ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕಾಲಿಕ ಮಳೆ: ಬಿರುಗಾಳಿ ಸಹಿತ ಅಬ್ಬರ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಿಡಿಲು ಗುಡುಗು ಸಹಿತ ವರುಣ ಅಬ್ಬರಿಸಿದ್ದಾನೆ. ಹಲವೆಡೆ ಮರಗಳು ಧರೆಗುರುಳಿವೆ.
ಬೆಂಗಳೂರು (ಮಾ.30): ಮಲೆನಾಡು, ಕಾರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸೋಮವಾರ ಅಕಾಲಿಕ ಮಳೆಯಾಗಿದ್ದು, ಶಿವಮೊಗ್ಗದಲ್ಲಿ ಯುವನೊಬ್ಬ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಮಂಡಗೋಡಲ್ಲಿ ಸಿಡಿಲಿಗೆ 17 ಕುರಿಗಳು ಮೃತಪಟ್ಟಿವೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ, ಶಿರಸಿ ನಗರ ಪ್ರದೇಶದಲ್ಲಿ ಅರ್ಧ ಗಂಟೆ ಕಾಲ ಭಾರೀ ಮಳೆ ಸುರಿದಿದೆ. ಕೆಲ ಸಮಯ ಆಲಿಕಲ್ಲು ಮಳೆ ಸುರಿದಿದೆ. ಯಲ್ಲಾಪುರ ಹಾಗೂ ಮುಂಡಗೋಡದಲ್ಲಿ ಸಾಧಾರಣ ಮಳೆ ಸುರಿದಿದೆ. ಮುಂಡಗೋಡದ ಸಿಂಗನಳ್ಳಿಯಲ್ಲಿ ಸಿಡಿಲು ಬಡಿದು ಮಾನು ನಾಗು ಶಳಕೆ ಅವರಿಗೆ ಸೇರಿದ 17 ಕುರಿಗಳು ಮೃತಪಟ್ಟಿವೆ.
ಎಂಟಾಣೆ ಮಳೆ, ಮಹಾನ್ ವ್ಯಕ್ತಿಯ ತಲೆದಂಡ; ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ಲ!
ಬಸನಾಳ ಗ್ರಾಮದ ಬಮ್ಮು ಎಡಗೆ ಎಂಬುವರ ಮನೆಯ ಮೇಲೆ ಮರವೊಂದು ಉರುಳಿ ಬಿದ್ದು ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅನೇಕ ಕಡೆಗಳಲ್ಲಿ ಸೋಮವಾರ ರಾತ್ರಿ ವೇಳೆ ಬಿರುಗಾಳಿ, ಸಿಡಿಲು, ಗುಡುಗಿನಿಂದ ಕೂಡಿದ ಭಾರೀ ಮಳೆಯಾಗಿದೆ. ಕೆಲವೆಡೆ ಮರಗಳು ಉರುಳಿ ಹಾನಿ ಸಂಭವಿಸಿದೆ.