Asianet Suvarna News Asianet Suvarna News

ಹಾವೇರಿ ಜಿಲ್ಲೆಗೆ ನಾಲ್ಕು ರಾಜ್ಯೋತ್ಸವ ಪ್ರಶಸ್ತಿಯ ಗರಿ

*  ವೈವಿಧ್ಯಮಯ, ಅನನ್ಯ ಕಲಾಪೋಷಣಾ ಕೇಂದ್ರ
*  ಜಾನಪದ ಸಂಸ್ಕೃತಿ ಬಿಂಬಿಸುವ ಅದ್ಭುತ ಶಿಲ್ಪಕಲಾ ಸೃಷ್ಟಿ
*  ಸಂಘ-ಸಂಸ್ಥೆ ವಿಭಾಗದಿಂದ ಉತ್ಸವ ರಾಕ್‌ ಗಾರ್ಡನ್‌
 

Haveri District Got Karnataka Rajyotsava Award grg
Author
Bengaluru, First Published Nov 1, 2021, 7:25 AM IST

ನಾರಾಯಣ ಹೆಗಡೆ

ಹಾವೇರಿ(ನ.01): ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ(Karnataka Rajyotsava Award) ಈ ಬಾರಿ ಜಿಲ್ಲೆಯ(Haveri) ಮೂವರು ಆಯ್ಕೆಯಾಗಿದ್ದಾರೆ.

ಸಂಘ ಸಂಸ್ಥೆ ವಿಭಾಗದಿಂದ ಕೊಡಮಾಡುವ ಪ್ರಶಸ್ತಿಗೆ ಉತ್ಸವ ರಾಕ್‌ ಗಾರ್ಡನ್‌(Utsav Rock Garden) ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಗೆ(State Award) ಆಯ್ಕೆಯಾಗಿದೆ. ಜಾನಪದ(Folk) ವಿಭಾಗದಿಂದ ಮಹಾರುದ್ರಪ್ಪ ಇಟಗಿ, ರಂಗಭೂಮಿ(Theater) ಕ್ಷೇತ್ರದಿಂದ ಫಕ್ಕೀರಪ್ಪ ಕೊಡಾಯಿ ಹಾಗೂ ಇದೇ ಮೊದಲ ಬಾರಿಗೆ ಸೈನಿಕ ಕ್ಷೇತ್ರದಿಂದ ನೀಡುತ್ತಿರುವ ಪ್ರಶಸ್ತಿಗೆ ನವೀನ್‌ ನಾಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಫಕ್ಕೀರಪ್ಪ ಕೊಂಡಾಯಿಗೆ ರಂಗಭೂಮಿ:

ಜಿಲ್ಲೆಯ ಶಿಗ್ಗಾಂವಿ(Shiggon) ತಾಲೂಕಿನ ಹುಲಸೋಗಿ ಗ್ರಾಮದ ಫಕ್ಕೀರಪ್ಪ ರಾಮಪ್ಪ ಕೊಂಡಾಯಿ ಅವರನ್ನು ರಂಗಭೂಮಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫಕ್ಕೀರಪ್ಪ ಕೊಂಡಾಯಿ ಅವರು 36 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಸಾಮಾಜಿಕ, ಪೌರಾಣಿಕ ನಾಟಕ ನಿರ್ದೇಶಕ ಹಾಗೂ ಹಾರ್ಮೋನಿಯಂ(Harmonium) ವಾದಕರಾಗಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಶಿಗ್ಗಾಂವಿ ಪಟ್ಟಣದಲ್ಲಿ ಸುಮಾರು 200 ಸದಸ್ಯರನ್ನು ಒಳಗೊಂಡ ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆ ಅಧ್ಯಕ್ಷರಾಗಿ ಕಳೆದ 9 ವರ್ಷಗಳಿಂದ ಉಚಿತ ಸಂಗೀತ ಪಾಠಶಾಲೆ(Free Music School), ನಾಟಕ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದಾರೆ.

2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಪ್ರಾಣೇಶ್ ಸೇರಿದಂತೆ 66 ಸಾಧಕರು ಆಯ್ಕೆ

