Asianet Suvarna News Asianet Suvarna News

ತಪ್ಪಾಯ್ತ ರೀ ಯಪ್ಪಾ: ಗೋವಾ ಅಧಿಕಾರಿಗಳ ತಪ್ಪೊಪ್ಪಿಗೆ ಪತ್ರ!

ಕಳಸಾ ಬಂಡೂರಿ ಯೋಜನಾ ಸ್ಥಳಕ್ಕೆ ಅನಧಿಕೃತ ಭೇಟಿ! ಗೋವಾ ನೀರಾವರಿ ಅಧಿಕಾರಿಗಳಿಂದ ತಪ್ಪೊಪ್ಪಿಗೆ ಪತ್ರ! ಗೋವಾ ಅಧಿಕಾರಿಗಳ ಭೇಟಿ ತಡೆದ ಖಾನಾಪೂರ ಪೊಲೀಸರು! ಮಹದಾಯಿ ತೀರ್ಪು ಕುರಿತು ಗೋವಾಗೆ ಶುರುವಾಗಿದೆ ನಡುಕ

Goa team illegal visit at Kalasa Banduri project site
Author
Bengaluru, First Published Aug 8, 2018, 5:23 PM IST

ಖಾನಾಪೂರ(ಆ.8): ಕಳಸಾ ಬಂಡೂರಿ ಯೋಜನಾ ಸ್ಥಳಕ್ಕೆ ಗೋವೆಯ ಅಧಿಕಾರಿಗಳ ಭೇಟಿಗೆ ಖಾನಾಪೂರ ಪೊಲೀಸರು ತಡೆಯೊಡ್ಡಿದ್ದಾರೆ.  ಖಾನಾಪೂರ ಬಳಿಯ ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ ಗೋವೆ ನೀರಾವರಿ ಅಧಿಕಾರಿಗಳ ತಂಡ ಅನಧಿಕೃತ ಭೇಟಿ ನೀಡಿದ್ದು, ಖಾನಾಪೂರ ಪೊಲೀಸರು ಅಧಿಕಾರಿಗಳಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.  

ಕಳೆದ ಬುಧವಾರ ಮಧ್ಯಾಹ್ನ ಎಂಟು ಅಧಿಕಾರಿಗಳ ತಂಡ ಗೋವೆಯಿಂದ ಬಂದಿತ್ತು. ಈ ಕುರಿತು ರಾಜ್ಯದ ನೀರಾವರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಖಾನಾಪೂರ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಗೋವಾ ಸರ್ಕಾರಿ ಜೀಪು ಮತ್ತು ಒಂದು ಎರ್ಟಿಗಾ ವಾಹನದಲ್ಲಿ ಬಂದ ಗೋವೆ ಅಧಿಕಾರಿಗಳ ತಂಡ, ಮೊದಲು ಕಳಸಾ ನಾಲೆಯ ತಡೆಗೋಡೆ ಸ್ಥಳ ಪರಿಶೀಲನೆ ನಡೆಸಿದೆ. ಇದಕ್ಕೆ ನೀರಾವರಿ ಇಲಾಖೆಯ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನರಿತ ಗೋವೆ ಅಧಿಕಾರಿಗಳ ತಂಡ, ಕೂಡಲೇ ತಮ್ಮ ವಾಹನಗಳನ್ನು ಮಾವುಲಿ ದೇವಸ್ಥಾನದತ್ತ ತಿರುಗಿಸಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಇವರನ್ನು ತಡೆದ ಖಾನಾಪೂರ ಪೊಲೀಸರು, ಎಲ್ಲರನ್ನೂ ಐಬಿಗೆ ಸ್ಥಳಾಂತರಿಸಿದ್ದಾರೆ. ಅಲ್ಲದೇ ಇನ್ನು ಮುಂದೆ ಅನಧಿಕೃತವಾಗಿ ಸ್ಥಳ ಪರಿಶೀಲನೆಗೆ ಬರುವುದಿಲ್ಲ ಎಂದು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಬಳಿಕ ಅವರನ್ನು ಗೋವಾಗೆ ಕಳುಹಿಸಿಕೊಡಲಾಗಿದೆ. 

ಕೆಲವೇ ದಿನಗಳಲ್ಲಿ ಮಹಾದಾಯಿ ನ್ಯಾಯಮಂಡಳಿ ತೀರ್ಪು ನೀಡಲಿದ್ದು, ಗೋವಾ ಸರ್ಕಾರ ಕರ್ನಾಟಕದ ವಿರುದ್ಧದ ಸಾಕ್ಷಾಧಾರಗಳನ್ನು ಸಂಗ್ರಹಿಸುತ್ತಿದೆ. ತೀರ್ಪಿನ ವಿರುದ್ಧ ಸರ್ವೋನ್ನತ ನ್ಯಾಯಾಲಯಕ್ಕೆ ಮೊರೆಹೋಗಲು ಗೋವಾ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

Follow Us:
Download App:
  • android
  • ios