ಝೀರೋ ಟ್ರಾಫಿಕ್: ಶಸ್ತ್ರಚಿಕಿತ್ಸೆಗಾಗಿ ಹಸುಳೆ ಮಂಗ್ಳೂರಿಂದ ಬೆಂಗ್ಳೂರಿಗೆ
* ಮಂಗಳೂರಿನಿಂದ ಬೆಂಗಳೂರಿಗೆ 350 ಕಿ.ಮೀ. ದೂರ 4.30 ಗಂಟೆಯಲ್ಲಿ ತಲುಪಿದ ಆ್ಯಂಬುಲೆನ್ಸ್
* ಹೃದಯದ ಮಹಾಅಪಧಮನಿ ತೊಂದರೆಯಿಂದ ಬಳಲುತ್ತಿದ್ದ ಹಸುಳೆ
* ಝೀರೋ ಟ್ರಾಫಿಕ್ನಲ್ಲಿ ತೆರಳಿ ಜೀವ ಉಳಿಸಲು ನೆರವಾಗಿದ ಹನೀಫ್ ಬಳಂಜ
ಮಂಗಳೂರು(ಜೂ.13): ತುರ್ತು ಶಸ್ತ್ರಚಿಕಿತ್ಸೆಗಾಗಿ 26 ದಿನಗಳ ಹಸುಳೆಯನ್ನು ಹೊತ್ತೊಯ್ದ ಆ್ಯಂಬುಲೆನ್ಸ್ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 350 ಕಿ.ಮೀ. ದೂರವನ್ನು 4.30 ಗಂಟೆಯಲ್ಲಿ ಝೀರೋ ಟ್ರಾಫಿಕ್ನಲ್ಲಿ ಕ್ರಮಿಸಿ ಸಕಾಲದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ನೆರವಾದ ವಿದ್ಯಮಾನ ಶುಕ್ರವಾರ ನಡೆದಿದೆ.
ಮಂಗಳೂರಿನ ಬಡ ಕಟುಂಬದ 26 ದಿನ ಹಸುಗೂಸನ್ನು ನಗರದ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯದ ಮಹಾಅಪಧಮನಿ ತೊಂದರೆಯಿಂದ ಬಳಲುತ್ತಿದ್ದ ಹಸುಳೆಗೆ ಕೂಡಲೇ ಆಪರೇಷನ್ ಅಗತ್ಯವಿತ್ತು.
ಮಂಗಳೂರಲ್ಲಿ ಹೆಚ್ಚುತ್ತಿದೆ ಡ್ರಗ್ ದಂಧೆ : 10 ದಿನದಲ್ಲೇ 2 ಕೇಸ್ ಪತ್ತೆ
ಶನಿವಾರ ಬೆಳಗ್ಗೆ 10.40ಕ್ಕೆ ಮಂಗಳೂರು ಎ.ಜೆ.ಆಸ್ಪತ್ರೆಯಿಂದ ವೆಂಟಿಲೇಟರ್ ಸಮೇತ ಹೊರಟ ಆ್ಯಂಬುಲೆನ್ಸ್ನಲ್ಲಿ ಸಂಜೆ 3.15ಕ್ಕೆ ಬೆಂಗಳೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತಲುಪಿತು. ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್(ಕೆಎಂಸಿಸಿ) ಆ್ಯಂಬುಲೆನ್ಸ್ ಚಾಲಕ ಹನೀಫ್ ಬಳಂಜ ಅವರು ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ ತೆರಳಿ ಜೀವ ಉಳಿಸಲು ನೆರವಾಗಿರುವುದು ಇದು ಮೂರನೇ ಬಾರಿ.