ಮೈಸೂರು: ಶಿಲಾಯುಗದ ಸಮಾಧಿಗಳು ಪತ್ತೆ
ಮೈಸೂರಿನ ಕಲ್ಲೂರು ನಾಗನಹಳ್ಳಿಯಲ್ಲಿ 3000 ವರ್ಷಗಳ ಕಾಲದ ಅಪರೂಪದ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿಗಳ ನಮೂನೆಗಳಲ್ಲಿ ಒಂದಾದ ಹಾಸು ಬಂಡೆ ಸಮಾಧಿಗಳು (ಡಾಲ್ಮೇನ್) 7 ಪತ್ತೆಯಾಗಿದೆ.
ಮೈಸೂರು(ಜ.01): ಮೈಸೂರು ತಾಲೂಕು ಇಲವಾಲ ಹೋಬಳಿಯಿಂದ 8 ಕಿ.ಮೀ ದೂರದಲ್ಲಿರುವ ಗ್ರಾಮವಾದ ಕಲ್ಲೂರು ನಾಗನಹಳ್ಳಿಯಲ್ಲಿ ಇತಿಹಾಸ ಕ್ಷೇತ್ರ. ಅಧ್ಯಯನಕ್ಕೆ ವೇಳೆ ಸುಮಾರು 3000 ವರ್ಷಗಳ ಕಾಲದ ಅಪರೂಪದ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿಗಳ ನಮೂನೆಗಳಲ್ಲಿ ಒಂದಾದ ಹಾಸು ಬಂಡೆ ಸಮಾಧಿಗಳು (ಡಾಲ್ಮೇನ್) 7 ಶೋಧವಾಗಿವೆ.
ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ಸಹ ಪ್ರಾಧ್ಯಾಪಕರಾದ ಎನ್ಎಸ್ಎಸ್ ಅಧಿಕಾರಿ ಡಾ.ಎಸ್.ಜಿ. ರಾಮದಾಸ ರೆಡ್ಡಿ, ಉಪನ್ಯಾಸಕ ಚರಣ್ ಕುಮಾರ್ ಹಾಗೂ ಕಾಲೇಜಿನ ಎನ್ಎಸ್ಎಸ್ ಸ್ವಯಂ ಸೇವಕರೊಡನೆ ಗ್ರಾಮಕ್ಕೆ ಹೋದಾಗ ಏಳು ಮಾಸ್ತಮ್ಮು ಗುಡಿಗಳಿವೆ ಎಂದು ತಿಳಿದು, ಗುಡಿಗಳ ಹತ್ತಿರ ಹೋದಾಗ 7 ಗುಡಿಗಳು ಗಿಡ, ಗೆಂಟೆ, ಬಳ್ಳಿಗಳಿಂದ ಮುಚ್ಚಿ ಹೋಗಿದ್ದವು. ಸ್ಥಳೀಯರಾದ ಪುನೀತ್, ಯೋಗಣ್ಣ ಹಾಗೂ ತುಳಸಿರಾಮ್ ಅವರ ಸಹಕಾರದಿಂದ ಸ್ವಚ್ಚಗೊಳಿಸಿ ಗಮನಿಸಿದಾಗ 7 ಹಾಸು ಬಂಡೆ ಸಮಾಧಿಗಳು(ಡಾಲ್ಮೇನ್) ಪತ್ತೆಯಾಗಿವೆ.
