Asianet Suvarna News Asianet Suvarna News

Chikkamagaluru ಕಾರಿಗೆ ಅಪ್ಪಳಿಸಿದ ವಿದ್ಯುತ್ ಕಂಬ, ಕೂದಳೆಲೆ ಅಂತರದಲ್ಲಿ ಪ್ರಯಾಣಿಕರು ಪಾರು

ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರಕ್ಕೆ ನಾನಾ ಅನಾಹುತಗಳಾಗಿವೆ. ಒಂದೆಡೆ ಬಿರುಗಾಳಿ ಅಬ್ಬರಕ್ಕೆ ಮರ ಉರುಳಿ ಬಿದ್ದು ಆಟೋ ನುಜ್ಜುಗುಜ್ಜು ಆಗಿದ್ದರೆ ಮತ್ತೊಂದೆಡೆ ಭಾರೀ ಗಾಳಿ-ಮಳೆಗೆ ಬೃಹತ್ ಮರ ಹಾಗೂ ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದರೂ ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

heavy rain in Chikkamagaluru gow
Author
Bengaluru, First Published May 5, 2022, 4:26 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮೇ.5) : ಭಾರೀ ಗಾಳಿ-ಮಳೆಗೆ ಬೃಹತ್ ಮರ ಹಾಗೂ ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದರೂ ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನಲ್ಲಿ ಬುಧವಾರ ಸಂಜೆಯಿಂದಲೂ ಮಳೆಯಾಗುತ್ತಿದೆ. ಕಳೆದ ರಾತ್ರಿ ಕೊಟ್ಟಿಗೆಹಾರ, ಬಾಳೂರು, ಬಣಕಲ್, ಚಾರ್ಮಾಡಿ  ಘಾಟ್ ಭಾಗದಲ್ಲಿ ಭಾರೀ ಮಳೆಯಾಗಿದೆ. 

ಬೆಳಿಗ್ಗೆ ತುಂತುರು ‌ಮಳೆ ಜೊತೆಗೆ ಗಾಳಿಗೆ ಬಿದ್ದ ಮರ: ಇಂದು ಬೆಳಗ್ಗೆ ತುಂತುರು ಮಳೆ ಜೊತೆಗೆ ಬೀಸಿದ ಭಾರೀ ಗಾಳಿಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ರಸ್ತೆ ಬದಿಯ ಬೃಹತ್ ಮರ ಹಾಗೂ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಈ ವೇಳೆ ನಿಡುವಾಳೆ ಸಮೀಪದ ಹೆಮ್ಮಕ್ಕಿ  ಯಿಂದ ಮಂಗಳೂರು ಆಸ್ಪತ್ರೆಗೆ ಹೋಗುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಮರ ಹಾಗೂ ವಿದ್ಯುತ್ ಕಂಬ ಕಾರಿನ ಮುಂಭಾಗ ಬಿದ್ದಿದ್ದರಿಂದ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ರಸ್ತೆಗೆ ಬಿದ್ದ ಮರ ಕೆಲ ಕಾಲ ರಸ್ತೆ ಸಂಚಾರ ಬಂದ್ : ನಡು ರಸ್ತೆಯಲ್ಲಿ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಬಾಳೆಹೊನ್ನೂರು-ಕೊಟ್ಟಿಗೆಹಾರ ಮಾರ್ಗ ಕೂಡ ಕೆಲ ಕಾಲ ಬಂದ್ ಆಗಿತ್ತು. ಇದರಿಂದ ಮರ ತೆರವು ಮಾಡುವತನಕ ವಾಹನ‌ಸಂಚಾರರು ನಿಂತಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು.ಮರ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿದ್ದ ಕೃಷ್ಣ ಹಾಗೂ ಮಂಜುನಾಥ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಿಯರು ಹಾಗೂ ಪೊಲೀಸರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ರೋಡ್ ಕ್ಲಿಯರ್ ಮಾಡಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ಬುರ್ಖಾಧಾರಿಗಳ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಕಣ್ಣು! 

ಮರ ಉರುಳಿ ಬಿದ್ದು ಆಟೋ ನುಜ್ಜುಗುಜ್ಜು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎಂಟತ್ತು ದಿನಗಳಿಂದ ಬಿಡುವ ನೀಡಿದ್ದ ವರುಣದೇವ ಇಂದು ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು, ಬಯಲುಸೀಮೆ ಭಾಗದಲ್ಲಿ ಮಳೆ ಆಗಿದ್ದು ಬಿಸಿಲಿನ ಧಗೆಯಿಂದ ಹೈರಾಣು ಆಗಿದ್ದ ಜನರಿಗೆ ತಸು ನೆಮ್ಮದಿ ನೀಡಿತ್ತು. 

