Asianet Suvarna News Asianet Suvarna News

ದೇವೇಗೌಡರ ಮಾತು ನನಗೆ ಆಶೀರ್ವಾದ: ನಾರಾಯಣ ಗೌಡ

ದೇವೇಗೌಡರು ನನಗೆ ತಂದೆ ಸಮಾನ. ಅವರ ಗರಡಿಯಲ್ಲೇ ನಾನು ರಾಜಕೀಯವಾಗಿ ಬೆಳೆದವನು. ಅವರ ಯಾವುದೇ ಮಾತನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.

HD Devegowda words are blessing says kc narayan gowda
Author
Bangalore, First Published Jun 27, 2020, 11:01 AM IST

ಮಂಡ್ಯ/ ಕೆ.ಆರ್‌.ಪೇಟೆ(ಜೂ.27): ಜೆಡಿಎಸ್‌ ಕಾರ್ಯಕರ್ತ ಎಚ್‌.ಟಿ. ಮಂಜು ಕಲ್ಲು ಗಣಿ ಉದ್ಯಮ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ದೇವೇಗೌಡರು ಸಮಯ ನೀಡಿದರೆ ನಾನೇ ಖುದ್ದಾಗಿ ಅವರಿರುವ ಸ್ಥಳಕ್ಕೆ ಹೋಗಿ ಸಮಗ್ರ ಮಾಹಿತಿ ಒದಗಿಸುತ್ತೇನೆ. ಆದರೆ ಮಾಜಿ ಪ್ರಧಾನಿ ದೇವೇಗೌಡರು ಮಾತ್ರ ಪ್ರತಿಭಟನೆ ಮುಂದಾಗದಂತೆ ಜಿಲ್ಲಾ ಮಂತ್ರಿ ನಾರಾಯಣಗೌಡ ಶುಕ್ರವಾರ ಮನವಿ ಮಾಡಿದರು.

ಕೆ.ಆರ್‌ ಪೇಟೆಯಲ್ಲಿ ಅವರು 17 ಕೋಟಿ ರು. ಕುಡಿಯುವ ನೀರಿನ ಘಟಕಕ್ಕೆ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾರಾಯಣಗೌಡರು, ದೇವೇಗೌಡರು ನನಗೆ ತಂದೆ ಸಮಾನ. ಅವರ ಗರಡಿಯಲ್ಲೇ ನಾನು ರಾಜಕೀಯವಾಗಿ ಬೆಳೆದವನು. ಅವರ ಯಾವುದೇ ಮಾತನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ ಎಂದರು.

ಪ್ರತಿಭಟನೆ ಬೇಡ:

ಕಲ್ಲು ಗಣಿಗಾರಿಕೆ ವಿಚಾರದಲ್ಲಿ ದೇವೇಗೌಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ತಕ್ಷಣ ಅಧಿಕಾರಿಗಳ ಸಭೆ ಕರೆಯುತ್ತೇನೆ. ಬಳಿಕ ದೇವೇಗೌಡರು ಸಮಯ ನೀಡಿದರೆ ಅವರ ಹೇಳಿದ ಸ್ಥಳಕ್ಕೆ ಹೋಗಿ ಮಾಹಿತಿ ಒದಗಿಸುತ್ತೇನೆ. ಆದರೆ ಮಾಜಿ ಪ್ರಧಾನಿ ದೇವೇಗೌಡರು ಮಾತ್ರ ಪ್ರತಿಭಟನೆಗೆ ಮುಂದಾಗಬಾರದು ನಾರಾಯಣಗೌಡ ಮನವಿ ಮಾಡಿದರು.

9 ಕೋಟಿ ರು.ರಾಜಸ್ವ ಧನ ಕಟ್ಟಿಲ್ಲ:

ದೇವೇಗೌಡರು ಪ್ರತಿಭಟನೆಗೆ ಮುಂದಾಗದೇ ಸ್ವಲ್ಪ ಸಮಯಾವಕಾಶ ನೀಡಬೇಕು. ಈ ಮಂಜು ಎನ್ನುವವರು ಎರಡು ಕ್ವಾರಿಗೆ ಪರವಾನಿಗೆ ಪಡೆದಿದ್ದರು. ಆದರೆ 9 ಕೋಟಿ ರು. ರಾಯಲ್ಟಿಬಾಕಿ ಉಳಿಸಿಕೊಂಡಿದ್ದಾರೆ. ಜೊತೆಗೆ ಮಂಜು ಕ್ವಾರಿಯಿಂದ ಸಾಹುಕಾರ್‌ ಚನ್ನಯ್ಯ ನಾಲೆಗೆ ಧಕ್ಕೆಯಾಗಿತ್ತು. ಕೆಲವು ವಾರಗಳ ಕಾಲ ನೀರು ನಿಲ್ಲಿಸಿ, ದುರಸ್ತಿ ಮಾಡಿಸಲಾಗಿದೆ ಎಂದು ವಿವರಣೆ ನೀಡಿದರು.

 

ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಇದ್ದಾಗಲೇ ಕ್ವಾರಿಯನ್ನು ನಿಲ್ಲಿಸಲು ಆದೇಶ ಮಾಡಲಾಗಿತ್ತು. ಈ ಎಲ್ಲ ವಿಚಾರವನ್ನು ದೇವೇಗೌಡರ ಗಮನಕ್ಕೆ ತರಲಿಲ್ಲ ಅಷ್ಟೆ. ಹಾಗಾಗಿ ದೇವೇಗೌಡರು ಆರೋಪ ಮಾಡಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರಿಗೂ ಈ ವಿಚಾರ ಗೊತ್ತು. ಸಿ.ಎಸ್‌. ಪುಟ್ಟರಾಜು ಉಸ್ತುವಾರಿ ಸಚಿವರಾಗಿದ್ದಗಲೂ ಮಾಹಿತಿ ಇತ್ತು. ಜಿಲ್ಲೆಯ ಎಲ್ಲ ಅಧಿಕಾರಿಗಳನ್ನು ಕರೆದು ಸಭೆ ಮಾಡುತ್ತಿದ್ದೇನೆ. ಸಂಪೂರ್ಣ ಮಾಹಿತಿ ಪಡೆದು ಮುಖ್ಯಮಂತ್ರಿಗಳಿಗೆ ವಿವರಣೆ ನೀಡುತ್ತೇನೆ. ಗಣಿ ಇಲಾಖೆ ಸಚಿವರ ಗಮನಕ್ಕೂ ತರುತ್ತೇನೆ. ಬಳಿಕ ದೇವೇಗೌಡರಿಗೂ ಮಾಹಿತಿ ಒದಗಿಸುತ್ತೇನೆ ಎಂದು ಸಚಿವರು ಸ್ಪಷ್ಟಪಡಿಸಿದರು.

Follow Us:
Download App:
  • android
  • ios