ಸಪ್ತನದಿಗಳ ತವರೂರು ಎಂದು ಕರೆಸಿಕೊಳ್ಳುವ ಬೆಳಗಾವಿಯಲ್ಲಿ ನದಿ ಪಾತ್ರದಲ್ಲಿ ನೀರು ಖಾಲಿಯಾಗಿದ್ದರಿಂದ ಲಕ್ಷಾಂತರ ಮೀನುಗಳು ಅಸುನೀಗಿರುವ ಧಾರುಣ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಬೆಳಗಾವಿ (ಜೂ.25) : ಸಪ್ತನದಿಗಳ ತವರೂರು ಎಂದು ಕರೆಸಿಕೊಳ್ಳುವ ಬೆಳಗಾವಿಯಲ್ಲಿ ನದಿ ಪಾತ್ರದಲ್ಲಿ ನೀರು ಖಾಲಿಯಾಗಿದ್ದರಿಂದ ಲಕ್ಷಾಂತರ ಮೀನುಗಳು ಅಸುನೀಗಿರುವ ಧಾರುಣ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋಕಾಕ ತಾಲೂಕಿನ ನಲ್ಲಾನಟ್ಟಿ, ಬಳೋಬಾಳ, ಬೀರನಹಟ್ಟಿಮತ್ತಿತರ ಗ್ರಾಮಗಳ ಘಟಪ್ರಭಾ ನದಿಯ ಖಾಲಿ ನದಿಯ ಜಲಾನಯನ ಪ್ರದೇಶದಲ್ಲಿ ಲೆಕ್ಕವಿಲ್ಲದಷ್ಟುಮೀನುಗಳು ಸತ್ತಿವೆ. ಸ್ವಲ್ಪ ನೀರಿನಲ್ಲಿನ ಮೀನುಗಳು ಬದುಕುಳಿಯಲು ಬಡಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ನೋಡಿದರೆ ಎಂತಹ ಕಟುಕನೂ ಕೂಡ ಮಮ್ಮಲ ಮರುಕ ಪಡುತ್ತಾನೆ ಮತ್ತು ನೋವಾಗುತ್ತದೆ. ಮೀನುಗಳು ಕೊಳೆಯಲಾರಂಭಿಸಿದ್ದು, ಇಡೀ ನದಿಯ ಜಲಾನಯನ ಪ್ರದೇಶವೇ ದುರ್ವಾಸನೆ ಬೀರುತ್ತಿರುವುದರಿಂದ ನದಿಯ ಬಳಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ನಿಲ್ಲುವುದು ಕಷ್ಟವಾಗಿದೆ. ಮತ್ತೊಂದೆಡೆ ನದಿ ನೀರನ್ನೇ ಅವಲಂಬಿಸಿದ್ದ ಜನರು ಕಳೆದ ಕೆಲ ದಿನಗಳಿಂದ ಕುಡಿಯಲು ಒಂದು ಮಡಕೆ ನೀರಿಲ್ಲದೆ ಪರದಾಡುತ್ತಿದ್ದಾರೆ.

ಉಡುಪಿ: ಕಲುಷಿತಗೊಂಡ ಕೋಟಿಲಿಂಗೇಶ್ವರ ದೇಗುಲದ ಪುಷ್ಕರಣಿ, ಮೀನುಗಳು ಸಾವು!

