ಸರ್ಕಾರಿ ಶಾಲೆಗಳ ಅಭಿವೃದ್ಧಿಯಾದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯ. ಈ ನಿಟ್ಟಿನಲ್ಲಿ ಹೂವಿನಹೊಳೆ ಸಂಘ ಸಂಸ್ಥೆಯು ಸರ್ಕಾರಿ ಶಾಲೆಯನ್ನು ಸುಂದರವಾಗಗಿ ಉನ್ನತೀಕರಿಸಿರುವುದು ಶ್ಲಾಘನೀಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್‌ ಹೇಳಿದರು.

ಶಿರಾ : ಸರ್ಕಾರಿ ಶಾಲೆಗಳ ಅಭಿವೃದ್ಧಿಯಾದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯ. ಈ ನಿಟ್ಟಿನಲ್ಲಿ ಹೂವಿನಹೊಳೆ ಸಂಘ ಸಂಸ್ಥೆಯು ಸರ್ಕಾರಿ ಶಾಲೆಯನ್ನು ಸುಂದರವಾಗಗಿ ಉನ್ನತೀಕರಿಸಿರುವುದು ಶ್ಲಾಘನೀಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್‌ ಹೇಳಿದರು.

Add Asianetnews Kannada as a Preferred SourcegooglePreferred

ತಾಲೂಕಿನ ಮೊಸರುಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಉನ್ನತೀಕರಿಸಿದ ಶಾಲಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶತಮಾನದ ಸರ್ಕಾರಿ ಶಾಲೆಯಾದ ಮೊಸರುಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಥಿಲವಾಗಿದ್ದು ಅದರ ದುರಸ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಹೂವಿನಹೊಳೆ ಪ್ರತಿಷ್ಠಾನದ ಮುಖ್ಯಸ್ಥರಾದ ನಂದಿ.ಜೆ. ಅವರು ಪ್ರತಿಕ್ರಿಯಿಸಿ ನಾವು ನಿಮ್ಮೊಡನಿದ್ದೇವೆ ಎಂಬ ಭರವಸೆ ನೀಡಿದ್ದರು. ನುಡಿದಂತೆ ನಮ್ಮ ಶಾಲೆಯನ್ನು ಯಾವ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬಂತೆ ಸುಮಾರು 11 ಲಕ್ಷ ರು. ವೆಚ್ಚದಲ್ಲಿ ಸುಂದರೀಕರಣ ಮಾಡಿದ್ದಾರೆ. ಶಾಲೆಯ ಉನ್ನತೀಕರಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಲು ಸಾಧ್ಯವಾಗಲಿದೆ ಎಂದರು.

ಹೂವಿನಹೊಳೆ ಪ್ರತಿಷ್ಠಾನ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ನಂದಿ.ಜೆ. ಮಾತನಾಡಿ, ಹೂವಿನಹೊಳೆ ಪ್ರತಿಷ್ಠಾನವು ಈವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸರಿಸುಮಾರು 32 ಸರ್ಕಾರಿ ಶಾಲೆಗಳನ್ನು ನವೀಕರಣ, ಸುಂದರೀಕರಣ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಯಶಸ್ವಿಯಾಗಿ ತಳಮಟ್ಟದಿಂದ ಉಳಿಸಿಕೊಳ್ಳುವ ಮೇಲೆತ್ತುವ ಕಾರ್ಯವನ್ನು ಮಾಡಲಾಗಿದೆ. ಈಗ ಮೊಸರುಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಶಾಲೆಯೂ ಸರಿಸುಮಾರು 103 ವರ್ಷಗಳನ್ನು ಪೂರೈಸುತ್ತಿದ್ದು ಮೂಲ ಸೌಕರ್ಯಗಳ ಕೊರತೆಯಿಂದ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿರುವುದನ್ನು ಗಮನಿಸಿ ಹೂವಿನಹೊಳ ಪ್ರತಿಷ್ಠಾನದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಎಂ.ಟಿ.ಗೋವಿಂದರಾಜು ಮತ್ತು ಪ್ರಸ್ತುತ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಶಾಲೆಯ ಹಳೆ ವಿದ್ಯಾರ್ಥಿ ಆನಂದಪ್ಪ, ಶ್ರೀನಿವಾಸ್‌ರ ಬೇಡಿಕೆಯಿಂದ ಶಾಲೆಯನ್ನು ಆಯ್ಕೆಮಾಡಿಕೊಂಡು ಸಮಗ್ರ ಅಭಿವೃದ್ಧಿಪಡಿಸಲಾಗಿದೆ. ಈ ಶಾಲೆಯನ್ನು ಅಭಿವೃದ್ಧಿಪಡಿಸಲು ಬೆಂಗಳೂರಿನ ‘ಇವೋರ ಐಟಿ ಸಲ್ಯೂಷನ್ಸ್‌’ ಕಂಪನಿಯು ಸಾಮಾಜಿಕ ಹೊಣೆಗಾರಿಕೆ ಕಾರ್ಯಗ್ರಾಮಗಳ ಅಡಿಯಲ್ಲಿ ಹೂವಿನಹೊಳೆ ಪ್ರತಿಷ್ಠಾನ ಮೂಲಕ ಬೆಂಬಲಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಆನಂದ್‌, ಗ್ರಾಮ ಪಂಚಾಯತಿಯ ಸದಸ್ಯರಾದ ಲಕ್ಷ್ಮೇದೇವಿ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀನಿವಾಸ್‌, ಶಾಲಾ ಮುಖ್ಯ ಶಿಕ್ಷಕರಾದ ದ್ರಾಕ್ಷಾಯಿಣಿ, ಸಂಸ್ಥೆಯ ಸದಸ್ಯರಾದ ಗೋವಿಂದರಾಜು ಎಂ.ಟಿ.ಸೇರಿದಂತೆ ಹಲವರು ಹಾಜರಿದ್ದರು.