ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ, ಅಭಿವೃದ್ಧಿ ಕಾಮಗಾರಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ (ಆ.29): ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ, ಜಿಲ್ಲೆಯ ಅಧಿಕಾರಿಗಳ ವಿರುದ್ಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಅಧಿಕಾರಿಗಳನ್ನು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕಾಮಗಾರಿಗಳ ಬಗ್ಗೆ ಸೂಕ್ತ ಮಾಹಿತಿ ನೀಡದೆ ಉಡಾಫೆ ಪ್ರದರ್ಶಿಸುತ್ತಿರುವ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿರುವ ಅಧಿಕಾರಿಗಳ ಧೋರಣೆಗೆ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಹೆಚ್ಡಿಕೆ ಮಂಡ್ಯ ಜಿಲ್ಲೆಯ ಅಧಿಕಾರಿಗಳ ವಿರುದ್ಧ ಈ ಮಟ್ಟಿಗೆ ಕೆಂಡಾಮಂಡಲವಾಗಿದ್ದಾರೆ.
ಮದ್ದೂರು ಕಮಿಷನರ್ಗೆ ತರಾಟೆ
ವಿಶೇಷವಾಗಿ ಮದ್ದೂರು ನಗರಸಭೆ ಕಮಿಷನರ್ ರಾಧಿಕಾ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಮದ್ದೂರಿನಲ್ಲಿ ಆಟೋ ಸ್ಟ್ಯಾಂಡ್ ನಿರ್ಮಾಣ ಮಾಡಲು ಯಾಕೆ ತೊಂದರೆ ಕೊಡುತ್ತಿದ್ದೀರಾ? ಸ್ಥಳೀಯ ಶಾಸಕರ ಮಾತು ಕೇಳಿಕೊಂಡು ಕಾಮಗಾರಿಗಳಿಗೆ ಅಡ್ಡಗಾಲು ಹಾಕುತ್ತಿದ್ದೀರಾ? ಶಾಸಕರಿಗೆ (MLA) ಏನಾದರೂ ಕೊಂಬಿದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.
ನೀವು ಕೆಲಸ ಮಾಡುತ್ತಿರುವುದು ಶಾಸಕರಿಗಾ ಅಥವಾ ಸಾರ್ವಜನಿಕರಿಗಾ? ಯಾವುದೇ ಸಮಸ್ಯೆ ಇದ್ದರೆ ಸಂಸದ ಹಾಗೂ ಕೇಂದ್ರ ಸಚಿವನಾದ ನನ್ನನ್ನು ಕೇಳುವ ಕನಿಷ್ಠ ಸೌಜನ್ಯವೂ ನಿಮಗಿಲ್ವೇ? ನನಗೆ ಏಕವಚನದಲ್ಲಿ ಮಾತನಾಡುವುದು ಬರುವುದಿಲ್ಲವೇ? ಎಂದು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
'ಇದು ತುಘಲಕ್ ರಾಜ್ಯನಾ?'
ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ತೀವ್ರವಾಗಿ ಗುಡುಗಿದ ಹೆಚ್ಡಿಕೆ, "ಇದು ತುಘಲಕ್ ರಾಜ್ಯನಾ? ನಾನು ಕಳೆದ 20 ವರ್ಷಗಳಿಂದ ಎಷ್ಟೋ ಶಾಸಕರನ್ನು ನೋಡಿದ್ದೇನೆ. ನಾನು ನೋಡಿರುವಷ್ಟು ಜನರನ್ನು ನೀವೆಲ್ಲಾ ನೋಡಲು ಸಾಧ್ಯವೇ?" ಎಂದು ಪ್ರಶ್ನಿಸಿ, ಸಾರ್ವಜನಿಕರ ಕೆಲಸಗಳಿಗೆ ಆದ್ಯತೆ ನೀಡದೆ ರಾಜಕೀಯ ಪ್ರಭಾವಕ್ಕೆ ಒಳಗಾಗುವ ಅಧಿಕಾರಿಗಳ ನಡೆಗೆ ತೀವ್ರ ಎಚ್ಚರಿಕೆ ನೀಡಿದರು.


