ಜಾರಕಿಹೊಳಿ ರಾಸಲೀಲೆ ಬೆನ್ನಲ್ಲೇ ಎಚ್ಡಿಕೆಯಿಂದಲೂ ಸಿಡಿ ಮ್ಯಾಟರ್ ಸವಾಲು
ಇತ್ತ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಎಲ್ಲೆಡೆ ಸಾಕಷ್ಟು ಸದ್ದಾಗುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಿಡಿ ಮ್ಯಾಟರ್ ಸವಾಲು ಹಾಕಿದ್ದಾರೆ.
ರಾಮನಗರ (ಮಾ.03): ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಸಿಡಿ ಕಿಂಗ್ ಅಂತಾ ಗೊತ್ತಿದೆ. ಅವರ ಬಳಿ ಇರುವ ನನ್ನ ಸಿಡಿಯನ್ನು ನಾಳೆ ಬೆಳಗ್ಗೆಯೇ ಬಿಡುಗಡೆ ಮಾಡಿ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸಿಡಿ ಬಿಡುಗಡೆ ಮಾಡಲು ಸೂಕ್ತ ಸಂದರ್ಭಕ್ಕಾಗಿ ಕಾಯುವುದು ಬೇಡ. ನಾಳೆ ಬೆಳಗ್ಗೆಯೇ ಬಿಡುಗಡೆ ಮಾಡಲಿ. ಅದೆಲ್ಲವನ್ನು ಎದುರಿಸುವ ಶಕ್ತಿಯನ್ನು ರಾಮನಗರದ ಜನರು ನೀಡಿದ್ದಾರೆ. ನನ್ನ ಹತ್ತಿರ ಅವರ ಆಟಗಳು ನಡೆಯುವುದಿಲ್ಲ ಎಂದು ಕಿಡಿಕಾರಿದರು.
'ಜೆಡಿಎಸ್ನವರು ಬಿಜೆಪಿಗರ ಮನೆ ಬಾಗಿಲಿಗೆ ಬರ್ತಿದ್ದಾರೆ : ಸಿಎಂರಿಂದ ಸಪೋರ್ಟ್'
ಚನ್ನಪಟ್ಟಣ ಮಾತ್ರವಲ್ಲ ರಾಜ್ಯದ ಯಾವುದೇ ಮೂಲೆಯಲ್ಲಾದರೂ ಯೋಗೇಶ್ವರ್ ರಾಜಕಾರಣಕ್ಕೆ ಬರಲಿ, ಅವರ ಸವಾಲನ್ನು ಸ್ವೀಕರಿಸಿ ಎದುರಿಸಲು ನಾನಲ್ಲ, ನನ್ನ ಕಾರ್ಯಕರ್ತರೇ ಸಾಕು. ಕಳೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾನು ಚುನಾವಣೆಯನ್ನೇ ನಡೆಸಲಿಲ್ಲ. ಕೇವಲ ನಾಮಪತ್ರ ಸಲ್ಲಿಸಿ ಹೋಗಿದ್ದೆ. ಒಂದು ದಿನವೂ ಬಂದು ಕ್ಷೇತ್ರದಲ್ಲಿ ಪ್ರಚಾರ ಮಾಡಲಿಲ್ಲ. ನನ್ನ ಕಾರ್ಯಕರ್ತರೇ ಚುನಾವಣೆ ನಡೆಸಿದರು. ಇದನ್ನು ಯೋಗೇಶ್ವರ್ ಬಹುಶಃ ಮರೆತಿರಬೇಕು ಎಂದು ಹೇಳಿದರು.
ಯೋಗೇಶ್ವರ್ ಬಗ್ಗೆ ಚರ್ಚೆ ನಡೆಸುವುದೇ ಅನವಶ್ಯಕ. ಪದೇ ಪದೇ ಚರ್ಚಿಸಿ ಅವರ ಮಟ್ಟಕ್ಕೆ ಇಳಿಯಲು ನನಗೆ ಇಷ್ಟವಿಲ್ಲ. ರಾಜಕಾರಣ ಮಾಡುವ ಸಂದರ್ಭದಲ್ಲಿ ರಾಜಕಾರಣ ಮಾಡುತ್ತೇನೆ. ಅವರಿಗೆ ಇರುವ ಕೆಲಸ ನೋಡಿಕೊಳ್ಳಲಿ ಎಂದು ಹೇಳಿದರು.