ವಿಜಯಪುರ ಜಿಲ್ಲೆಯ ಕೋಟ್ಯಾಳ ಗ್ರಾಮದಲ್ಲಿ ಶ್ರೀಶೈಲ್ ಎಂಬ ಮದ್ಯವ್ಯಸನಿಯೊಬ್ಬ ಕುಡಿಯಲು ಹಣಕ್ಕಾಗಿ ಪದೇ ಪದೇ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದಿದ್ದಾನೆ. ಟವರ್ ಮೇಲಿಂದ ಮದ್ಯ ಕೊಡಿಸುವಂತೆ ಬೇಡಿಕೆಯಿಟ್ಟು, ಕೆಳಗಿಳಿಸಲು ಬಂದ ಪೊಲೀಸರು ಮತ್ತು ಸಾರ್ವಜನಿಕರನ್ನು ಹೈರಾಣಾಗಿಸಿದ್ದಾನೆ.
ವಿಜಯಪುರ (ಮಾ.28): ವಿಜಯಪುರ (ಮಾ.28): ಕುಡುಕನೊಬ್ಬ ಬೃಹತ್ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ. ಮದ್ಯ ವ್ಯಸನಿಯ ಹುಚ್ಚಾಟ ಸಾರ್ವಜನಿಕರನ್ನು ಹೈರಾಣಾಗಿಸಿದೆ. ಕೋಟ್ಯಾಳ ಗ್ರಾಮದವನೇ ಶ್ರೀಶೈಲ್ ಎಂಬಾತ ಕುಡಿಯಲು ಹಣವಿಲ್ಲದಾಗೆಲ್ಲ ಮೊಬೈಲ್ ಟವರ್ ಏರಿ ಕುಳಿತು ಮದ್ಯ ಕೊಡಿಸುವಂತೆ ಡಿಮ್ಯಾಂಡ್ ಮಾಡುವ ಮನೆಹಾಳ ಉಪಾಯ ಹುಡುಕಿಕೊಂಡಿದ್ದಾನೆ.
ಟವರ್ ಹತ್ತುವುದೆಂದರೆ ಕುಡುಕನಿಗೆ ಸಲೀಸು!
ಶ್ರೀಶೈಲ್ ಟವರ್ ಹತ್ತುತ್ತಿರುವುದು ಇದೇ ಮೊದಲಲ್ಲ. ಕಳೆದ ಎರಡು ವರ್ಷಗಳಲ್ಲಿ ಈತ ಈಗಾಗಲೇ ಎರಡು ಬಾರಿ ಟವರ್ ಏರಿ ಹುಚ್ಚಾಟ ಮೆರೆದಿದ್ದಾನೆ. ಟವರ್ ಮೇಲೆ ನಿಂತು ಸಿನಿಮಾ ಸ್ಟೈಲ್ನಲ್ಲಿ 'ಕಿಂಗ್ ಕಾಂಗ್' ರೀತಿ ಪೋಸ್ ಕೊಡುತ್ತಾ ಗ್ರಾಮಸ್ಥರಿಗೆ ಆತಂಕ ಸೃಷ್ಟಿಸುತ್ತಾನೆ. ಇನ್ನೇನು ಕೆಳಗೆ ಬಿಳಲಿದ್ದಾನೋ ಎಂಬ ಆತಂಕದಿಂದ ಕೆಳಗಿದ್ದವರ ಎದೆಬಡಿತ ಹೆಚ್ಚಿಸುತ್ತಾನೆ.
ಮದ್ಯಕ್ಕಾಗಿ ಬ್ಲಾಕ್ಮೇಲ್ ಮಾಡ್ತಾನೆ ಕುಡುಕ!
ಈ ಕುಡುಕನ ಬೇಡಿಕೆ ಕೇಳಿ ಪೊಲೀಸರೇ ದಂಗಾಗಿದ್ದಾರೆ. 'ನನಗೆ ಕುಡಿಯೋ ಎಣ್ಣೆ ಬೇಕು. ಎಣ್ಣೆ ಕೊಡಿಸೋದಾದ್ರೆ ಕೆಳಗಿಳ್ತೇನೆ ಇಲ್ಲಂದ್ರೆ ಇಲ್ಲ' ಎಂದು ಟವರ್ ಮೇಲಿಂದಲೇ ಪಟ್ಟು ಹಿಡಿತಾನಂತೆ ಆಸಾಮಿ. ಈ ರೀತಿ ಪದೇಪದೆ ಕುಡಿಯೋಕೆ ಹಣವಿಲ್ಲದಾಗ ಟವರ್ ಏರುವ ಪ್ರಯತ್ನ ಮಾಡ್ತಿರೋದ್ರಿಂದ ಊರಿನ ಜನರಿಗೂ ಇದು ದೊಡ್ಡ ತಲೆನೋವಾಗಿದ್ದಾನೆ.
ಕೆಳಗಿಳಿಸಲು ಪೊಲೀಸರು ಹರಸಾಹಸ
ವಿಷಯ ತಿಳಿಯುತ್ತಿದ್ದಂತೆ ತಿಕೋಟಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕೆಳಗಿಳಿಯುವಂತೆ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕುಡುಕನ ಈ 'ಹೈಡ್ರಾಮಾ' ನೋಡಲು ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ಈ ರೀತಿ ಕ್ಷುಲ್ಲಕ ಕಾರಣಕ್ಕೆ ಟವರ್ ಏರಿ ಕುಳಿತುಕೊಳ್ಳುವ ಕುಡುಕರಿಗೆ ಏನು ಹೇಳಬೇಕು?


