Asianet Suvarna News Asianet Suvarna News

Davanagere: ಅನ್ನದಾತರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ ವರುಣ: ಮಳೆ ಹಾನಿ ಪ್ರದೇಶಕ್ಕೆ ಡಿಸಿ ಭೇಟಿ

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆ ವ್ಯಾಪಕ ಪ್ರಮಾಣದ ಬೆಳೆ, ಆಸ್ತಿ ನಷ್ಟ ಆಗಿದೆ.

heavy rain in davanagere paddy crop damaged gvd
Author
Bangalore, First Published May 20, 2022, 2:46 AM IST

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಮೇ.20): ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆ (Rain) ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆ ವ್ಯಾಪಕ ಪ್ರಮಾಣದ ಬೆಳೆ, ಆಸ್ತಿ ನಷ್ಟ ಆಗಿದೆ. ಜಿಲ್ಲೆಯ ಹಲವೆಡೆ ಹಲವು ಗ್ರಾಮಗಳ ಮಧ್ಯೆ  ರಸ್ತೆ ಸಂಪರ್ಕ ಕಡಿತವಾಗಿದೆ. ಹರಿಹರ ತಾಲ್ಲೂಕಿನ ಸಂಕ್ಲೀಪುರ ಗುಳದಹಳ್ಳಿ ನಡುವೆ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಕಡಿತವಾಗಿದೆ. ಅದೇ ರೀತಿ ಕಡಲೇಬಾಳು  ಮತ್ತು ಅರಸಾಪುರದ ನಡುವೆ ಸೇತುವೆ ಮೇಲೆ ನೀರು ಹರಿದು ಸಂಪರ್ಕ ಕಡಿತವಾಗಿದೆ. ಮಳೆ ಹಾನಿ ಪ್ರದೇಶಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ (DC Mahantesh Bilagi) ಸೇರಿದಂತೆ ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
  
ಹಲವು ಮನೆಗಳಿಗೆ ನುಗ್ಗಿದ ನೀರು-84 ಮನೆ  ಕುಸಿತ: ಚನ್ನಗಿರಿ ತಾಲ್ಲೂಕಿನ ಜಯಂತಿನಗರ, ಕೋಟಿಹಾಳ್, ಚಿಕ್ಕ ಕುರುಹಳ್ಳಿ, ಚಿರಡೋಣಿ ಗ್ರಾಮಗಳಲ್ಲಿ 33  ಮನೆಗೆ ನುಗ್ಗಿದ ನೀರಿನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮನೆಗಳಲ್ಲಿ ವಾಸವಾಗಿದ್ದ  87ಕ್ಕೂ ಹೆಚ್ಚು ಜನರನ್ನು ಬೇರೆಡೆ ಸ್ಥಳಾಂತರ  ಮಾಡಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ದಾವಣಗೆರೆ ತಾಲ್ಲೂಕಿನ ಚಿನ್ನಸಮುದ್ರ ಹೆಬ್ಬಾಳು ಗ್ರಾಮದ 25ಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ಪರದಾಡಿದ್ದಾರೆ. ಜಿಲ್ಲೆಯಲ್ಲಿ 17 ಸಂಪೂರ್ಣ, 67 ಭಾಗಶಃ  ಸೇರಿ 84 ಮನೆ ಕುಸಿತವಾಗಿದ್ದು ಹಲವರು ನೆಲೆ ಕಳೆದುಕೊಂಡಿದ್ದಾರೆ.  ಮನೆ ಕುಸಿತದಿಂದ ಒಟ್ಟು 2.5 ಕೋಟಿ ವೆಚ್ಚ ಹಾನಿಯಾಗಿದೆ ಎಂದು ಡಿಸಿ ಎಸಿ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ANY DESK APP ಡೌನ್ಲೋಡ್ ಮಾಡಿಸಿ ಲಕ್ಷಾಂತರ ದೋಚಿದ ಕಳ್ಳರು!

ಆಪಾರ ಪ್ರಮಾಣದ ಬೆಳೆ ಹಾನಿ  ಜಿಲ್ಲಾಡಳಿತದಿಂದ  5.5 ಕೋಟಿ  ಅಂದಾಜು: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹರಿಹರ ಹೊನ್ನಾಳಿ  ಚನ್ನಗಿರಿ ದಾವಣಗೆರೆ ತಾಲ್ಲೂಕಿನಲ್ಲಿ ವ್ಯಾಪಕ ಪ್ರಮಾಣದ ಬೆಳೆಹಾನಿಯಾಗಿದೆ ಹರಿಹರ ಹೊನ್ನಾಳಿ ದಾವಣಗೆರೆ ತಾಲ್ಲೂಕಿನಲ್ಲಿ 1878 ಹೆಕ್ಟೇರ್ ಭತ್ತದ ಬೆಳೆ ನೀರಲ್ಲಿ ಮುಳುಗಡೆಯಾಗಿದೆ. ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ನಂದಿತಾವರೆ, ಮಾಯಕೊಂಡ ಹೋಬಳಿ , ಮಲೇಬೆನ್ನೂರು ಹೋಬಳಿಯಲ್ಲಿ  65 ಹೆಕ್ಟೇರ್ ಪ್ರದೇಶದ ಅಡಿಕೆ ತೆಂಗು ಬಾಳೆ ಗೆ ಹಾನಿಯಾಗಿದೆ. ಜಿಲ್ಲಾಡಳಿತದಿಂದ ಡಿಸಿ ತಹಶೀಲ್ದಾರ್ ಹಂತದ ಅಧಿಕಾರಿಗಳು ಭೇಟಿ ನೀಡಿ ಒಟ್ಟು 5.5 ಕೋಟಿ ಮೌಲ್ಯದ ಬೆಳೆ ಹಾನಿ ಅಂದಾಜಿಸಿದ್ದಾರೆ.