ಕಳೆದ ಕೆಲವು ದಿನಗಳಿಂದ ಘಟಪ್ರಭಾ ನದಿ ಪಾತ್ರದಲ್ಲಿ ಇಂತಹ ದೊಡ್ಡ ದುರಂತ ನಡೆಯುತ್ತಿದ್ದರೂ ಯಾವೊಬ್ಬ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಇತ್ತ ಗಮನಹರಿಸಿ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಈ ನದಿಯಲ್ಲಿ ಮತ್ತೆ ಮೀನುಗಳ ಆವಾಸಸ್ಥಾನವನ್ನು ಅಭಿವೃದ್ಧಿಪಡಿಸಲು ಕನಿಷ್ಠ ಐದು ವರ್ಷಗಳು ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ನಮ್ಮ ಕಣ್ಣಿಗೆ ಸಾಯುತ್ತಿರುವ ಮೀನುಗಳನ್ನು ನೋಡಲಾಗದೆ, ಬದುಕಿರುವ ಮೀನುಗಳನ್ನು ಮಡಕೆಯಲ್ಲಿ ಹಿಡಿದು ತೆರೆದ ಬಾವಿ, ಕೊಳಗಳಲ್ಲಿ ಬಿಡಲು ಪ್ರಯತ್ನಿಸುತ್ತಿದ್ದೇವೆ, ಇದರಿಂದ ಅವು ಬದುಕುತ್ತವೆ ಎಂದು ತಿಗಡೋಳಿ ಗ್ರಾಮದ ಸದ್ದಾಂ ಹುಸೇನ್‌ ಪೀರಸಾಬ ಮುಲ್ಲಾ ಹೇಳಿದರು.

ಯಲ್ಲಪ್ಪ ದೇಸಾಯಿ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಕೆಟ್ಟಪರಿಸ್ಥಿತಿ ಉದ್ಭವಿಸಿರಲಿಲ್ಲ. ಈ ಮೀನುಗಳನ್ನು ಉಳಿಸಲು ಘಟಪ್ರಭಾ ನದಿಯ ಜಲಾನಯನ ಪ್ರದೇಶದ ಅಣೆಕಟ್ಟುಗಳಿಂದ ನೀರು ಬಿಡಬೇಕು. ಸಂಪೂರ್ಣ ಸತ್ತರೆ ಮುಂದಿನ ಐದು ವರ್ಷಗಳ ಕಾಲ ಇಲ್ಲಿ ಅವುಗಳ ಆವಾಸಸ್ಥಾನ ಸೃಷ್ಟಿಸುವುದು ಕಷ್ಟ. ನೀರಿನ ಕೊರತೆಯಿಂದ ನಮ್ಮ ಕಬ್ಬಿನ ಬೆಳೆಗಳೂ ಒಣಗಲಾರಂಭಿಸಿವೆ. ನಾವೀಗ ನಮಗೆ ಹಾಗೂ ನಮ್ಮ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದೇವೆ. ಈಗ ಮೀನುಗಳಿಗೂ ನೀರು ಸಿಗದೇ ಸತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟುಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದರು.

ಬಾಗಲಕೋಟೆ: ಬಾರದ ಮುಂಗಾರು ಕೃಷ್ಣಾ, ಮಲಪ್ರಭಾ & ಘಟಪ್ರಭಾ ನದಿಗಳ ಒಡಲು ಖಾಲಿ ಖಾಲಿ!

ಈ ಗಂಭೀರ ಪರಿಸ್ಥಿತಿಯು ನಮಗೆ ಪ್ರಕೃತಿ ವಿಕೋಪದಂತೆ ಬೆಳೆಯುತ್ತಿದೆ. ನದಿಯಲ್ಲಿ ಕನಿಷ್ಠ ನೀರಿನ ಹರಿವನ್ನು ಕಾಯ್ದುಕೊಳ್ಳುವ ಮೂಲಕ ಮೀನುಗಳನ್ನು ಉಳಿಸಬಹುದು. ಆದರೆ, ಬಹುತೇಕ ನದಿ ಜಲಾನಯನ ಪ್ರದೇಶಗಳು ಬತ್ತಿ ಹೋಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಾವು ಹೆಚ್ಚು ಗಮನಹರಿಸಿದ್ದೇವೆ. ಇಂದಿನಿಂದ ಅಲ್ಪಸ್ವಲ್ಪ ಮಳೆ ಆರಂಭವಾಗಿರುವುದರಿಂದ ಪರಿಸ್ಥಿತಿ ಬದಲಾಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ.

ಹರ್ಷಲ್‌ ಭೋಯರ್‌ ಸಿಇಒ ಜಿಪಂ ಬೆಳಗಾವಿ