ಗಂಗಾವತಿಯಲ್ಲಿ ಮುಸ್ಲಿಂ ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಹಲ್ಲೆಗೊಳಗಾದ ಯುವಕನ ಪರವಾಗಿ ಯುವತಿಯ ತಾಯಿಯೇ ನಿಂತಿದ್ದು, ಆತ ನಮ್ಮ ಮಗನಿದ್ದಂತೆ ಮತ್ತು ಸಹಾಯಕ್ಕೆ ಬಂದಿದ್ದ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೊಪ್ಪಳ/ಗಂಗಾವತಿ (ಫೆ.05): ಹಿಂದೂ ಯುವಕನೋರ್ವ ಮುಸ್ಲಿಂ ಯುವತಿಯೊಂದಿಗೆ ಮಾತನಾಡುತ್ತಿರುವುದನ್ನು ಪ್ರಶ್ನಿಸಿ, ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಈಗ ಪ್ರಕರಣಕ್ಕೆ ಮಹತ್ವದ ಮತ್ತು ಸ್ಫೋಟಕ ತಿರುವು ಸಿಕ್ಕಿದೆ. ಹಲ್ಲೆಗೊಳಗಾದ ವೆಂಕಟೇಶ್ ಪರವಾಗಿ ಸ್ವತಃ ಮುಸ್ಲಿಂ ಯುವತಿಯ ತಾಯಿ ಆಫಿಯಾ ಅವರೇ ಧ್ವನಿ ಎತ್ತಿದ್ದು, 'ನಮ್ಮ ಪಕ್ಕದ ಮನೆಯ ನಿವಾಸಿಯಾಗಿರುವ ವೆಂಕಟೇಶ್ ನನ್ನ ಮಗನಿದ್ದಂತೆ, ಆತ ನಮ್ಮ ಕುಟುಂಬಕ್ಕೆ ಸಹಾಯ ಮಾಡಲು ಬಂದಿದ್ದನೇ ಹೊರತು ಬೇರೆ ಯಾವ ಉದ್ದೇಶವೂ ಇರಲಿಲ್ಲ. ನಮ್ಮ ಮಗಳು ಮತ್ತು ವೆಂಕಟೇಶ್ ಅಣ್ಣ-ತಂಗಿ ಇದ್ದಂತೆ ಎಂದು ಹೇಳಿದರೂ ಕೇಳದೆ, ನೀನು ಆಕೆಯನ್ನು ಲವ್ ಮಾಡ್ತಿದ್ದೀಯ ಎಂದು ಒಪ್ಪಿಕೋ ಎಂಬಂತೆ ಒತ್ತಾಯಿಸಿ ನಾಲ್ವರು ಹಲ್ಲೆ ಮಾಡಿದ್ದಾರೆ ಎಂದು ಸ್ವತಃ ಮುಸ್ಲಿಂ ಯುವತಿ ತಾಯಿ ಆಫಿಯಾ ಹೇಳಿದ್ದಾರೆ.
ಏನಿದು ಘಟನೆ?
ಕಳೆದ ಎರಡು ದಿನಗಳ ಹಿಂದೆ ಗಂಗಾವತಿಯ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಬಸಾಪಟ್ಟಣದ ನಿವಾಸಿಯಾದ ವೆಂಕಟೇಶ್ ಎಂಬ ಯುವಕ, ಮುಸ್ಲಿಂ ಮಹಿಳೆ ಮತ್ತು ಅವರ ಮಗಳೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದನು. ಇದನ್ನು ಗಮನಿಸಿದ ಕೆಲವು ಮುಸ್ಲಿಂ ಯುವಕರು, 'ನಮ್ಮ ಸಮುದಾಯದ ಹೆಣ್ಣುಮಕ್ಕಳ ಜೊತೆ ಹಿಂದೂ ಯುವಕ ಇರುವುದೇಕೆ?' ಎಂದು ಪ್ರಶ್ನಿಸಿ ವೆಂಕಟೇಶ್ ಮೇಲೆ ಮುಗಿಬಿದ್ದಿದ್ದರು. ಅಲ್ಲದೆ, ವೆಂಕಟೇಶ್ ಮತ್ತು ಯುವತಿ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದನ್ನು ಮುಂದಿಟ್ಟುಕೊಂಡು, ಅವರಿಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂದು ಆರೋಪಿಸಿ ಮನಬಂದಂತೆ ಥಳಿಸಿದ್ದರು. ಈ ಸಂಬಂಧ ಗಂಗಾವತಿ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
