ಮುಸ್ಲಿಮರಿಗೆ ನೀಡಿದ್ದ 2ಬಿ ಮೀಸಲಾತಿಯನ್ನು ರಾಜ್ಯ ಸರ್ಕಾರದ ರದ್ದು ಮಾಡಿದ್ದು, ಕೂಡಲೆ 2ಬಿಯನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ಒತ್ತಾಯಿಸಿ ಇಲ್ಲಿನ ಮುಸ್ಲಿಂ ಧಾರ್ಮಿಕ ಮುಖಂಡರು ಉಪವಿಭಾಗಾಧಿಕಾರಿ ಸಿ.ಆರ್‌. ಕಲ್ಪಶ್ರೀರವರಿಗೆ ಶನಿವಾರ ಮನವಿ ಪತ್ರ ಸಲ್ಲಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ತಿಪಟೂರು : ಮುಸ್ಲಿಮರಿಗೆ ನೀಡಿದ್ದ 2ಬಿ ಮೀಸಲಾತಿಯನ್ನು ರಾಜ್ಯ ಸರ್ಕಾರದ ರದ್ದು ಮಾಡಿದ್ದು, ಕೂಡಲೆ 2ಬಿಯನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ಒತ್ತಾಯಿಸಿ ಇಲ್ಲಿನ ಮುಸ್ಲಿಂ ಧಾರ್ಮಿಕ ಮುಖಂಡರು ಉಪವಿಭಾಗಾಧಿಕಾರಿ ಸಿ.ಆರ್‌. ಕಲ್ಪಶ್ರೀರವರಿಗೆ ಶನಿವಾರ ಮನವಿ ಪತ್ರ ಸಲ್ಲಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಈ ವೇಳೆ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಎಂ. ಸೈಫುಲ್ಲಾ ಮಾತನಾಡಿ, ರಾಜ್ಯ ಸರ್ಕಾರ ಸಚಿವ ಸಂಪುಟದ ಸಭೆಯಲ್ಲಿ ಮುಸ್ಲಿಮರಿಗೆ ನೀಡಿದ್ದ 2ಬಿ ಪ್ರವರ್ಗವನ್ನು ರದ್ದು ಮಾಡಿ ಅದನ್ನು ಬೇರೆಯವರಿಗೆ ಹಂಚಿದೆ. ಸಂವಿಧಾನವು ನಮಗೆ ನೀಡಿದ್ದ ಹಕ್ಕನ್ನು ಈ ಸರ್ಕಾರವು ಕಸಿದುಕೊಂಡಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮಾಜಕ್ಕೆ ಅಲ್ಪಸಂಖ್ಯಾತರ ,ಮೀಸಲಾತಿ ಅತ್ಯಗತ್ಯವಾಗಿದ್ದು ಅದನ್ನು ರದ್ದುಗೊಳಿಸುವ ಮೂಲಕ ಸರ್ಕಾರ ನಮ್ಮ ಮೂಲಭೂತ ಹಕ್ಕನ್ನು ಕಿತ್ತುಕೊಂಡಿದೆ. ಸರ್ಕಾರಿ ಅನುದಾನಿತ ಮತ್ತು ಸರ್ಕಾರದಿಂದ ನಿಯಂತ್ರಿಸಲ್ಪಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಶಾಲಾ ಪ್ರವೇಶದಲ್ಲಿ ಅದು ಕೇವಲ 100 ಮಕ್ಕಳಲ್ಲಿ 4 ಮಕ್ಕಳಿಗೆ ಮಾತ್ರ ಅವಕಾಶ ಸಿಗುತ್ತಿತ್ತು. ಸರ್ಕಾರಿ ಉದ್ಯೋಗಗಳಲ್ಲೂ ಅಲ್ಪ ಪ್ರಮಾಣದ ವಿದ್ಯಾವಂತ ಮುಸ್ಲಿಂ ಯುವಕರು ಸರ್ಕಾರಿ ಕೆಲಸ ಮಾಡಿ ತಮ್ಮ ಕುಟುಂಬಗಳ ನಿರ್ವಹಣೆ ಮಾಡುತ್ತಿದ್ದರು. 2ಬಿನಲ್ಲಿ ಸಿಗುವ ಲಾಭದಿಂದ ಉನ್ನತ ವ್ಯಾಸಂಗ ಮಾಡಿ ವಿದೇಶಗಳಲ್ಲೂ ಉದ್ಯೋಗ ಮಾಡಿ ಸ್ವದೇಶಕ್ಕೆ ಸಂಪಾದಿಸಿ ತರುವ ಮೂಲಕ ವಿದೇಶಿ ವಿನಿಮಯ ಹೆಚ್ಚಾಗಲು ಕಾರಣಕರ್ತರಾಗಿದ್ದರು. ಸತತ 30 ವರ್ಷಗಳಿಂದ ಸಿಗುತ್ತಿದ್ದ ಮೀಸಲಾತಿಯನ್ನು ರಾಜ್ಯ ಸರ್ಕಾರ ಏಕಾಏಕಿ ತೆಗೆದುಹಾಕುವ ಮೂಲಕ ಮುಸ್ಲಿಂ ಜನಾಂಗಕ್ಕೆ ಅನ್ಯಾಯ ಮಾಡಿದೆ. ಎಲ್ಲಾ ಜನಾಂಗಕ್ಕೂ ಮೀಸಲಾತಿ ನೀಡಿದ್ದು ಇದಕ್ಕೆ ನಮ್ಮ ವಿರೋಧವಿಲ್ಲ. 2ಬಿ ಮೀಸಲಾತಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿಲ್ಲದಿದ್ದರೂ ನಾವು ಅಷ್ಟರಲ್ಲೇ ತೃಪ್ತಿಪಟ್ಟುಕೊಂಡಿದ್ದು, ಹೆಚ್ಚಳಕ್ಕೂ ಒತ್ತಾಯಿಸದೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರಲಿಲ್ಲ. ಆದರೆ ಸರ್ಕಾರ ಸಂಪುಟ ಸಭೆಯಲ್ಲಿ 2ಬಿಯನ್ನು ರದ್ದು ಮಾಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಆಘಾತ ನೀಡಿದ್ದು ಕೂಡಲೆ ಮೀಸಲಾತಿಯನ್ನು ಯಥಾವತ್ತಾಗಿ ಮುಂದುವರೆಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮದೀನಾ ಮಸೀದಿ ಮತುವಲ್ಲಿ ಮಹಮ್ಮದ್‌ ದಸ್ತಗೀರ್‌, ಮುಸ್ಲಿಂ ಮುಖಂಡರಾದ ಸಮೀವುಲ್ಲಾಖಾನ್‌, ದಸ್ತಗೀರ್‌, ತನ್ವೀರುಲ್ಲಾ ಷರೀಪ್‌, ಶಫಿವುಲ್ಲಾ ಶರೀಫ್‌, ಸಯ್ಯದ್‌ ಶಕೂರ್‌ ಸೇರಿದಂತೆ ನಗರದ ಎಲ್ಲಾ ಮಸೀದಿಗಳ ಮುತುವಲ್ಲಿಗಳು, ಆಡಳಿತ ಮಂಡಳಿಗಳ ಮುಖಂಡರು ಭಾಗವಹಿಸಿ ರಾಜ್ಯ ಸರ್ಕಾರದ ಅನ್ಯಾಯವನ್ನು ಖಂಡಿಸಿದರು.

