ಭಟ್ಕಳ: ತಾಯ್ನಾಡಿಗೆ ಆಗಮಿಸಿದ ಯೋಧನಿಗೆ ಅದ್ಧೂರಿ ಸ್ವಾಗತ..!
21 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ನಿವೃತ್ತ ಯೋಧನಿಗೆ ತಾಯ್ನಾಡಾದ ಭಟ್ಕಳದಲ್ಲಿ ಹೃದಯಸ್ಪರ್ಶಿ ಸ್ವಾಗತ ದೊರಕಿದೆ.

ಉತ್ತರಕನ್ನಡ(ಜ.04): 21 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ನಿವೃತ್ತ ಯೋಧನಿಗೆ ತಾಯ್ನಾಡಾದ ಭಟ್ಕಳದಲ್ಲಿ ಹೃದಯಸ್ಪರ್ಶಿ ಸ್ವಾಗತ ದೊರಕಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮದ ಗಣಪತಿ ಮೊಗೇರ ಸೇನೆಯಿಂದ ನಿವೃತ್ತಿಗೊಂಡಿದ್ದು, ಯೋಧನ ಆಗಮನದಿಂದ ಭಟ್ಕಳದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ನಿವೃತ್ತ ಯೋಧನಿಗೆ ಪುಷ್ಪವೃಷ್ಠಿಯ ಮೂಲಕ ಸ್ವಾಗತ ನೀಡಿದ ಜನರು,
ಭಟ್ಕಳ ಪಟ್ಟಣದಿಂದ ಬೆಳ್ಕೆ ಗ್ರಾಮದವರೆಗೆ ಅದ್ಧೂರಿ ರ್ಯಾಲಿ ನಡೆಸುವ ಮೂಲಕ ಯೋಧನನ್ನು ಗ್ರಾಮಕ್ಕೆ ಕರೆ ತಂದಿದ್ದಾರೆ. 2002ರ ಜನವರಿ 28ರಂದು ಇಂಜಿನಿಯರ್ಸ್ ಗ್ರೂಪ್ ನ(MEG and CENTRE) ಬೆಂಗಳೂರಿನ ಇಂಜಿನಿಯರ್ಸ್ ದಳಕ್ಕೆ ಸೇರ್ಪಡೆಗೊಂಡ ಯೋಧ ಗಣಪತಿ ಮೊಗೇರ, ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಮೂರು ವರ್ಷ, ರಾಜಾಸ್ಥಾನದ ನಸೀರಾಬಾದ್, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಎರಡು ವರ್ಷ, ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಮೂರು ವರ್ಷ, ರಾಜಸ್ಥಾನದ ಜೋಧಪುರದಲ್ಲಿ ಒಂದು ವರ್ಷ, ಜಮ್ಮು ಮತ್ತು ಕಾಶ್ಮೀರದ "ಬಾರಾಮುಲ್ಲಾ" ದಲ್ಲಿ ಎರಡು ವರ್ಷ, ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಮೂರು ವರ್ಷ, ಅಸ್ಸಾಂನ ಗುವಹಟಿಯಲ್ಲಿ ಒಂದು ವರ್ಷಗಳ ಸೇವೆಯೊಂದಿಗೆ ಸತತ 21 ವರ್ಷಗಳ ಸೇವೆ ಸಲ್ಲಿಸಿದ್ದಾರೆ.
Vijay Sankalp Abhiyan: ಬೂತ್ ಮಟ್ಟದಿಂದ ಗೆದ್ದು ದೇಶ ಆಳುತ್ತೇವೆ; ದಂಡೇಲಿಯಲ್ಲಿ ಗುಡುಗಿದ ಪೂಜಾರಿ
ಅಲ್ಲದೆ ಭಾರತೀಯ ಸೇನೆಯಲ್ಲಿ "ರಾಷ್ಟ್ರೀಯ ರೈಫಲ್ಸ್" ಸೇನಾ ವಿಭಾಗ, "ರಾಷ್ಟ್ರೀಯ ಭದ್ರತಾ ದಳ" (NSG)ದಲ್ಲಿಯೂ ಸೇವೆ ಸಲ್ಲಿಸಿರುವ ಅವರು ಕೇಂದ್ರ ಕಚೇರಿಯಲ್ಲಿ ಸೇನಾ ಗೌರವದೊಂದಿಗೆ ನಿವೃತ್ತಿ ಪಡೆದಿದ್ದಾರೆ.