ನಿಧಿ ಆಸೆಗಾಗಿ ಪುರಾತನ ಮೂಕಬಸವೇಶ್ವರ ಹಾಗೂ ಈಶ್ವರ ದೇವಸ್ಥಾನವನ್ನು ಕೆಡವಿ, ಜೆಸಿಬಿಯಿಂದ ನೆಲ ಅಗೆದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದ ಮೇಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಾವೇರಿ: ನಿಧಿ ಆಸೆಗಾಗಿ ಮೂಕಬಸವೇಶ್ವರ ಹಾಗೂ ಈಶ್ವರ ಮೂರ್ತಿ ಇರುವ ಕಲ್ಲಿನ ದೇವಸ್ಥಾನವನ್ನು ಕೆಡವಿ ನೆಲವನ್ನು ಅಗೆದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿರುವ ಘಟನೆ ಸವಣೂರು ತಾಲೂಕಿನ ನದಿನೀರಲಗಿ ಗ್ರಾಮದಲ್ಲಿ ನಡೆದಿದೆ.
ನದಿನೀರಲಗಿ ಗ್ರಾಮದ ಫಕ್ಕಿರಪ್ಪ ಮಾದರ ಅವರ ಜಮೀನಿನಲ್ಲಿರುವ ಮೂಕಬಸವೇಶ್ವರ ಮತ್ತು ಈಶ್ವರಮೂರ್ತಿ ಇರುವ ಸಣ್ಣ ಕಲ್ಲಿನ ದೇವಸ್ಥಾನವನ್ನು ನಿಧಿ ಆಸೆಯ ಸಲುವಾಗಿ ಕೆಡವಿ ಧ್ವಂಸ ಮಾಡಲಾಗಿದೆ ಎಂದು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತರು ಯಾರು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಯುನಿಸಖಾನ್ ಮಹಬೂಬಖಾನ್ ಕುಲಕರ್ಣಿ, ನೂರಅಹ್ಮದ ಯುನಿಸಖಾನ್ ಕುಲಕರ್ಣಿ, ಮುಂಡಗೋಡದ ಮುಸ್ತಾಕಅಹ್ಮದ ಇಮಾಮಖಾನ್ ದುಂಡಸಿ, ದೇವಿಹೊಸೂರಿನ ಆಸೀಪ್ ಮಕ್ಬುಲಸಾಬ ಯಲವಗಿ ಎಂಬುದವರು ಹೊಲದಲ್ಲಿರುವ ದೇವಸ್ಥಾನದಲ್ಲಿನ ಮೂರ್ತಿಗಳನ್ನು ಪಕ್ಕಕ್ಕೆ ಸರಿಸಿ ಅದರ ಕೆಳಗಡೆಯ ನೆಲವನ್ನು ಜೆಸಿಬಿಯಿಂದ ಗುಂಡಿ ತೊಡಿ, ಹಿಂದೂ ಧರ್ಮದ ಪೂಜಾ ಸ್ಥಳಕ್ಕೆ ಹಾನಿಯುಂಟು ಮಾಡಿ, ಧಾರ್ಮಿಕ ನಂಬಿಕೆಗೆ ಧಕ್ಕೆಯನ್ನುಂಟು ಮಾಡಿದ ಆರೋಪದಡಿ ಬಂಧಿಸಲಾಗಿದೆ.
ಈ ಕುರಿತು ತನಿಖೆ ನಡೆಸಿ ಆರೋಪಗಳ ಪತ್ತೆಗಾಗಿ ಎಸ್ಪಿ ಯಶೋದಾ ವಂಟಗೋಡಿ, ಎಎಸ್ಪಿ ಲಕ್ಷ್ಮಣ ಶಿರಕೋಳ, ಡಿಎಸ್ಪಿ ಗುರುಶಾಂತಪ್ಪ ಕೆ.ವಿ., ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ತನಿಖಾ ತಂಡವು ವಿವಿಧ ಆಯಾಮಗಳಲ್ಲಿ ತನಿಖಾ ಕಾರ್ಯಗಳನ್ನು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ನಿಧಿ ಆಸೆಗಾಗಿ ಚಾಲುಕ್ಯರ ಕಾಲದ ದೇಗುಲ ಧ್ವಂಸ; ಗಂಗಾವತಿಯಲ್ಲಿ ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ
ಈ ಪತ್ತೆ ಕಾರ್ಯದಲ್ಲಿ ಸಿಪಿಐ ತಿಮ್ಮಣ್ಣ ಎಸ್.ಚಾಮನೂರ, ಪಿಎಸ್ಐ ರಂಗನಾಥ ಅಂತರಗಟ್ಟಿ, ಸಂಗನಗೌಡ ಪೋಲಿಸಗೌಡ್ರ ಠಾಣೆಯ ಸಿಬ್ಬಂದಿಗಳಾದ ಆರ್.ಎನ್. ಪೂಜಾರ, ಬಿ.ಎನ್. ಆವೋಜಿ, ಮಂಜುನಾಥ ಮಣ್ಣಿಯವರ, ಮಹೇಶ ಕೆಲೂರ, ಎ.ಎಚ್. ನದಾಫ್, ಅನೀಲ ಮಲ್ಲಾಡದ, ಆರ್.ಎನ್. ಕನವಳ್ಳಿ, ತಾಂತ್ರಿಕ ಸಿಬ್ಬಂದಿಗಳಾದ ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ಅವರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಲಕ್ಕುಂಡಿ ಹಳೇ ಹಂಡೆಯಲ್ಲಿ ಗೋಲ್ಡನ್ ಕವರ್ ಚಾಕ್ಲೆಟ್ ಹಾಕಿ 22 ಲಕ್ಷ ದೋಚಿದ್ದ ಮೌಲ್ವಿ ಅರೆಸ್ಟ್


