Asianet Suvarna News Asianet Suvarna News

ಮಳೆ ನಿಲ್ಲಲು ಮಳೆದೇವರ ಮೊರೆಹೋದ ರಾಜೇಗೌಡ : ಋುಷ್ಯ ಶೃಂಗೇಶ್ವರದಲ್ಲಿ ವಿಶೇಷ ಪೂಜೆ

  • ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ವ್ಯಾಪಕ ಹಾನಿ
  • ಅಕಾಲಿಕ ಮಳೆ ನಿಲ್ಲಿಸುವಂತೆ ಬುಧವಾರ ಶಾಸಕ ಟಿ.ಡಿ.ರಾಜೇಗೌಡ ಮಲೆನಾಡಿನ ಪ್ರಸಿದ್ಧ ಮಳೆದೇವರು ಕಿಗ್ಗಾದಲ್ಲಿ ವಿಶೇಷ ಪೂಜೆ 
Heavy rain affects on karnataka rajegowda special pooja in Rushyashrunga temple snr
Author
Bengaluru, First Published Nov 18, 2021, 6:48 AM IST

ಶೃಂಗೇರಿ (ನ.18):  ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ವ್ಯಾಪಕ ಹಾನಿಯಾಗುತ್ತಿದೆ. ಅಕಾಲಿಕ ಮಳೆ (Rain) ನಿಲ್ಲಿಸುವಂತೆ ಬುಧವಾರ ಶಾಸಕ ಟಿ.ಡಿ.ರಾಜೇಗೌಡ (TD rajegowda) ಮಲೆನಾಡಿನ ಪ್ರಸಿದ್ಧ ಮಳೆದೇವರು ಕಿಗ್ಗಾದಲ್ಲಿ (Kigga) ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಇಲ್ಲಿನ ಕಿಗ್ಗಾ ಶ್ರೀ ಋುಷ್ಯ ಶೃಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಮಳೆದೇವರು ಶ್ರೀ ಋುಷ್ಯ ಶೃಂಗೇಶ್ವರ ಸ್ವಾಮಿ ಹಾಗೂ ಶಾಂತಮ್ಮ ದೇವಿಗೆ ಮಳೆ ನಿಲ್ಲಿಸುವಂತೆ ರುದ್ರಾಭಿಷೇಕ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅನಂತರ ಮಾತನಾಡಿದ ಅವರು, ಅತಿವೃಷ್ಠಿಯಿಂದ ರಾಜ್ಯಾದ್ಯಾಂತ ವ್ಯಾಪಕ ಹಾನಿ ಉಂಟಾಗುತ್ತಿದೆ. ರೈತರು (Farmers) ಸಂಕಷ್ಟದಲ್ಲಿದ್ದಾರೆ. ಅಡಕೆ (areca), ಕಾಫಿ (Coffee), ಭತ್ತದ ಬೆಳೆ ನಾಶವಾಗುತ್ತಿದೆ ಎಂದರು.

ಮುಂಗಾರು ಮಳೆ (Monsoon Rain) ಆರಂಭಗೊಂಡ ನಂತರ ಇದುವರೆಗೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಅಕಾಲಿಕ ಮಳೆಯಿಂದ ಉಂಟಾಗುತ್ತಿರುವ ಮಳೆಯಿಂದಾಗಿ ಜನಜೀವನ ತತ್ತರಗೊಳ್ಳುತ್ತಿದೆ. ಈಗ ಬೆಳೆ ಕಟಾವಿನ ಸಮಯ. ಬೆಳೆ ಕಟಾವು ಮಾಡಲಾಗದೇ ರೈತರು ಆತಂಕದಲ್ಲಿದ್ದಾರೆ. ಈಗಾಗಲೇ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಅಳಿದುಳಿದ ಬೆಳೆಯೂ (Crops) ನಾಶವಾಗುತ್ತಿದೆ. ಶೃಂಗೇರಿ (Shringeri) ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಠಿ, ಅಕಾಲಿಕ ಮಳೆಯಿಂದ ವ್ಯಾಪಕ ಹಾನಿ ಉಂಟಾಗಿದೆ ಎಂದು ತಿಳಿಸಿದರು.

ಮಳೆ ದೇವರಲ್ಲಿ ಮಳೆ ನಿಲ್ಲಿಸುವಂತೆ ಪ್ರಾರ್ಥಿಸಿದ್ದೇನೆ. ಈ ಹಿಂದೆಯೂ ಇಲ್ಲಿ ಮಳೆ ಜಾಸ್ತಿಯಾದಾಗ ಪ್ರಾರ್ಥಿಸಿದ್ದೆ. ಡಿ.ಕೆ.ಶಿವಕುಮಾರ್‌ ಈ ಹಿಂದೆ ನೀರಾವರಿ ಸಚಿವರಾಗಿದ್ದಾಗ ರಾಜ್ಯದಲ್ಲಿ ಮಳೆಯಿಲ್ಲದೇ ಬರಗಾಲ ಉಂಟಾಗಿತ್ತು. ಆಗ ಇಲ್ಲಿ ಮಳೆಗಾಗಿ ಪ್ರಾರ್ಥಿಸಿದ್ದರು. ಅಕಾಲಿಕ ಮಳೆ ನಿಲ್ಲಿಸುವಂತೆ, ರಾಜ್ಯಕ್ಕೆ ಮಳೆಯಿಂದ ಉಂಟಾಗುತ್ತಿರುವ ತೊಂದರೆ ನಿಲ್ಲಿಸುವಂತೆ ಪ್ರಾರ್ಥಿಸಿದ್ದೇನೆ ಎಂದರು.