ಬಯಲು ಸೀಮೆ ಮಲೆನಾಡಿನಲ್ಲಿ ಮುದ ನೀಡಿದ ಮಳೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು , ಬಯಲು ಸೀಮೆಭಾಗದಲ್ಲಿ ಮಳೆ ಆಗಮನವಾಗಿದೆ. ಬಯಲು ಸೀಮೆ ಭಾಗವಾದ ಚಿಕ್ಕಮಗಳೂರು, ಕಡೂರು, ತರೀಕರೆ ಭಾಗದಲ್ಲಿ ಕೆಲ ಕಾಲ ಮಳೆ ಸುರಿದಿದೆ. ಇನ್ನು ಮಲೆನಾಡಿನ ಭಾಗವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ. ಇಳಿ ಸಂಜೆಯಲ್ಲಿ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ವಾಹನ ಸವಾರರು ವಾಹನಗಳನ್ನ ಚಲಾಯಿಸಲು ಪರದಾಟ ನಡೆಸಿದ್ದಾರೆ.

ಕೆಲ ವಾಹನ ಸವಾರರು ವಾಹನಗಳನ್ನ ಚಲಾಯಿಸಲಾಗಿದೆ ಮಳೆ ಕಡಿಮೆ ಆಗುವವರೆಗೂ ಗಾಡಿಯನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ಮಳೆ ಕಡಿಮೆಯಾದ ಬಳಿಕ ಹೊರಟಿದ್ದಾರೆ. ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲೇ ಮರಗಳು ಧರೆಗುರುಳಿದ್ದು, ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು ವಿದ್ಯುತ್ ನಾಲ್ಕೈದು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದಿದ್ದು, ಕೆಲ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದ್ದು ಜನ ಕತ್ತಲಲ್ಲಿ ಕಳೆಯುವಂತಾಗಿದೆ. ಭಾರೀ ಗಾಳಿಗೆ ಕೆಲ ಅಂಗಡಿಗಳ ಅಕ್ಕಪಕ್ಕದಲ್ಲಿ ಕಟ್ಟಿದ್ದ ಪ್ಲಾಸ್ಟಿಕ್ ಟಾರ್ಪಲ್ ಕೂಡ ಗಾಳಿಯ ಅಬ್ಬರಕ್ಕೆ ಹಾರಿ ಹೋಗಿವೆ. 

ರಾಜ್ಯಾದ್ಯಂತ ಬಳ್ಳಾರಿ ಮಹಿಳಾ ಬೈಕರ್‌ಗಳ ಮಹಿಳಾ ಭಯಮುಕ್ತ ಅಭಿಯಾನ

ಮಳೆಯಿಂದ ಮಲೆನಾಡಿನಲ್ಲಿ ಮಂಜು ಕವಿದ ವಾತಾರವಣ : ಮಲೆನಾಡಿಭಾಗದಲ್ಲಿ ಸುರಿದ ಮಳೆಯಿಂದ  ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಅದ್ಬುತವಾದಂತಹ ಮಂಜಿನ ದ್ರಶ್ಯವಕ್ಯಾವ ನಿರ್ಮಾಣವಾಗಿತ್ತು. ದಟ್ಟಕಾನನದ ನಡುವೆ ಮಂಜು ಮುಸುಕಿದ ವಾತಾವರಣ ಪ್ರವಾಸಿಗರಿಗೆ ಹಿತವನ್ನು ನೀಡಿತು.ಮಳೆಯಿಂದಾಗಿ ಕೊಟ್ಟಿಗೆಹಾರ ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದು  ಸ್ಥಳೀಯರಿಗೆ ಹೊಸ ಅನುಭವ ನೀಡಿತು.

ಬಿರುಗಾಳಿ ಅಬ್ಬರಕ್ಕೆ ಮರ ಉರುಳಿ ಬಿದ್ದು ಆಟೋ ನುಜ್ಜುಗುಜ್ಜು: ಚಿಕ್ಕಮಗಳೂರು ನಗರದಲ್ಲೂ ಸುರಿದ ಮಳೆ ಸಾಕಷ್ಟು ಅನಾಹುತ ಸೃಷ್ಠಿ ಮಾಡಿದೆ. ಬಿರುಗಾಳಿಯ ಆರ್ಭಟಕ್ಕೆ ಮರ ಉರುಳಿ ಆಟೋ ಸಂಪೂರ್ಣ ನುಜ್ಜುಗುಜ್ಜು ಆಗಿರುವ ಘಟನೆ ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ಕೋಟೆ ಬಡಾವಣೆ ಸಮೀಪ ನಡೆದಿದೆ. ಗೌಡನಹಳ್ಳಿಯ ವೀರೇಶ್ ಎಂಬವರಿಗೆ ಸೇರಿದ ಆಟೋ ಸಂಪೂರ್ಣ ನುಜ್ಜುಗುಜ್ಜುಯಾಗಿದ್ದು ಆಟೋವನ್ನ ಮರದ ಕೆಳಗೆ ನಿಲ್ಲಿಸಿದಾಗ ಈ ಅವಘಡ ನಡೆದಿದೆ. ಆಟೋ ಸಮೀಪವೋ ಯಾರು ಇಲ್ಲದಿದ್ದರಿಂದ ತಪ್ಪಿದ ದೊಡ್ಡ ಅನಾಹುತ ತಪ್ಪಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow Us:
Download App:
  • android
  • ios