ತಮ್ಮ ಸ್ವಗ್ರಾಮವಾದ ಹುಲಸೋಗಿಯಲ್ಲಿ 1986ರಲ್ಲಿ ಅಣ್ಣ ಅತ್ತಿಗೆ ಎಂಬ ಸಾಮಾಜಿಕ ನಾಟಕ(Social Drama) ನಿರ್ದೇಶನ ಮಾಡುವ ಮೂಲಕ ರಂಗಭೂಮಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಂದಗಲ್‌ ಹನುಮಂತರಾಯರು, ಪಿ.ಬಿ. ಧುತ್ತರಗಿ, ಬಿ.ಆರ್‌. ಭಷ್ಮೆ, ಎಚ್‌.ಎನ್‌. ಹೂಗಾರ, ಸೇರಿದಂತೆ ಹೆಸರಾಂತ ನಾಟಕ ರಚನೆಕಾರರ ಸಾಂಸಾರಿಕ, ಭಕ್ತಿ ಪ್ರಧಾನ ಹಾಗೂ ಪೌರಾಣಿಕ ನಾಟಕಗಳಾದ ರಕ್ತರಾತ್ರಿ, ಕುರುಕ್ಷೇತ್ರ, ಅಕ್ಷಯಾಂಭರ, ರತ್ನ ಮಾಂಗಲ್ಯ, ಗೌರಿ ಗೆದ್ದಳು, ಸರ್ಕಾರಕ್ಕೆ ರೈತನ ಸವಾಲು, ದೀಪಾ, ಕಾಲುಕೆರಿದ ಹುಲಿ, ರೈತನ ಮಕ್ಕಳು, ತವರು ಮನೆ, ಅತ್ತಿಗೆಯೇ ಹೆತ್ತಮ್ಮ, ಧನಿಕರ ದೌರ್ಜನ್ಯ, ಸತಿ ಸತ್ವಪರೀಕ್ಷೆ, ರುದ್ರಭೂಮಿಯಲ್ಲಿ ಎದ್ದುಬಂದ ರಾಜಾಹುಲಿ, ಅಮರವೀರ, ಸಿಂಧೂರ ಲಕ್ಷ್ಮಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರ ಸೇರಿದಂತೆ ಅನೇಕ ನಾಟಕಗಳಿಗೆ ಸೇವೆ ಸಲ್ಲಿಸಿದ್ದಾರೆ.

ಇವರ ರಂಗಭೂಮಿ ಸೇವೆ ಪರಿಗಣಿಸಿ ಅನೇಕ ಸಂಘ, ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಫಕ್ಕೀರೇಶ ಕೊಂಡಾಯಿ ಅವರ ರಂಗಭೂಮಿ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ(Government of Karnataka) ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪಶಸ್ತಿ ನೀಡಿರುವುದು ಜಿಲ್ಲೆಗೆ ರಂಗಭೂಮಿ ಕ್ಷೇತ್ರಕ್ಕೆ ನೀಡಿದ ಗೌರವವಾಗಿದೆ.

ರಂಗಭೂಮಿ ಕ್ಷೇತ್ರದಲ್ಲಿ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ಮುಂದೆಯೂ ಕೂಡ ರಂಗಭೂಮಿ ಕ್ಷೇತ್ರದಲ್ಲಿ ಕೈಲಾದಷ್ಟುಸೇವೆ ಮುಂದುವರಿಸುತ್ತೇನೆ ಎಂದು ರಾಜ್ಯೋತ್ಸವ ಪಶಸ್ತಿಗೆ ಆಯ್ಕೆಯಾದ ರಂಗಭೂಮಿ ಕಲಾವಿದರು ಫಕ್ಕೀರಪ್ಪ ಕೊಂಡಾಯಿ ತಿಳಿಸಿದ್ದಾರೆ. 

ಉತ್ಸವ ರಾಕ್‌ ಗಾರ್ಡನ್‌ಗೆ ರಾಜ್ಯೋತ್ಸವ

ಸಮಕಾಲೀನ ಶಿಲ್ಪಕಲಾ ಕೇಂದ್ರವಾಗಿರುವ, ಈಗಾಗಲೇ 7 ವಿಶ್ವ ದಾಖಲೆಗಳನ್ನು(World Record) ತನ್ನದಾಗಿಸಿಕೊಂಡಿರುವ ಶಿಗ್ಗಾಂವಿ ತಾಲೂಕು ಗೊಟಗೋಡಿಯಲ್ಲಿರುವ ‘ಉತ್ಸವ ರಾಕ್‌ ಗಾರ್ಡನ್‌’ ಸಮಿತಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ದೊರೆತಿದೆ.

ವೈವಿಧ್ಯಮಯ ಹಾಗೂ ಅನನ್ಯ ಕಲಾಪೋಷಣಾ ಕೇಂದ್ರವಾಗಿರುವ ರಾಕ್‌ ಗಾರ್ಡನ್‌ ಶಿಲ್ಪಕಲಾ ಕೇಂದ್ರವು ತನ್ನೊಳಗೆ ಮಾನವ ನಿರ್ಮಿತ ಸುಂದರ ಕಲೆಗಳನ್ನು ಒಳಗೊಂಡಿದೆ. ಸಾಂಪ್ರದಾಯಿಕ ವ್ಯವಸಾಯ, ಗ್ರಾಮೀಣ ವೃತ್ತಿಗಳು, ಸಂತೆಗಳು, ದೇಸಿ ಆಟ, ನೋಟ, ಉಡುಗೆ-ತೊಡುಗೆಗಳು, ಜಾನಪದರ ಬದುಕು ಹೀಗೆ ಹಲವಾರು ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅದ್ಭುತ ಶಿಲ್ಪಕಲಾ ಸೃಷ್ಟಿಯೇ ಉತ್ಸವ ರಾಕ್‌ ಗಾರ್ಡನ್‌ ಎಂಬ ಒಳಾಂಗಣ ಹಾಗೂ ಹೊರಾಂಗಣ ಶಿಲ್ಪಸಂಗ್ರಹಾಲಯವಾಗಿದೆ.