ಮುಸ್ಲಿಂ ಮಹಿಳೆ ಆಫಿಯಾ ಸ್ಪಷ್ಟನೆ:
ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಯುವತಿಯ ತಾಯಿ ಆಫಿಯಾ ಅವರು ಮಾಧ್ಯಮಗಳ ಮುಂದೆ ಬಂದು ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದಾರೆ. 'ಬಸಾಪಟ್ಟಣದಲ್ಲಿ ನಮ್ಮ ಮತ್ತು ವೆಂಕಟೇಶ್ ಅವರ ಮನೆ ಅಕ್ಕಪಕ್ಕದಲ್ಲಿವೆ. ಆತ ನಮಗೆ ಅಣ್ಣ-ತಮ್ಮಂದಿರ ಹಾಗೆ. ಅಂದು ನಾವೇ ಆತನನ್ನು ಸಹಾಯಕ್ಕಾಗಿ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದೆವು. ಆದರೆ, ಅಲ್ಲಿಗೆ ಬಂದ ಅಪರಿಚಿತ ಯುವಕರು ಏಕಾಏಕಿ ವೆಂಕಟೇಶ್ನನ್ನು ತಡೆದು ಪ್ರಶ್ನಿಸಿದರು. ನಾನು ಎಷ್ಟೇ ಹೇಳಿದರೂ ಕೇಳದೆ, ಆತನನ್ನು ಎಳೆದುಕೊಂಡು ಹೋಗಿ ಹಲ್ಲೆ ಮಾಡಿದರು' ಎಂದು ಕಣ್ಣೀರು ಹಾಕಿದ್ದಾರೆ.
ಬಲವಂತದ ಒಪ್ಪಿಗೆಗೆ ಪಟ್ಟು:
ಹಲ್ಲೆಕೋರರು ಕೇವಲ ಹೊಡೆದಿದ್ದಲ್ಲದೆ, ವೆಂಕಟೇಶ್ ಬಳಿ ಬಲವಂತವಾಗಿ ಸುಳ್ಳು ಹೇಳಿಸಲು ಪ್ರಯತ್ನಿಸಿದ್ದಾರೆ ಎಂದು ಆಫಿಯಾ ಆರೋಪಿಸಿದ್ದಾರೆ. 'ನೀನು ಈ ಹುಡುಗಿಯನ್ನು ಪ್ರೀತಿಸುತ್ತಿದ್ದೀಯಾ ಎಂದು ಒಪ್ಪಿಕೋ' ಎಂದು ಒತ್ತಾಯಿಸಿ ಥಳಿಸಿದ್ದಾರೆ. ಆದರೆ ವೆಂಕಟೇಶ್, 'ನಾವು ಅಣ್ಣ-ತಂಗಿಯರಿದ್ದಂತೆ, ಯಾವುದೇ ಪ್ರೇಮ ಸಂಬಂಧವಿಲ್ಲ' ಎಂದು ಹೇಳಿದರೂ ಬಿಡದೆ ಹಲ್ಲೆ ಮುಂದುವರಿಸಿದ್ದಾರೆ. 'ಇವನು ನಮ್ಮ ರಕ್ತ ಅಲ್ಲ, ಹಿಂದೂ ಆಗಿದ್ದುಕೊಂಡು ನಮ್ಮವರ ಜೊತೆ ಏಕೆ ಬಂದಿದ್ದಾನೆ?' ಎಂಬ ಕೋಮು ದ್ವೇಷದ ಮಾತುಗಳನ್ನು ಆಡಿರುವುದು ಸ್ಪಷ್ಟವಾಗಿದೆ.
ಅಪರಿಚಿತರ ಅಟ್ಟಹಾಸ:
ಹಲ್ಲೆ ಮಾಡಿದ ಯುವಕರು ತಮಗೆ ಪರಿಚಯವೇ ಇಲ್ಲದವರು ಎಂದು ಆಫಿಯಾ ಸ್ಪಷ್ಟಪಡಿಸಿದ್ದಾರೆ. ಕೇವಲ ಧರ್ಮದ ಕಾರಣಕ್ಕಾಗಿ, ಸಹಾಯಕ್ಕೆ ಬಂದ ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ವೆಂಕಟೇಶ್ ಯಾವುದೇ ತಪ್ಪು ಮಾಡಿಲ್ಲ ಎಂದು ನೊಂದ ತಾಯಿ ಸಮರ್ಥಿಸಿಕೊಂಡಿದ್ದಾರೆ. ಗಂಗಾವತಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅನಗತ್ಯವಾಗಿ ನೈತಿಕ ಪೊಲೀಸ್ಗಿರಿ ನಡೆಸಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.


