ನನ್ನ 40 ವಷರ್ಗಳ ರಾಜಕಾರಣದಲ್ಲಿ ದಲಿತ ಸಮಾಜದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಅಂತಹ ಸಮಾಜಕ್ಕೆ ನಾನು ಇರುವ ತನಕ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಕೊಳ್ಳೇಗಾಲ (ಏ.28): ನನ್ನ 40 ವಷರ್ಗಳ ರಾಜಕಾರಣದಲ್ಲಿ ದಲಿತ ಸಮಾಜದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಅಂತಹ ಸಮಾಜಕ್ಕೆ ನಾನು ಇರುವ ತನಕ ಅನ್ಯಾಯವಾಗಲು ಬಿಡುವುದಿಲ್ಲ. ಒಂದು ವೇಳೆ ಅನ್ಯಾಯವಾದರೆ ನಾನು ಅಧಿಕಾರ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್‌ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Add Asianetnews Kannada as a Preferred SourcegooglePreferred

ದಲಿತ ಸಮಾಜ ಕ್ಷುಲ್ಲಕ ವಿಚಾರಗಳಿಗಾಗಿ ಗುಂಪು, ಗುಂಪುಗಳಾದರೆ ಶಾಶ್ವತವಾಗಿ ವಿಭಜನೆಯಾಗುತ್ತೀರಿ. ಇದನ್ನರಿತು ಮುಂದೆ ಸಾಗಬೇಕು. ಇತ್ತೀಚಿನ ದಿನಗಳಲ್ಲಿ ಮತೀಯ ಶಕ್ತಿಗಳು, ಕೋಮುವಾದಿಗಳು ಸಂವಿಧಾನದ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ. ನಾನು ಸಮಾಜ ಕಲ್ಯಾಣ ಸಚಿವನಾದ ಬಳಿಕ ಸಂಪುಟ ಸಭೆಯಲ್ಲಿ ಸಂವಿಧಾನ ಪೀಠಿಕೆ ಓದಬೇಕೆಂಬ ನಿರ್ಣಯ ಪ್ರಕಟಿಸಿದ ಬಳಿಕ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದವರು ಸಂವಿಧಾನದ ಕೆಂಪು ಪುಸ್ತಕ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.

ಪ್ರಧಾನಮಂತ್ರಿಗಳು, ಸ್ವಾಮೀಜಿಗಳು ಸಹ ಸಂವಿಧಾನಕ್ಕೆ ನಮಿಸುವಂತಾಗಿದೆ ಎಂದರು. ಅಂಬೇಡ್ಕರ್‌ ಅವರು ಸರ್ವಾಧಿಕಾರಿ ಧೋರಣೆ ಸಹಿಸುತ್ತಿರಲಿಲ್ಲ. ಪೋಟೊ ಪೂಜೆ ವಿರೋಧಿಸುತ್ತಿದ್ದರು. ನಮ್ಮ ದೇಶಕ್ಕೆ ಪ್ರಜಾಪ್ರಭುತ್ವ ಬೇಕು ಎಂಬುದನ್ನು ನಿರ್ಧರಿಸಿ ಮಹಾನ್ ಪವಿತ್ರ ಗ್ರಂಥವನ್ನು ದೇಶಕ್ಕೆ ಕೊಡುಗೆ ನೀಡಿದರು. ತುಳಿತಕ್ಕೊಳಗಾದವರ ಮೇಲೆತ್ತಿದ್ದ ಕೀರ್ತಿ ಬಾಬಾ ಸಾಹೇಬರದ್ದು. ಇಂದು ನಾವೆಲ್ಲರೂ ಅಂಬೇಡ್ಕರ್‌ ವಾದಿಗಳ ಬಗ್ಗೆ ಜಾಗೃತಿ ವಹಿಸುವ ಅಗತ್ಯವಿದೆ ಎಂದರು.

ಸಂವಿಧಾನ ಕೊಡುಗೆ

ಬಾಬಾ ಸಾಹೇಬರ ಚರಿತ್ರೆ ಓದಿದರೆ ಅವರು ದೇಶ ಪ್ರೇಮದ ಪ್ರತೀಕ ಎಂಬುದು ವೇದ್ಯವಾಗಲಿದೆ. ಅವರು ಯಾರನ್ನು ದ್ವೇಷಿಸಿಲ್ಲ, ವಿರೋಧಿಸಿಯೂ ಇಲ್ಲ. ಸೇಡಿನ ಮನೋಭಾವ ಇರಲಿಲ್ಲ. ಭಾರತ ವೈವಿಧ್ಯತೆಯಲ್ಲಿ ಏಕತೆಯ ದೇಶ ಎಂಬುದನ್ನು ಮನಗಂಡು ಸಂವಿಧಾನ ಕೊಡುಗೆ ನೀಡಿದ್ದಾರೆ. ಅದನ್ನು ಸಂರಕ್ಷಿಸುವ ಗುರುತರ ಹೊಣೆ ನಾವೆಲ್ಲರೂ ಅರಿಯಬೇಕು ಎಂದರು.

ಈ ಸಂದರ್ಭದಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿ ಪದಕ ಪಡೆದಿರುವ ಬೆಂಗಳೂರಿನ ಸಿಸಿಬಿ ಪೊಲೀಸ್ ಆಯುಕ್ತ ಎಚ್.ಕೆ. ಮಹಾನಂದ, ವೈದ್ಯಕೀಯ ಪ್ರವೇಶ ಪಡೆದ 6 ವಿದ್ಯಾರ್ಥಿಗಳು, ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಮಕ್ಕಳು, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಮಕ್ಕಳು, ಸರ್ಕಾರಿ ನೌಕರರಿಗೆ ಅಭಿನಂದಿಸಲಾಯಿತು.