2000ನೇ ಇಸ್ವಿಯಲ್ಲಿ ಪ್ರಾರಂಭವಾಗಿ ಸಾವಿರಾರು ಶಿಲ್ಪ ಹಾಗೂ ಚಿತ್ರ ಕಲಾವಿದರಿಗೆ(Artist) ಸೂಕ್ತ ತರಬೇತಿಯನ್ನು ನೀಡಿ ಅವರ ಬದುಕಿಗೆ ನಿರಂತರವಾಗಿ ಕಾಯಕಲ್ಪ ನೀಡುತ್ತಾ ಬಂದಿದೆ. ಕನ್ನಡ(Kannada) ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕೊಡುಗೆ ನೀಡುತ್ತ ಬಂದಿದೆ. ಇದು ನಾಡಿನ ಜನ ಸಮುದಾಯಕ್ಕೆ ಒಂದು ಅದ್ವಿತೀಯ ಕೊಡುಗೆಯಾಗಿದ್ದು, ಪ್ರಕೃತಿ, ಸಂಸ್ಕೃತಿ ಮತ್ತು ಕಲಾಕೃತಿಗಳ ತ್ರಿವಳಿ ಸಂಗಮವಾಗಿದೆ.

ಕರ್ನಾಟಕದ ಹೆಮ್ಮೆ ‘ಉತ್ಸವ ರಾಕ್ ಗಾರ್ಡನ್’!

ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಶಿಲ್ಪಕಲಾ ಕೇಂದ್ರವಾಗಿದ್ದು, ಎಂಟು ವಿಶ್ವದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡು ಕಂಗೊಳಿಸುತ್ತಿದೆ. ಇದರೊಂದಿಗೆ ಶಿಲ್ಪಕಲಾ ತರಬೇತಿ ನೀಡಿ ಕಲಾವಿದರನ್ನು ಸ್ವಾವಲಂಬಿಯಾಗಿಸುವ ಮಹತ್ತರ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಇದಲ್ಲದೇ ಸಾಮಾಜಿಕ, ಪರಿಸರ ಜಾಗೃತಿ ಕಾರ್ಯಕ್ರಮ, ವಿಚಾರಗೋಷ್ಠಿ, ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಉದಯೋನ್ಮುಖ ಕವಿ ಮತ್ತು ಬರಹಗಾರರನ್ನು ಪ್ರೋತ್ಸಾಹಿಸಲು ಕಥಾ ಕಮ್ಮಟ, ಕಾವ್ಯಗೋಷ್ಠಿ, ಪುಸ್ತಕ ಬಿಡುಗಡೆ ಮತ್ತು ವಿಚಾರಗೋಷ್ಠಿಗಳನ್ನು ಏರ್ಪಡಿಸುತ್ತಾ ಬಂದಿದೆ.

ಉತ್ತರ ಕರ್ನಾಟಕದ(North Karnataka) ಹಿಂದಿನ ಗ್ರಾಮ ಸಾಮ್ರಾಜ್ಯ ಎಲ್ಲರನ್ನು ಆಕರ್ಷಿಸುತ್ತದೆ. ಇಲ್ಲಿಯ ಶಿಲ್ಪಗಳು, ಅವುಗಳಿಗೆ ಪೂರಕವಾಗುವಂತೆ ಜೋಡಿಸಿದ ಸುತ್ತಲಿನ ದಿನಬಳಕೆಯ ಗ್ರಾಮ್ಯ ಸಾಮಗ್ರಿಗಳು, ಮನೆಗಳ ಮಾದರಿಗಳು ಇತ್ಯಾದಿ ದೃಶ್ಯಗಳು ಹಿಂದಿನ ಗ್ರಾಮ ಸಾಮ್ರಾಜ್ಯದ ಸೊಬಗನ್ನು ನೆನಪಿಸುತ್ತವೆ. ಈ ಎಲ್ಲ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉತ್ಸವ ರಾಕ್‌ ಗಾರ್ಡನ್‌ ಸಮಿತಿಯ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ಕೊಟ್ಟಿದೆ. ಇದರಿಂದ ಇನ್ನೂ ಹೆಚ್ಚಿನ ಜವಾಬ್ದಾರಿ ಬಿದ್ದಂತಾಗಿದೆ. ಮುಂದಿನ ದಿನಗಳಲ್ಲಿ ಸಮಿತಿಯಿಂದ ಹೆಚ್ಚಿನ ಸಾಮಾಜಿಕ, ಪರಿಸರ ಜಾಗೃತಿ ಮೂಡಿಸುವುದರ ಜತೆಗೆ ಕಲಾವಿದರಿಗೆ ಸ್ವಾವಲಂಬನೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಉತ್ಸವ ರಾಕ್‌ ಗಾರ್ಡನ್‌ ಸಮಿತಿ ಅಧ್ಯಕ್ಷ ವೇದಾರಾಣಿ ದಾಸನೂರ ಹೇಳಿದ್ದಾರೆ.  
 

Follow Us:
Download App:
  • android
  • ios