ಮೂವರು ಕುಳಿತು ಪ್ರಯಾಣಿಸಿದರೆ ನಿಮ್ಮ ವಾಹನ ಜಪ್ತಿ ಆಗಲಿದೆ. ಅಲ್ಲದೇ ಹೆಲ್ಮೆಟ್ ಹಾಕದೇ ಪ್ರಯಾಣಿಸಿದರೆ ಭಾರೀ ಪ್ರಮಾಣದಲ್ಲಿ ದಂಡ ಬೀಳಲಿದೆ. 

ಕೆ.ಆರ್.ಪೇಟೆ [ಜ.13]: ದ್ವಿಚಕ್ರ ವಾಹನಗಳ ಅಪಘಾತವು ತಾಲೂಕಿನಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಕೆ.ಆರ್.ಪೇಟೆ ಪಟ್ಟಣದಲ್ಲಿ ದ್ವಿಚಕ್ರ ಸವಾರರು ಫೆಬ್ರವರಿ 1 ರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಆದೇಶ ನೀಡಲಾಗಿದೆ ಎಂದು ಎಸ್‌ಐ ಬ್ಯಾಟರಾಯಗೌಡ ತಿಳಿಸಿದರು.

Add Asianetnews Kannada as a Preferred SourcegooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಐ ಬ್ಯಾಟರಾಯಗೌಡ ವಾಹನ ಸವಾರರು ಈ ನಿಯಮವನ್ನು ಪಾಲಿಸುವ ಮೂಲಕ ಸುಗಮ ಸಂಚಾರಕ್ಕೆ ಹಾಗೂ ಅಪಘಾತ ಮುಕ್ತ ಪಟ್ಟಣ ಮಾಡಲು ಸಹಕಾರ ನೀಡಬೇಕು ಎಂದು ಕೋರಿದರು. ಪಟ್ಟಣವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಜನಸಾಮಾನ್ಯರಿಗೆ ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರವನ್ನು ಒದಗಿಸಿಕೊಡಲು ಪೋಲಿಸ್ ಇಲಾಖೆಯು ಬದ್ಧವಾಗಿದೆ. ಫೆ.1 ರಿಂದ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಬೈಕ್ ಗಳಲ್ಲಿ ಮೂವರು ಕುಳಿತು ಪ್ರಯಾಣ ಮಾಡುವುದರೆ ವಾಹನ ಜಪ್ತಿ ಮಾಡಲಾಗುವುದು. ಅಲ್ಲದೆ ದುಬಾರಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಸಿಸಿ ಕ್ಯಾಮರಾ ಅಳವಡಿಕೆ: ಪಟ್ಟಣದ ಪ್ರವಾಸಿ ಮಂದಿರ ವೃತ್ತ, ದುರ್ಗಾ ಭವನ್ ವೃತ್ತ, ಬಸ್ ನಿಲ್ದಾಣ ಹೇಮಗಿರಿ ಸರ್ಕಲ್ ಸೇರಿದಂತೆ ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಭೂಸೇನಾ ನಿಗಮಕ್ಕೆ ಟೆಂಡರ್ ನೀಡಲಾಗಿದೆ. ಅಲ್ಲದೆ ಟಿ.ಬಿ.ವೃತ್ತಕ್ಕೆ ಸಿಗ್ನಲ್ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಒಂದೆರಡು ತಿಂಗಳಲ್ಲಿ ಪಟ್ಟಣದಲ್ಲಿ ಸಿಸಿ ಕ್ಯಾಮರಾ ಹಾಗೂ ಸಿಗ್ನಲ್ ಲೈಟ್ ಅಳವಡಿಸಲಾಗುವುದು ಎಂದು ವಿವರಿಸಿದರು.

ಭರ್ಜರಿ ಆಫರ್; ಝೀರೋ ಡೌನ್‌ಪೇಮೆಂಟ್ ಮೂಲಕ ಖರೀದಿಸಿ ಜಾವಾ ಪೆರಾಕ್!..

ಸಂಚಾರಿ ನಿಯಮ ಜಾರಿ: ಪಟ್ಟಣದಲ್ಲಿ ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವಂತಿಲ್ಲ, ರಸ್ತೆ ಬದಿಯ ವ್ಯಾಪಾರಿಗಳು ಸಾರ್ವಜನಿಕರು ಓಡಾಡಲು ಫುಟ್‌ಪಾತ್ ಬಿಟ್ಟು ಹಿಂದೆ ನಿಂತು ತಮ್ಮ ವ್ಯಾಪಾರ ವಹಿವಾಟನ್ನು ನಡೆಸಬೇಕು. ಪಟ್ಟಣದ ಮಿಲ್ಟ್ರಿ ಹೋಟೆಲ್‌ಗಳು ಮತ್ತು ಡಾಬಾಗಳಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವಂತಿಲ್ಲ. ಪೋಲಿಸರು ಡಾಬಾಗಳ ಮೇಲೆ ದಾಳಿ ಮಾಡಿದಾಗ ಮದ್ಯಪಾನ ಮಾಡುವವರು ಸಿಕ್ಕಿಬಿದ್ದರೆ ಹೋಟೆಲ್ ಪರವಾನಗಿಯ ರದ್ದತಿಗೆ ಶಿಫಾರಸ್ಸು ಮಾಡುವ ಜೊತೆಗೆ ಹೋಟೆಲ್ ಡಾಬಾ ಮಾಲೀಕರ ವಿರುದ್ಧ ಮೊಕದ್ದಮೆಯನ್ನುದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.