ಫ್ರಿಡ್ಜ್ಲ್ಲಿ ಇಟ್ಟು ತೆಗೆದು 3 ದಿನ ಒಂದೇ ಸಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರು ಮಹಿಳೆ, ಗಂಡನ ಆಕ್ರೋಶ, ಜಗಳಕ್ಕೆ ಇದೀಗ 4 ವರ್ಷದ ಮಗು ತಾಯಿಯನ್ನು ಕಳೆದುಕೊಂಡಿದೆ.
ಬೆಂಗಳೂರು (ಮಾ.07) ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ದುರಂತದಲ್ಲಿ ಅಂತ್ಯಗೊಂಡ ಹಲವು ಘಟನೆಗಳು ನಡೆದಿದೆ. ಇದೀಗ ಬೆಂಗಳೂರಿನಲ್ಲಿ ನಡೆದ ಈ ಘಟನೆ ಹಲವರನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರಿನ 27 ವರ್ಷದ ಮಹಿಳೆ ಬದುಕನ್ನೇ ಅಂತ್ಯಗೊಳಿಸಿದ್ದಾಳೆ. ಪತಿಗೆ ಕಳೆದ ಮೂರು ದಿನಗಳಿಂದ ಒಂದೇ ಸಾಂಬಾರು ಬಡಿಸಿದ್ದಾಳೆ. ಫ್ರಿಡ್ಜ್ನಲ್ಲಿಟ್ಟು ತೆಗೆದು ಬಿಸಿ ಮಾಡಿ ಅದೇ ಸಾರನನ್ನು ಮೂರು ದಿನದಿಂದ ಬಡಿಸಿದ್ದಾಳೆ. ಎರಡು ದಿನ ಸಹಿಸಿಕೊಂಡ ಗಂಡ ಮೂರನೇ ದಿನ ಆಕ್ರೋಶಗೊಂಡಿದ್ದಾನೆ. ಮೂರು ದಿನದ ಹಿಂದಿನ ಸಾರನ್ನು ಬಡಿಸುತ್ತಿದ್ದಿಯಾ ಎಂದು ಪತ್ನಿ ವಿರುದ್ದ ಜಗಳಕ್ಕೆ ನಿಂತಿದ್ದಾನೆ. ಪತ್ನಿಯನ್ನು ಹಿಗ್ಗಾಮುಗ್ಗ ಜಾಡಿಸಿದ್ದಾನೆ. ಪತಿಯ ಆಕ್ರೋಶ, ಬೈಗುಳಕ್ಕೆ ನೊಂದ ಪತ್ನಿ ಬದುಕನ್ನೇ ಅಂತ್ಯಗೊಳಿಸಿದ ಘಟನೆ ನಡೆದಿದೆ. ಪರಿಣಾಮ 4 ವರ್ಷದ ಮಗು ಇದೀಗ ತಾಯಿಯನ್ನು ಕಳದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
27 ವರ್ಷದ ಕಾವ್ಯ ದುರಂತ ಅಂತ್ಯಕಂಡಿದ್ದಾಳೆ. ಬೆಂಗಳೂರು ನಿವಾಸಿ ರಂಗಸ್ವಾಮಿ ವ್ಯಕ್ತಿಯನ್ನು ಮದುವೆಯಾಗಿ ಕಳೆದ 5 ವರ್ಷದಿಂದ ಬೆಂಗಳೂರಿನಲ್ಲಿ ಸಂಸಾರ ನಡೆಸುತ್ತಿದ್ದರು. ಹೆಚ್ಚಿನ ಸಮಸ್ಯೆಗಳಿಲ್ಲದೇ ಸಂಸಾರ ಸಾಗಿತ್ತು. ಇದರ ನಡುವೆ ಉದ್ಭವಗೊಂಡ ಸಾಂಬರು ಸಮಸ್ಯೆ ಜೀವವನ್ನೇ ಬಲಿಪಡೆದಿದೆ.
ಮೂರು ದಿನದ ಹಿಂದಿನ ಸಾರು ನೀಡಿದ್ದ ಆಕ್ರೋಶ
ಪ್ರತಿ ದಿನ ಸಾಂಬಾರು ಮಾಡುತ್ತಿದ್ದ ಕಾವ್ಯ ಕಳೆದ ಕೆಲ ದಿನಗಳಿಂದ ಸಾಂಬಾರು ಮಾಡಿ ಫ್ರಿಡ್ಜ್ನಲ್ಲಿಟ್ಟು ಮರುದಿನಕ್ಕೂ ಬಳಕೆ ಮಾಡುತ್ತಿದ್ದರು. ಇದರ ನಡುವೆ ಮಂಗಳವಾರ (ಮಾ.3) ಮಾಡಿದ ಸಂಬಾರನ್ನು ಮಾರ್ಚ್ 4 ಹಾಗೂ ಮಾರ್ಚ್ 5ಕ್ಕೂ ಬಡಿಸಿದ್ದಾರೆ. ಮೊದಲ ದಿನ ಒಕೆ, ಎರಡನೇ ದಿನ ಗಂಡ ಸಹಿಸಿಕೊಂಡಿದ್ದನೆ. ಆದರೆ ಮಾರ್ಚ್ 5ಕ್ಕೂ ಇದೇ ಸಾರನ್ನು ನೀಡಿದ್ದಾಳೆ. ಪ್ರತಿ ದಿನ ಫ್ರಿಡ್ಜ್ನಲ್ಲಿಟ್ಟು ಬಳಿಕ ಬಿಸಿ ಮಾಡಿ ಸಾಂಬಾರು ಬಡಿಸಿದ್ದಾಳೆ.
ಮೂರನೇ ದಿನ ಜಗಳಕ್ಕೆ ನಿಂತ ಪತಿ
ಮೂರನೇ ದಿನವೂ ಒಂದೇ ಸಾಂಬಾರು ನೀಡಿದ್ದಕ್ಕೆ ರಂಗಸ್ವಾಮಿ ಆಕ್ರೋಶಗೊಂಡಿದ್ದಾನೆ. ಪತ್ನಿ ವಿರುದ್ಧ ಜಗಳಕ್ಕೆ ನಿಂತಿದ್ದಾನೆ. ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಲು ಮುಂದಾಗಿದ್ದಾನೆ. ಕೆಟ್ಟ ಕೆಟ್ಟದಾಗಿ ಬೈದಾಡಿದ್ದಾನೆ. ಎಲ್ಲವನ್ನೂ ಕೇಳಿಸಿಕೊಂಡ ಪತ್ನಿ ಕಾವ್ಯ ಗಳಗಳನೆ ಅತ್ತಿದ್ದಾಳೆ. ಬಳಿಕ ಕೃಷಿಗಾಗಿ ತಂದಿದ್ದ ಕೀಟನಾಶಕ ಸೇವಿಸಿದ್ದಾಳೆ.
ಕೆಲ ಹೊತ್ತಲ್ಲೇ ಕಾವ್ಯ ವಾಂತಿ ಮಾಡಿ ಅಸ್ವಸ್ಥಗೊಂಡಿದ್ದಾಳೆ. ಗಾಬರಿಗೊಂಡ ಪತಿ ಹಾಗೂ ಕುಟುಂಬಸ್ಥರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಕಾವ್ಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಸರ್ಕಾರಿ ಆಸ್ಪತ್ರೆಗೆ ಮೃತದೇಹ ಸ್ಥಳಾಂತರ ಮಾಡಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇತ್ತ ಪ್ರಕರಣ ದಾಖಲಾಗಿದೆ.


