ವಿಶ್ವವಿಖ್ಯಾತ ಹಂಪಿಯ ತುಂಗಭದ್ರಾ ನದಿತೀರದ ಬಳಿ ಇರುವ ಸಾಲು ಮಂಟಪದಲ್ಲಿ ಮಲಿನ ನೀರು ನಿಂತಿದ್ದು, ಕಸಗಳು ಬೆಳೆದಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಹೊಸಪೇಟೆ : ವಿಶ್ವವಿಖ್ಯಾತ ಹಂಪಿಯ ತುಂಗಭದ್ರಾ ನದಿತೀರದ ಬಳಿ ಇರುವ ಸಾಲು ಮಂಟಪದಲ್ಲಿ ಮಲಿನ ನೀರು ನಿಂತಿದ್ದು, ಕಸಗಳು ಬೆಳೆದಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

25 ಹಾಗೂ 26ರಂದು ಎರಡು ದಿನಗಳ ಕಾಲ ಇಲ್ಲಿ ಸ್ವಚ್ಛತಾ ಕಾರ್ಯ

ನವೆಂಬರ್‌ 25 ಹಾಗೂ 26ರಂದು ಎರಡು ದಿನಗಳ ಕಾಲ ಇಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಸಾಲು ಮಂಟಪದ ಸುತ್ತಮುತ್ತ ಈಗ ಸ್ಚಚ್ಛತೆ ಕಂಡು ಬರುತ್ತಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಈ ಸಂಬಂಧದ ವರದಿಯನ್ನು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕಚೇರಿ ಈ ಕುರಿತ ಮಾಹಿತಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದು, ಸ್ಥಳದ ಜಿಪಿಎಸ್‌ ಹೊಂದಿರುವ ಛಾಯಾಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಹಂಪಿಯ ರಥಬೀದಿ ಸಾಲು ಮಂಟಪದಲ್ಲಿ ಮಲಿನ ನೀರು

ಹಂಪಿಯ ರಥಬೀದಿ ಸಾಲು ಮಂಟಪದಲ್ಲಿ ಮಲಿನ ನೀರು ನಿಂತಿದ್ದರೂ ಸಂಬಂಧಿಸಿದ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಈ ನೀರಿನಲ್ಲಿ ಕಸ ಬೆಳೆದಿದ್ದರೂ ಅದನ್ನು ಸ್ವಚ್ಛಗೊಳಿಸುವ ಗೋಜಿಗೂ ಹೋಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.

ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ 1986ರಲ್ಲೇ ವಿಶ್ವ ಪರಂಪರೆ ತಾಣದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಹೀಗಿದ್ದರೂ, ದೇವಾಲಯದ ರಥಬೀದಿಯಲ್ಲಿರುವ ಸಾಲು ಮಂಟಪಗಳ ಪಕ್ಕದಲ್ಲೇ ಮಳೆ ನೀರು ನಿಂತು ಮಲಿನಗೊಂಡಿದೆ. ಕಸ ಬೆಳೆದಿದೆ. ಆದರೂ, ಸ್ವಚ್ಛತೆಯತ್ತ ದೃಷ್ಟಿ ಹರಿಸಲಾಗುತ್ತಿಲ್ಲ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಬಗ್ಗೆ ‘ಕನ್ನಡಪ್ರಭ’ ಕೂಡ ವರದಿ ಪ್ರಕಟಿಸಿತ್ತು.

ಇದರ ಬೆನ್ನಲ್ಲೇ ಎಚ್ಚೆತ್ತ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ವರದಿ ಸಲ್ಲಿಸಿದ್ದು, ಸ್ಥಳದ ಜಿಪಿಎಸ್‌ ಹೊಂದಿರುವ ಛಾಯಾಚಿತ್ರಗಳನ್ನು ಲಗತ್ತಿಸಿದ್ದಾರೆ.