯರ ಜತೆ ಹೋರಾಟದಲ್ಲಿ ನಿಂತಿದ್ದ  ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ ಸವಾಲು ಎಸೆದಿದ್ದರು.

ಹಿಜಾಬ್ ನಮ್ಮ ಹಕ್ಕು. ನಾವು ಯಾವುದೇ ಕಾರಣಕ್ಕೂ ಬುರ್ಖಾ ಹಾಕಿಕೊಳ್ಳುವುದನ್ನು ಬಿಡುವುದಿಲ್ಲ. ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ನಾನೂ ಸಹ ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ. ಧೈರ್ಯ ಇದ್ದವರು ತಡೆಯಲಿ ಎಂದು ಸವಾಲು ಹಾಕಿದ್ದರು. 

ಹಿಜಾಬ್ ಧರಿಸುವುದು ಮುಸ್ಲಿಂ ಸಮುದಾಯದ ಹಕ್ಕು.  ಬಿಜೆಪಿ ಸರ್ಕಾರ ಅಸಂಬದ್ಧ ಕಾನೂನುಗಳ ಮೂಲಕ ಹಕ್ಕು ಕಸಿದುಕೊಳ್ಳುವ  ಕೆಲಸ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹೊಸ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ. ಈ ಹಿಂದೆ ಸಹ  ವಿದ್ಯಾರ್ಥಿಯರು ಹಿಜಾಬ್ ಧರಿಸಿ  ಶಾಲಾ ಕಾಲೇಜಿಗೆ  ಬರುತ್ತಿದ್ದರು. ಇಷ್ಟು ವರ್ಷದಿಂದ ಇಲ್ಲದ ವಿರೋಧ ಈಗ ಯಾಕೆ  ಎಂದು ಆಕ್ರೋಶ ಹೊರ ಹಾಕಿದ್ದರು.