ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ರಾಜ್ಯವನ್ನೇ ತಲ್ಲಣಗೊಳಿಸಿದೆ. ಭಾರೀ ಮಳೆಗೆ ಕರ್ನಾಟಕ ತತ್ತರಿಸಿದೆ. 

 ಕಲಬುರಗಿ (ಅ.15):  ಕಳೆದ ಐದು ದಿನಗಳಿಂದ ಮಳೆಯಾಗುತ್ತಿರುವ ಕಲಬುರಗಿಯಲ್ಲಿ ಮಂಗಳವಾರ ರಾತ್ರಿಯಿಂದೀಚೆಗೆ ಎರಡು ದಶಗಳಲ್ಲೇ ಇದೇ ಮೊದಲು ಎನ್ನುವಂತೆ ಇಡೀ ರಾತ್ರಿ ಬಿಡದೆ ಮಳೆ ಸುರಿದಿದೆ. ಧಾರಾಕಾರ ಮಳೆಗೆ ಕಲಬುರಗಿ ನಗರ ಭಾಗಶಃ ಮುಳುಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಾರು 10 ಗಂಟೆ ಸುರಿದ ಬಿರುಸಿನ ಮಳೆಗೆ ನದಿ, ಹಳ್ಳಕೊಳ್ಳ, ನಾಲಾ, ಕೆರೆಗಳು ತುಂಬಿ ತುಳುಕುತ್ತಿವೆ. ಭೀಮಾ, ಬೆಣ್ಣೆತೊರಾ, ಮುಲ್ಲಾಮಾರಿ, ಗಂಡೋರಿ, ಅಮರ್ಜಾ, ಬೆಣ್ಣೆ ತೊರಾ ನದಿಗಳು ಉಕ್ಕಿದ್ದು, ದಡದ ಹೊಲಗದ್ದೆ, ಹಳ್ಳಿಗರ ಬದುಕು ಮಳೆ ನೀರಲ್ಲಿ ಕೊಚ್ಚಿ ಹೋಗಿದೆ.

ನಗರದ ಕೆಳ ಪ್ರದೇಶಗಳ 20ಕ್ಕೂ ಹೆಚ್ಚು ಬಡಾವಣೆಗಳಲ್ಲಿನ ಮನೆಗಳಿಗೆ ಹಾಗೂ ಜಿಲ್ಲೆಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಜನ ನಿದ್ದೆಗೆಟ್ಟು ಇಡೀ ರಾತ್ರಿ ತಮ್ಮ ಸಾಮಾನು, ಸರಂಜಾಮು, ದವಸ- ಧಾನ್ಯ ಸೇರಿದಂತೆ ಇಡೀ ಬದುಕೇ ಮುಳುಗೋದನ್ನ ತಪ್ಪಿಸಿ ಸುರಕ್ಷಿತವಾಗಿರಲು ಹರಸಾಹಸಪಟ್ಟಿದ್ದಾರೆ.

ವರುಣನ ಅಬ್ಬರಕ್ಕೆ ನಡುಗಿದ ಬೆಂಗಳೂರು: ಹೈರಾಣಾದ ಜನತೆ ..

ಎಲ್ಲೆಡೆ ನೀರೇ ನೀರು: ಕಲಬುರಗಿ ನಗರದಲ್ಲಿ ಎಲ್ಲಿ ನೋಡಿದರಲ್ಲಿ ನೀರೇ ನೀರು. ಸೂಪರ್‌ ಮಾರ್ಕೆಟ್‌, ಬಸ್‌, ರೈಲು ನಿಲ್ದಾಣ, ರಿಂಗ್‌ ರಸ್ತೆ ಸೇರೆ ಎಲ್ಲ ಕಡೆ ನೀರು ನುಗ್ಗಿದೆ.

ಶಹಾಬಾದ್‌-ವಾಡಿ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿ ಸಂಚಾರ ಸ್ಥಗಿತಗೊಂಡಿದೆ. ಕಾಗಿಣಾ ಉಕ್ಕೇರಿದ್ದರಿಂದ ಕಲಬುರಗಿ-ಸೇಡಂ, ಆಳಂದದಲ್ಲಿ ತಡಕಲ್‌ ಹೆದ್ದಾರಿ ಮೇಲೆ ನೀರು ನುಗ್ಗಿದ್ದು ಸಂಚಾರ ಬಂದ್‌ ಆಗಿದೆ. ಮಳೆಗೆ ಅಫಜಲ್ಪುರ ತಾಲೂಕಲ್ಲಿ ನಂದರಗಾ, ಇಂಗಳಗಿ, ಔರಾದ್‌, ಹಸರಗುಂಡಗಿ, ಬಂದರವಾಡ ಇಲ್ಲೆಲ್ಲಾ 80ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ. ಜಿಲ್ಲೆಯ ವಯೋವೃದ್ಧರ ಪ್ರಕಾರ ಎರಡು ದಶಕಗಳಲ್ಲಿ ಈ ರೀತಿಯ ಮಳೆ ಕಂಡೇ ಇಲ್ಲ. ರಾತ್ರಿಯಿಡೀ ಮಳೆ ಸುರಿದಿರುವುದು, ಈ ರೀತಿ 100ಕ್ಕೂ ಹೆಚ್ಚು ಗ್ರಾಮಗಳು ಜಿಲ್ಲೆಯಲ್ಲಿ ಜಲಾವೃತವಾಗಿರುವುದು ಇದೇ ಮೊದಲು.