Asianet Suvarna News Asianet Suvarna News

'ಕನಿಕರವೇ ಇಲ್ಲದ ಸಿಎಂ ರಾಜ್ಯಕ್ಕೇ ಭಾರ'

ಜನರ ಸಂಕಷ್ಟವನ್ನು ಅಂಕಿ-ಅಂಶಗಳ ಆಧಾರದಲ್ಲಿ ನೋಡುವ ಮುನ್ನ ಹೃದಯದ ಕಣ್ಣಿನಿಂದ ನೋಡಬೇಕು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ 

HD Devegowda Slams CM Bs yediyurappa snr
Author
Bengaluru, First Published Oct 11, 2020, 12:36 PM IST

ದೊಡ್ಡಬಳ್ಳಾಪುರ (ಅ.11):  ನೊಂದವರ ಬಗ್ಗೆ ಕನಿಕರ ಇಲ್ಲದ ಮುಖ್ಯಮಂತ್ರಿ ಈ ರಾಜ್ಯಕ್ಕೆ ಭಾರ ಎನ್ನದೆ ವಿಧಿಯಿಲ್ಲ. ನಾಯಕರಾದವರು ಜನರ ಸಂಕಷ್ಟವನ್ನು ಅಂಕಿ-ಅಂಶಗಳ ಆಧಾರದಲ್ಲಿ ನೋಡುವ ಮುನ್ನ ಹೃದಯದ ಕಣ್ಣಿನಿಂದ ನೋಡಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.

ಇಲ್ಲಿನ ಖಾಸಗಿ ಸಮುದಾಯ ಭವನದಲ್ಲಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್‌ ಚುನಾವಣೆ ಮತಯಾಚನೆ ಸಭೆಯಲ್ಲಿ ಅವರು, ಪಕ್ಷದ ಅಭ್ಯರ್ಥಿ ಎ.ಪಿ.ರಂಗನಾಥ್‌ ಪರ ಮತಯಾಚಿಸಿ ಮಾತನಾಡಿದರು. ಕೊರೋನಾ ಸಂದರ್ಭದಲ್ಲಿ ಶಿಕ್ಷಕರ ಕಷ್ಟಗಳ ಬಗ್ಗೆ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹಂತದಲ್ಲಿ ಯಾವ ಪಕ್ಷ ಶಿಕ್ಷಕರ ಪರವಾಗಿ ನಿಂತಿದೆ ಎಂಬುದನ್ನೂ ವಿವರಿಸಿ ಹೇಳಬೇಕಿಲ್ಲ. ಕನಿಕರವಿಲ್ಲದ ಸರ್ಕಾರದ ಧೋರಣೆಯನ್ನು ಉಗ್ರವಾಗಿ ಖಂಡಿಸುವುದು ಅನಿವಾರ‍್ಯ ಎಂದರು.

90ರ ದಶಕದಲ್ಲಿ ಯಾರ ಹೆಗಲ ಮೇಲೆ ಕೂತಿದ್ರು? : ಸಿದ್ದುಗೆ ದೇವೇಗೌಡ ಟಾಂಗ್‌ .

ಆತ್ಮಾವಲೋಕನ ಮಾಡಿಕೊಳ್ಳಿ:  ಜೆಡಿಎಸ್‌ ಪಕ್ಷವೇ ಅಲ್ಲ ಎನ್ನುವವರು ಎಲ್ಲಿಂದ ಬೆಳೆದು ಬಂದವರು ಎಂಬುದನ್ನು ಒಮ್ಮೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಪಕ್ಷ ಇದೆಯೋ ಇಲ್ಲವೋ ಎಂಬುದನ್ನು ತೋರಿಸುವ ಕಾಲ ಬರುತ್ತೆ. ತುಚ್ಛವಾಗಿ ಮಾತನಾಡುವ ಮುನ್ನ ಅವರ ಆತ್ಮವನ್ನು ಅವರೇ ಪ್ರಶ್ನಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಟೀಕಾಪ್ರಹಾರ ನಡೆಸಿದರು.

ಮಧುಗಿರಿ ಶಾಸಕ ವೀರಭದ್ರಯ್ಯ ಮಾತನಾಡಿ, ಶಿಕ್ಷಕರ ಪರ ಕಾಳಜಿ ಹೊಂದಿರುವ ಎ.ಪಿ.ರಂಗನಾಥ್‌ ಮೂಲತಃ ಹೋರಾಟದ ಹಾದಿಯಲ್ಲಿ ಬೆಳೆದು ಬಂದವರು. ವಕೀಲರ ಪ್ರತಿನಿಧಿಯಾಗಿಯೂ ಹಲವು ಸುಧಾರಣೆಗಳಿಗೆ ಶ್ರಮಿಸಿದ್ದಾರೆ ಎಂದರು.

ಶಿರಾ ಬೈ ಎಲೆಕ್ಷನ್‌ಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ: ರಂಗೇರಿದ ಉಪಚುನಾವಣೆ..! ..

ಸೂಡಿ ಸುರೇಶ್‌, ಪ್ರೊ.ರವಿಕಿರಣ್‌, ಆನಂದಮೂರ್ತಿ ಮತ್ತಿತರರು ಶಿಕ್ಷಕರ ಸಮಕಾಲೀನ ಸಮಸ್ಯೆಗಳ ಕುರಿತು ಮಾತನಾಡಿದರು. ಕಾರ‍್ಯಕ್ರಮದಲ್ಲಿ ಪಕ್ಷದ ಅಭ್ಯರ್ಥಿ ಎ.ಪಿ.ರಂಗನಾಥ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ವಿಧಾನಪರಿಷತ್‌ ಸದಸ್ಯ ರಮೇಶ್‌ಗೌಡ, ಜಿಪಂ ಸದಸ್ಯ ಎಚ್‌.ಅಪ್ಪಯ್ಯಣ್ಣ, ಬುಟ್ಕಾ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಡಾ.ಪ್ರಕಾಶ್‌, ರಾಜೇಗೌಡ, ಕೆಂಪೇಗೌಡ, ಗಿರೀಶ್‌, ಮೋಹನ್‌ನಾಯಕ್‌, ರಂಗನಾಥ್‌, ತ.ನ.ಪ್ರಭುದೇವ್‌, ಅಂಜನಗೌಡ, ಕೆಂಪರಾಜು, ವಿ.ಎಸ್‌.ರವಿಕುಮಾರ್‌ ಮತ್ತಿತರರು ಪಾಲ್ಗೊಂಡರು.

Follow Us:
Download App:
  • android
  • ios