ಗೃಹ ಸಚಿವರ ನೇತೃತ್ವದಲ್ಲಿ ಪೊಲೀಸ್‌ ಅಧಿಕಾರಿಗಳ ಸಭೆ| ರಾಜ್ಯದ ಗಡಿ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ನಿಗ್ರಹಿಸಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ| ಎರಡು ನಕ್ಸಲ್‌ ನಿಗ್ರಹ ಕ್ಯಾಂಪ್‌ಗಳಿದ್ದು, ಮತ್ತೊಂದು ತಂಡ ನಿಯೋಜಿಸಲು ಗೃಹ ಇಲಾಖೆಯಿಂದ ಒಪ್ಪಿಗೆ| 

ಮಡಿಕೇರಿ(ನ.07): ಕೇರಳದ ವಯನಾಡುವಿನ ಬಣಾಸುರಮನೆ ಅರಣ್ಯದಲ್ಲಿ ಕೇರಳದ ನಕ್ಸಲ್‌ ನಿಗ್ರಹ ದಳ ಥಂಡರ್‌ ಬೋಲ್ಟ್‌ ಹಾಗೂ ಮಾವೋವಾದಿಗಳ ನಡುವೆ ಮಂಗಳವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದು ಒಬ್ಬ ಮಾವೋವಾದಿ ಮೃತಪಟ್ಟ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿ ಪ್ರದೇಶಗಳಲ್ಲಿ ಕೂಬಿಂಗ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ಪೊಲೀಸ್‌ ಇಲಾಖೆಯೊಂದಿಗೆ ಮಹತ್ವದ ಸಭೆ ನಡೆದಿದೆ.

Add Asianetnews Kannada as a Preferred SourcegooglePreferred

ಸಭೆಯಲ್ಲಿ ಐಜಿಪಿ ವಿಫುಲ್‌ ಕುಮಾರ್‌, ಎಸ್ಪಿ ಕ್ಷಮಾ ಮಿಶ್ರಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಹಲವು ಮಹತ್ವದ ವಿಷಯಗಳನ್ನು ಈ ಸಭೆಯಲ್ಲಿ ಚರ್ಚೆ ನಡೆಸಿದರು ಎನ್ನಲಾಗಿದೆ. ಮಂಗಳವಾರ ವಯನಾಡಿನಲ್ಲಿ 3 ಮಂದಿ ನಕ್ಸಲರು ಮತ್ತು ಥಂಡರ್‌ ಬೋಲ್ಟ್‌ ಕಮಾಂಡೋಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ತಮಿಳುನಾಡಿನ ವೇಲು ಮುರುಗ(32) ಎಂಬ ನಕ್ಸಲ್‌ ಮೃತಪಟ್ಟಿದ್ದು, ಇನ್ನುಳಿದವರು ಕಾಡಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಗಲಭೆ ಕೇಸ್‌: ಸಂಪತ್‌ ರಾಜ್‌ ಶೀಘ್ರ ಬಂಧನ, ಸಚಿವ ಬೊಮ್ಮಾಯಿ

ಎನ್‌ಕೌಂಟರ್‌ ಸಂದರ್ಭ ತಪ್ಪಿಸಿಕೊಂಡ ಮಾವೋವಾದಿಗಳು ಕೊಡಗು ಅರಣ್ಯ ಗಡಿಯ ಮೂಲಕ ಕರ್ನಾಟಕ ಪ್ರವೇಶಿಸದಂತೆ ತಡೆಯುವ ನಿಟ್ಟಿನಲ್ಲಿ ವಿರಾಜಪೇಟೆಯ ಆರ್ಜಿ ಎಎನ್‌ಎಫ್‌, ಭಾಗಮಂಡಲ ಎಎನ್‌ಎಫ್‌ ಹಾಗೂ ಕಾರ್ಕಳ ಎಎನ್‌ಎಫ್‌ ಯೋಧರು ಒಟ್ಟು 4 ತಂಡಗಳಾಗಿ ಪೆರುಂಬಾಡಿಯಿಂದ ಕರಿಕೆಯವರೆಗೆ ಕೂಬಿಂಗ್‌ ಕಾರ್ಯಾಚರಣೆ ನಡೆಸಿರುವ ಮಾಹಿತಿ ಲಭಿಸಿದೆ.

ರಾಜ್ಯದ ಗಡಿ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ನಿಗ್ರಹಿಸಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಎರಡು ನಕ್ಸಲ್‌ ನಿಗ್ರಹ ಕ್ಯಾಂಪ್‌ಗಳಿದ್ದು, ಮತ್ತೊಂದು ತಂಡ ನಿಯೋಜಿಸಲು ಗೃಹ ಇಲಾಖೆಯಿಂದ ಒಪ್ಪಿಗೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.