*   ಮಹಿಳಾ ಸ್ವಸಹಾಯ ಗುಂಪುಗಳಿಗೆ ಧನಸಹಾಯ*  ಅಮೃತ ಯೋಜನೆ ಅಡಿಯಲ್ಲಿ ‌ಮಹಿಳೆಯರಿಗೆ ಧನಸಹಾಯ*  ಜವಳಿ ಪಾರ್ಕ್‌ಗಾಗಿ ಜಾಗದ ಹುಡುಕಾಟ 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು(ಜೂ.08): ರಾಜ್ಯದಲ್ಲಿ ಕೆಲ ತಿಂಗಳಲ್ಲಿ 2023ರ ವಿಧಾನಸಭಾ ಚುನಾವಣೆ ಬರಲಿದೆ. ಚುನಾವಣೆಗಾಗಿ ವಿವಿಧ ಪಕ್ಷಗಳ ನಾಯಕರು ಈಗಿನಿಂದಲ್ಲೇ ತಯಾರಿ ನಡೆಸಿದ್ದಾರೆ. ಅದರಲ್ಲೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಹಿಳಾ ಮತದಾರರನ್ನು ಸೆಳೆಯಲು ನಾನಾ ಕಸರತ್ತು ‌ನಡೆಸಿದ್ದಾರೆ. ಸರ್ಕಾರದ ಅಮೃತ ಯೋಜನೆಯಡಿ ಸ್ವ-ಸಹಾಯ ಗುಂಪುಗಳಿಗೆ ಬೀಜ ಧನ ಚೆಕ್ ಗಳನ್ನು ಶಾಸಕ ಬಸನಗೌಡ ದದ್ದಲ್ ವಿತರಣೆ ಮಾಡಿದ್ರು. 

ಚೆಕ್ ವಿತರಿಸಿ ಮಾತನಾಡಿದ ಶಾಸಕ ಬಸನಗೌಡ ದದ್ದಲ್, ಸರ್ಕಾರದಿಂದ ಸಿಗುವ ಸೌಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ರಾಯಚೂರು ಗ್ರಾಮೀಣ ಪ್ರದೇಶ ಹಿಂದೂಳಿದ ಪ್ರದೇಶವಾಗಿದೆ. ಇಂತಹ ಹಿಂದುಳಿದ ಪ್ರದೇಶಗಳಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ಜಲದುರ್ಗ ಕೋಟೆಯಲ್ಲಿದೆ ಭಾವೈಕ್ಯತೆ ಸಂದೇಶದ ಮಂದಿರ: ಇಸ್ಲಾಮಿಕ್ ಶೈಲಿಯ ಮಂದಿರದಲ್ಲಿ ನಿತ್ಯ ಲಿಂಗ ಪೂಜೆ!

40 ಮಹಿಳಾ ಸ್ವಸಹಾಯ ಗುಂಪುಗಳಿಗೆ ತಲಾ ಒಂದು 1 ಲಕ್ಷ ವಿತರಣೆ: 

ರಾಯಚೂರು ಗ್ರಾಮೀಣ ಪ್ರದೇಶಗಳಲ್ಲಿ 700ಕ್ಕೂ ಅಧಿಕ ಸ್ವಸಹಾಯ ಗುಂಪುಗಳು ಇವೆ. ಅದರಲ್ಲಿನ ಆಯ್ದ 40 ಮಹಿಳಾ ಸ್ವಸಹಾಯ ಗುಂಪುಗಳಿಗೆ ತಲಾ ಒಂದು ಲಕ್ಷ ರೂಪಾಯಿಯಂತೆ ಒಟ್ಟು 40 ಲಕ್ಷ ರೂಪಾಯಿ ಚೆಕ್ ನ್ನು ವಿತರಣೆ ಮಾಡಿದ್ರು.

ಬಾಲ್ಯ ವಿವಾಹಗಳು ‌ನಿಲ್ಲಬೇಕು: 