ಬಿಜೆಪಿ ಕಾರ್ಯಕರ್ತರ ಅಡ್ಡಿ: ಮಂಗಳೂರಲ್ಲಿ ಟೋಲ್ ಸಂಗ್ರಹ ಸ್ಥಗಿತ
ಕೆ.ಆರ್. ಸಾಗರದಿಂದ ಕೆ.ಆರ್. ನಗರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಸಮಾಧಿಗಳು ಇವೆ. ಇವುಗಳನ್ನು ಎಲ್ ಆಕಾರದಲ್ಲಿ ಸಾಲಾಗಿ ನಿರ್ಮಿಸಿದ್ದಾರೆ. ಈ ಸಮಾಧಿಗಳು ದಕ್ಷಿಣಕ್ಕೆ ಮುಖಮಾಡಿ ಮೂರು, ಉಳಿದ ನಾಲ್ಕು ಸಮಾಧಿಗಳು ಪೂರ್ವಾಭಿಮುಖವಾಗಿವೆ. ಒಟ್ಟು 7 ಸಮಾಧಿಗಳ ಉದ್ದ 84 ಅಡಿ, ಅಗಲ 8.5 ಅಡಿ ಇವೆ. ಪ್ರತಿ ಸಮಾಧಿ 12 ಅಡಿ ಉದ್ದ, 8.5 ಅಡಿ ಅಗಲ ಇದೆ. ಈ ಸಮಾಧಿಗಳನ್ನು ಸ್ಥಳೀಯವಾಗಿ ಸಿಗುವ ಕಲ್ಲು, ಬಂಡೆಗಳನ್ನು ಬಳಸಿ ನಿರ್ಮಿಸಿದ್ದಾರೆ. ಪ್ರತಿ ಸಮಾಧಿಯನ್ನು ಗುಡಿಯಾಕಾರದಲ್ಲಿ ಕಟ್ಟಿಸುತ್ತಲೂ ಬಂಡೆಗಳನ್ನು ನಿಲ್ಲಿಸಿ ಅವುಗಳ ಮೇಲೆ 6.5 ಅಡಿ ಉದ್ದದ ಹಲವು ಬಂಡೆಗಳನ್ನು ಹಾಸಿದ್ದಾರೆ. ನಂತರ ಬಂಡೆಗಳನ್ನು ಸುತ್ತುವರಿದು ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನು ಬಳಸಿ ಕಟ್ಟಡ ಕಟ್ಟಿದ್ದಾರೆ.
ಗ್ರಾಮದಲ್ಲಿ 11 ವೀರಮಾಸ್ತಿಕಲ್ಲುಗಳಿದ್ದು ಅವುಗಳಲ್ಲಿ ವಿಶೇಷವಾದ ಪೆಣ್ಬುಯ್ಯಲ್ ವೀರಗಲ್ಲು, ತುರುಗಳ್ಳರ ವೀರಗಲ್ಲು, ಮಾಸ್ತಿಕಲ್ಲು, ಒಕೈಮಾಸ್ತಿಕಲ್ಲು ಇತರೆ ಶಿಲ್ಪಗಳು ಹಾಗು ಹೊಯ್ಸಳರ ಕಾಲದ ಬ್ರಹ್ಮಲಿಂಗೇಶ್ಪರ ದೇವಾಲಯ ಗ್ರಾಮದಲ್ಲಿವೆ. ಇವೆಲ್ಲ ಗ್ರಾಮದ ಇತಿಹಾಸದ ಮೇಲೆ ಹಾಗೂ ಕರ್ನಾಟಕದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅಂಶಗಳಾಗಿದ್ದು ಸಂರಕ್ಷಿಸುವ ಅಗತ್ಯತೆಯಿದೆ ಎಂದು ಡಾ.ಎಸ್.ಜಿ. ರಾಮದಾಸ ರೆಡ್ಡಿ ತಿಳಿಸಿದ್ದಾರೆ.
ಅಪರೂಪದ ಸಮಾಧಿಗಳು
ಇವು ವಿಶೇಷವಾದ ಹಾಗೂ ಕರ್ನಾಟಕದಲ್ಲೇ ಅಪರೂಪದ ಸಮಾಧಿಗಳಾಗಿವೆ. ಇದೇ ತರಹದ ಸಮಾಧಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮದಲ್ಲಿ ಶೋಧ ಆಗಿವೆ. ಹಾಗೂ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ರಾಜ್ಯಗಳಲ್ಲಿ ಕಂಡು ಬಂದಿವೆ .
ಈ ಸಮಾಧಿಗಳಿಗೆ ಪ್ರತಿ ವರ್ಷ ಇಡೀ ಗ್ರಾಮದ ಜನ ಶಿವರಾತ್ರಿ ಅವåವಾಸ್ಯೆಯ ದಿನ 7 ಮಾಸ್ತಮ್ಮರೆಂದು ಭಕ್ತಿಭಾವದಿಂದ ಪೂಜೆ ಮಾಡುತ್ತಾರೆ ಎಂದು ಗ್ರಾಮದ ಮುಖಂಡ ಯೋಗಣ್ಣ ತಿಳಿಸಿದ್ದಾರೆ.
ಗರ್ಭಿಣಿಯರ ತುತ್ತಿಗೂ ಕುತ್ತು, ಅಕ್ಕಿ ಕದಿಯುವ ಅಧಿಕಾರಿಗಳ ಗೋಲ್ಮಾಲ್