ಸುಮನಹಳ್ಳಿ ಬ್ರಿಡ್ಜ್ನಲ್ಲಿ ಗುಂಡಿ, ಜೀವ ಭಯದಲ್ಲೇ ವಾಹನ ಸವಾರರ ಓಡಾಟ
ನಾಗರಬಾವಿಯಿಂದ ರಾಜಕುಮಾರ್ ಸಮಾಧಿಗೆ ಸಂಪರ್ಕ ಕಲ್ಪಿಸುವ ಸುಮ್ಮನಹಳ್ಳಿ ಬ್ರಿಡ್ಜ್ (Sumanahalli Bridge) ಮತ್ತೊಮ್ಮೆ ಕುಸಿತಗೊಂಡಿದ್ದು, ವಾಹನ ಸವಾರರ ಆತಂಕ ಹೆಚ್ಚಾಗಿದೆ.
ಬೆಂಗಳೂರು, (ಸೆಪ್ಟೆಂಬರ್. 21): ಬೆಂಗಳೂರಿನ ಸುಮನಹಳ್ಳಿ ಬ್ರಿಡ್ಜ್ನಲ್ಲಿ ಗುಂಡಿ ಬಿದ್ದಿದೆ. ಕಳೆದ ಮೂರ್ನಾಲ್ಕು ದಿನಗಳಾದರೂ ಸಹ ಬಿಬಿಎಂಪಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅದನ್ನು ರಿಪೇರಿ ಮಾಡುವುದಕ್ಕೆ ಮುಂದಾಗಿಲ್ಲ. ಇದರಿಂದ ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಭಯದಲ್ಲೇ ಓಡಾಡುತ್ತಿದ್ದಾರೆ.
ಕೆಳಗಿರುವ ಸರ್ವೀಸ್ ರಸ್ತೆ ಕೂಡಾ ಕಾಣಿಸುವ ಮಟ್ಟಿಗೆ ಬ್ರಿಡ್ಜ್ ಕುಸಿದಿದೆ.ಗುಂಡಿ ಬಿದ್ದಿರುವ ಸುತ್ತ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಹಾಗೇ ಸ್ಥಳದಲ್ಲಿ ಟ್ರಾಫಿಕ್ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಪಕ್ಕದಲ್ಲೇ ಬೇರೆ ವಾಹನ ಹೋಗಲು ಅವಕಾಶ ನೀಡಲಾಗಿದೆ. ಇದರಿಂದ ಕಿ.ಮೀಗಟ್ಟಲೇ ಟ್ರಾಫಿಕ್ ಉಂಟಾಗುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಅಲ್ಲದೇ ವಾಹನ ಸವಾರರು ಆತಂಕದಲ್ಲೇ ಬ್ರಿಡ್ಜ್ ಮೇಲೆ ಓಡಾಡ್ತಿದ್ದಾರೆ.
ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
2004 ರಿಂದ 2006ರಲ್ಲಿ ಸುಮನಹಳ್ಳಿ ಬ್ರಿಡ್ಜ್ ನಿರ್ಮಾಣ ಮಾಡಲಾಗಿದ್ದು, 2014ರಲ್ಲಿ ಬಿಡಿಎ ಬ್ರಿಡ್ಜ್ನ್ನು ಬಿಬಿಎಂಪಿಗೆ ಹಸ್ತಾಂತರಿಸಿದೆ. ಈ ಹಿನ್ಕೆಲೆಯಲ್ಲಿ ಅಂದಿನಿಂದ ಬ್ರಿಡ್ಜ್ ನಿರ್ವಹಣೆ ಬಿಬಿಎಂಪಿ ಮಾಡುತ್ತಿದೆ. ಆದ್ರೆ, ಬಿಡ್ಜ್ ಮೇಲೆ ಗುಂಡಿ ಬಿದ್ದಿದ್ದು, ಬಿಡಿಎ ಕಳಪೆ ಕಾಮಗಾರಿ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರ್ನಾಲ್ಕು ದಿನಗಳಾದ್ರೂ ಕೂಡ ಬಿಬಿಎಂಪಿ ಅಧಿಕಾರಿಗಳು ರಿಪೇರಿ ಮಾಡಿಲ್ಲ. ಹೋಗಲಿ ಸ್ಥಳಕ್ಕೆ ಬಂದು ಪರಿಶೀಲನೆ ಸಹ ಮಾಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಬಿಬಿಎಂಪಿಯ ಈ ನಿರ್ಲಕ್ಷ್ಯಕ್ಕೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.
2019ರಲ್ಲಿಯೂ ಸ್ಲ್ಯಾಬ್ ಕುಸಿದಿತ್ತು. ಆ ಸಮಯದಲ್ಲಿ ಸುಮ್ಮನಹಳ್ಳಿ ಬ್ರಿಡ್ಜ್ನ್ನು 6 ತಿಂಗಳು ಬಂದ್ ಮಾಡಲಾಗಿತ್ತು. ಇದೀಗ ಬ್ರಿಡ್ಜ್ನಲ್ಲಿ ಮ್ತತೆ ಗುಂಡಿಬಿದ್ದಿದ್ದು, ಪೊಲೀಸರು ಫ್ಲೈ ಓವರ್ನ್ನು ಬಂದ್ ಮಾಡಿ ಬದಲಿ ಮಾರ್ಗದ ವ್ಯವಸ್ಥೆಯನ್ನು ಮಾಡಿದ್ದಾರೆ. ವಾಹನ ಸಂಚಾರಕ್ಕೆ ಬದಲಿ ಮಾರ್ಗವಾಗಿ ಬ್ರಿಡ್ಜ್ ಕೆಳ ಭಾಗದ ರಸ್ತೆಯಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.