ಈ ಸಂದರ್ಭ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಇದ್ದರು.

ಉಗ್ರ ಮಳೆಗೆ ಮಲೆನಾಡು ತತ್ತರ :  ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿದ್ದ ಮಳೆ (Rain) ಭಾನುವಾರ ರಾತ್ರಿ ಅತಿಯಾಗಿ ಸುರಿದ ಪರಿಣಾಮ ಅಲ್ಲಲ್ಲಿ ಅವಾಂತರಗಳು ಸೃಷ್ಠಿಯಾಗಿವೆ.

ನಗರದ ಹಲವು ತಗ್ಗು ಪ್ರದೇಶಗಲ್ಲಿ ಮಳೆ ನೀರು ತುಂಬಿಕೊಂಡು ಅವಾಂತರ ಸೃಷ್ಠಿಯಾಗಿತ್ತು. ಮನೆಯೊಳಗೆ ರಾತ್ರಿ ನೀರು ಹರಿದ ಕಾರಣ ಜನರು ತೀವ್ರ ಸಂಕಷ್ಟ ಎದುರಿಸುವಂತಾಯಿತು.

ಮಲೆನಾಡಿನಾದ್ಯಂತ (Malnad) ಭಾನುವಾರ ಇಡೀ ದಿನ ಸುರಿದ ಮಳೆ ಒಂದೆಡೆಯಾದರೆ, ಇನ್ನೊಂದೆಡೆ ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿಯವರೆಗೆ ಗುಡುಗು ಸಿಡಿಲಿನೊಂದಿಗೆ ಭಾರೀ ಪ್ರಮಾಣದ ಮಳೆಯಾಗಿದೆ. ಇದರಿಂದ ಗದ್ದೆ, ತೋಟಗಳು ಜಲಾವೃತಗೊಂಡವು. ಕೊಯ್ಲಿಗೆ ಬಂದ ಫಸಲಿನ (Crop) ಮೇಲೆ ನೀರು ನುಗ್ಗಿದೆ. ರಸ್ತೆಗಳು ಕೊಚ್ಚಿ ಹೋಗಿವೆ.

ಬೆಳೆಗಳು ಹಾನಿ:  ತೀರ್ಥಹಳ್ಳಿ, ಹೊಸನಗರ (Hosanagara), ರಿಪ್ಪನ್‌ಪೇಟೆ, ಸಾಗರ (Sagar), ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಪ್ರದೇಶ, ಭದ್ರಾವತಿ, ಶಿಕಾರಿಪುರ, ಶಿರಾಳಕೊಪ್ಪ ಸೇರಿದಂತೆ ಜಿಲ್ಲೆಯೆಲ್ಲೆಡೆ ಗುಡುಗು, ಮಿಂಚು, ಸಿಡಿಲು ಸಹಿತ ಬಾರಿ ವರ್ಷಧಾರೆಯಾಗಿದೆ. ಪರಿಣಾಮ ಹಲವೆಡೆ ಕೋಯ್ಲಿಗೆ ಬಂದಿದ್ದ ಬೆಳೆಗಳು ನೀರಿನಲ್ಲಿ ತೇಲುವಂತಾಗಿದೆ. ಅಲ್ಲದೇ, ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಡಕೆ ಕೊಯ್ಲು ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಅಡಗೆ, ಬಾಳೆ, ರಾಗಿ, ಜೋಳ, ಹತ್ತಿ, ತರಕಾರಿ, ಜೋಳದ ಬೆಳೆಗಳು ಮಳೆಯಿಂದಾಗಿ ಹಾನಿಗೊಳಗಾಗಿದೆ.

ಜೋರಾಗಿ ಸುರಿದ ಮಳೆಯಿಂದಾಗಿ ಶಿವಮೊಗ್ಗದ (Shivamogga) ಅಣ್ಣಾನಗರದ ಕೆಲ ಮನೆಗಳಿಗೆ ನೀರು ನುಗ್ಗಿದೆ. ಮೋರಿಯಲ್ಲಿನ ಕಸವನ್ನು ತೆಗೆಯದ ಕಾರಣ ನೀರು ಸರಿಯಾಗಿ ಹರಿಯದೇ ಈ ಅವಾಂತರ ಸೃಷ್ಟಿಯಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇನ್ನು ನಗರದ ಕೆಎಸ್‌ಸಿಎ ಕ್ರೀಡಾಂಗಣವು ತಗ್ಗುಪ್ರದೇಶ ಆಗಿರುವುದರಿಂದ ಮಳೆಯ ನೀರಿನಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ತುಂಗಾ ನಗರದ ಹಲವು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿತು. ರಸ್ತೆಗಳಲ್ಲಿ ನೀರು ಉಕ್ಕಿ ಹರಿದು ಜನಸಂಚಾರಕ್ಕೆ ತೊಂದರೆಯಾಯಿತು

Follow Us:
Download App:
  • android
  • ios