ಸ್ವಾಮೀಜಿಗಳ ಮಧ್ಯಪ್ರವೇಶಕ್ಕೆ ಆಗ್ರಹ

ಮೈಸೂರು : ರಾಜ್ಯದ ಬಡ ಮುಸ್ಲಿಂ ಸಮುದಾಯದ ಶೇ. 4 ಮೀಸಲಾತಿಯನ್ನು ರದ್ದುಪಡಿಸಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿರುವುದನ್ನು ಸುತ್ತೂರು ಶ್ರೀಗಳು ಹಾಗೂ ಆದಿ ಚುಂಚನಗಿರಿ ಶ್ರೀಗಳು ತಿರಸ್ಕರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿವಳಿಕೆ ನೀಡಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ವಿನಂತಿಸಿದರು.

ಮುಸ್ಲಿಂ ಸಮುದಾಯವನ್ನು ಶಿಕ್ಷಣ ಮತ್ತು ಉದ್ಯೋಗದಿಂದ ದೂರವಿಡಲು ಬಿಜೆಪಿ ಸರ್ಕಾರ ಶೇ. 4(2ಬಿ)ಮೀಸಲಾತಿ ರದ್ದು ಪಡಿಸಿರುವುದನ್ನು ಖಂಡಿಸಿ ನಗರದ ಸಂತ ಫಿಲೋಮಿನಾ ಚಚ್‌ರ್‍ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಮುಸ್ಲಿಂ ಸಮುದಾಯಕ್ಕೆ ನಿರಂತರವಾಗಿ ವಿವಿಧ ರೂಪದಲ್ಲಿ ಹಿಂಸೆ ನೀಡುತ್ತಾ ಬಂದಿದೆ. ಹಿಜಾಬ…, ಹಲಾಲ…, ಎನ್‌ಆರ್‌ಸಿ, ಬುರ್ಖಾ, ಭೀಫ್‌ ಬ್ಯಾನ್‌, ತ್ರಿಬಲ್‌ ತಲಾಖ್‌, ಕೊರೋನಾ ಮೂಲಕ ಅಸಂಬದ್ಧ ವಿಚಾರ ಮುಂದಿಟ್ಟು ಮುಸ್ಲಿಂ ಸಮುದಾಯವನ್ನು ಹಿಂಸಿಸುತ್ತಿದೆ ಎಂದು ದೂರಿದರು.