ಅಣಜಿ ಗ್ರಾಮದಲ್ಲಿ ತರಕಾರಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಣಜಿ ಗ್ರಾಮದ  ಸಂತೋಷ ಎಂಬ ರೈತನ  ಹೊಲದಲ್ಲಿ ಎರಡುವರೆ ಎಕರೆ ಎಲೆಕೋಸು ಜಲಾವೃತ್ತವಾಗಿದೆ. ಈ ಮೂಲಕ ಲಕ್ಷಾಂತರ ರೂಗಳ ಆದಾಯದ  ನಿರೀಕ್ಷೆಯಲ್ಲಿದ್ದ ರೈತನ ಆಸೆಗೆ ತಣ್ಣೀರು ಎರೆಚಿದ್ದಾನೆ ಮಳೆರಾಯ. ಸಾಲ ಸೂಲ ಮಾಡಿ ಎರಡುವರೆ ಎಕರೆಯಲ್ಲಿ ಎಲೆಕೋಸು ಬೆಳೆದಿದ್ದ ರೈತ  ಔಷಧಿ ಗೊಬ್ಬರ ಕೂಲಿ ಎಂದು ಲಕ್ಷಾಂತರ ರೂ ವೆಚ್ಚ ಮಾಡಿದ್ದ. ಇನ್ನು ಎಂಟು ದಿನ ಬಿಟ್ಟಿದ್ದರೆ ಮಾರುಕಟ್ಟೆಯಲ್ಲಿ ಕೋಸು ಮಾರುವವನಿದ್ದ ಬೆಳೆ ಕಳೆದುಕೊಂಡ ರೈತ ಹೊಲದಲ್ಲಿ ಕಣ್ಣೀರು ಹಾಕಿದ್ದಾನೆ. 

ಇನ್ನು ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಮಳೆಗಾಳಿಗೆ ಸಂತೋಷಕುಮಾರ್ ಎಂಬ ರೈತ ಬೆಳೆದ 11 ಎಕೆರೆ ಬಾಳೆ ಸಂಪೂರ್ಣ ನೆಲಕಚ್ಚಿದೆ. ಮಳೆಗಾಳಿಗೆ ಬಾಳೆ ಗೊನೆ ಮುರಿದುಬಿದ್ದಿದ್ದು, ತುಂಬಲಾರದ ನಷ್ಟವುಂಟಾಗಿದೆ. ಈ ಬಾರಿ 15 ಲಕ್ಷಕ್ಕು ಹೆಚ್ಚು ಆದಾಯ ನಿರೀಕ್ಷಿಸಿದ್ದ ರೈತನಿಗೆ ತೀವ್ರ ನಿರಾಸೆಯಾಗಿದೆ. 

ದಾವಣಗೆರೆಯಲ್ಲೂ ಮಳೆ ಅಬ್ಬರ, ರೈತರು ಕಂಗಾಲು, ಒಂದೇ ದಿನ 55.16 ಲಕ್ಷ ನಷ್ಟ

1 ರಿಂದ 10 ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಣೆ: ವ್ಯಾಪಕ ಮಳೆ ಸುರಿದಿದ್ದು, ಹಳ್ಳ ಕೊಳ್ಳ ತುಂಬಿರುವುದರಿಂದ ಮಕ್ಕಳಿಗೆ ತೊಂದೆರೆಯಾಗಬಾರದೆಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮೇ 20ರಂದು ಹೈಸ್ಕೂಲ್‌ವರೆಗಿನ ಶಾಲೆಗಳಿಗೆ ರಜೆ ನೀಡಿದ್ದಾರೆ. ಭಾರಿ ಮಳೆಯಿಂದಾಗಿ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ದಿನ ಮಾತ್ರ ರಜೆ ಘೋಷಿಸಿದ್ದಾರೆ. ನಿನ್ನೆ ರಾತ್ರಿ ದಾವಣಗೆರೆ ತಾಲ್ಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು ಹೆಬ್ಬಾಳು ಗ್ರಾಮ, ಜಗಳೂರು ತಾಲ್ಲೂಕಿನ ಹಿರೇ ಅರಕೆರೆ  ಶಾಲಾ ಆವರಣಕ್ಕೆ  ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದ  ಹೆಬ್ಬಾಳ ಗ್ರಾಮದ ರುದ್ರೇಶ್ವರ್ ಪ್ರೌಢಶಾಲಾ ಆವರಣಕ್ಕೆ ನೀರು ನುಗ್ಗಿ ವಿದ್ಯಾರ್ಥಿ ಶಿಕ್ಷಕರು ಪರದಾಡಿದ್ದಾರೆ.  ‌

Follow Us:
Download App:
  • android
  • ios