ರಾಯಚೂರು ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತವೆ. ಬಹುತೇಕ ಮನೆಯಲ್ಲಿ 15-16 ವರ್ಷಗಳಲ್ಲಿ ಬಾಲಕಿಯರ ವಿವಾಹ ಮಾಡುವುದು ಸಾಮಾನ್ಯವಾಗಿದೆ. ಇದನ್ನು ತಡೆಯಲು ‌ಪ್ರತಿಯೊಬ್ಬ ತಾಯಿಂದಿರು‌ ಮುಂದಾಗಬೇಕು.15-16 ವರ್ಷದ ಒಳಗೆ ಮದುವೆ ಮಾಡುವುದರಿಂದ ಆ ಮಗು ಮುಂದೆ ಸಾಕಷ್ಟು ತೊಂದರೆ ಅನುಭವಿಸುತ್ತಾಳೆ. ಹೆಣ್ಣು ಮಕ್ಕಳು ಶಾಲಾ- ಕಾಲೇಜಿಗೆ ಹೋಗುವ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊತ್ತು ಹತ್ತಾರು ‌ಸಮಸ್ಯೆ ಗಳು‌ ಆಗುವುದು ‌ನಾವು ಕಾಣುತ್ತಿದ್ದೇವೆ.ಹೀಗಾಗಿ ಹೆಣ್ಣು ‌ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದು ತಂದೆ-ತಾಯಿಯ ಕರ್ತವ್ಯ ಆಗಿದೆ. ಇತ್ತೀಚಿಗೆ ಮಹಿಳೆಯರಿಗಾಗಿ ಸರ್ಕಾರ ಎಲ್ಲಾ ರಂಗದಲ್ಲೂ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮನೆಗಳಲ್ಲಿ ಪೋಷಕರು ಹೆಣ್ಣಾಗಲಿ ಗಂಡುಮಗುವಾಗಲಿ ಸಮಾನವಾಗಿ ಕಾಣಬೇಕು ತಿಳಿಸಿದರು. 

ಹಿಜಾಬ್ ವಿವಾದಕ್ಕೆ ಡೋಂಟ್ ಕೇರ್ ಎಂದ ಮುಸ್ಲಿಂ ವಿದ್ಯಾರ್ಥಿನಿಯರು: ಉಡುಪಿ ಸರ್ಕಾರಿ ಕಾಲೇಜಲ್ಲಿ ಅಡ್ಮಿಷನ್ ಹೆಚ್ಚಳ

ಜವಳಿ ಪಾರ್ಕ್ ಗಾಗಿ ಜಾಗದ ಹುಡುಕಾಟ: 

ರಾಯಚೂರು ಜಿಲ್ಲೆಯಲ್ಲಿ ಜವಳಿ ಪಾರ್ಕ್ ‌ಆಗಬೇಕೆಂದು ಹತ್ತಾರು ಸಂಘಟನೆಗಳು ಹೋರಾಟ ಮಾಡಿದ್ದವು. ಹೋರಾಟದ ಫಲವಾಗಿ ರಾಯಚೂರು ಜಿಲ್ಲೆಯಲ್ಲಿ ಜವಳಿ ‌ಪಾರ್ಕ್ ಮಾಡಲು ರಾಯಚೂರು ಉಸ್ತುವಾರಿ ಸಚಿವ ಶಂಕರ್. ಬಿ.ಪಾಟೀಲ್ ಮುನೇನಕುಪ್ಪ ‌ಗ್ರಿನ್ ಸಿಗ್ನಲ್ ನೀಡಿದ್ದಾರೆ. ಸೂಕ್ತ ಸ್ಥಳಕ್ಕಾಗಿ ಜಿಲ್ಲಾಡಳಿತ ಹುಡುಕಾಟ ‌ನಡೆಸಿದೆ. ಈ ಭಾಗದಲ್ಲಿ ಜವಳಿ ಪಾರ್ಕ್ ನಿರ್ಮಾಣವಾದರೆ 5000 ಮಹಿಳೆಯರಿಗೆ ಉದ್ಯೋಗ ದೊರೆಯುತ್ತದೆ. ಈಗಾಗಲೇ ಎರಡು-ಮೂರು ಕಡೆ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ.

ಇನ್ನೂ ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಬಸನಗೌಡ ದದ್ದಲ್ ಗಿಲ್ಲೆಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ದೇವಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಂಪಾಪತಿ ಹಾಗೂ ರಾಯಚೂರು ತಾ.ಪಂ.ಇಒ ರಾಮರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೆಂಕಟಪ್ಪ, ರಾಮಕೃಷ್ಣ, ಗೋಕುಲ,ಜಾವೀದ್ ಪಟೇಲ್, ಶ್ರೀನಿವಾಸ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಅಧ್ಯಕ್ಷ ಶ್ರೀದೇವಿ ,ಈರಮ್ಮ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ ಭೀಮರಾಯ,ಜ್ಯೋತಿ,ಉಮಾದೇವಿ,ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಫಲಾನುಭವಿಗಳು ಭಾಗವಹಿಸಿದ್ದರು.