*  ಬ್ಯಾಟರಿ ಚಾಲಿತ ಬಳಕೆ ಕಲ್ಯಾಣ ಕರ್ನಾಟಕದಲ್ಲಿ ಬಳ್ಳಾರಿಯಲ್ಲಿಯೇ ಮೊದಲು*  ಹತ್ತು ಸೀಟಿನ ವಾಹನದಲ್ಲಿ ರೋಗಿಗಳಿಗೆ ಸೇವೆ*  ರೋಗಿಗಳು ನಿರಾಳ  

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜು.02):  ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌)ಆಸ್ಪತ್ರೆಗೆ ನಿತ್ಯ ಬರುವ ನೂರಾರು ರೋಗಿಗಳ ಅನುಕೂಲಕ್ಕೆ ಇನ್ಮುಂದೆ ಬ್ಯಾಟರಿ ಚಾಲಿತ ವಾಹನಗಳ ಸೇವೆ ಸಿಗಲಿದೆ. ವಿಮ್ಸ್‌ ಆಡಳಿತ ಮಂಡಳಿ ಕೋರಿಕೆಯಂತೆ ಸರ್ಕಾರ ನಾಲ್ಕು ಬ್ಯಾಟರಿ ಚಾಲಿತ ವಾಹನಗಳನ್ನು ಬಳ್ಳಾರಿಗೆ ನೀಡಿದ್ದು, ವಿಮ್ಸ್‌ ಆಸ್ಪತ್ರೆಗೆ ಎರಡು ಹಾಗೂ ಟ್ರಾಮಾ ಕೇರ್‌ ಸೆಂಟರ್‌ಗೆ ಎರಡು ವಾಹನಗಳನ್ನು ಸೇವೆಗೆ ಬಿಡಲಾಗಿದೆ. ವೈದ್ಯರ ದಿನವಾದ ಜುಲೈ 1ರಂದು ನಾಲ್ಕು ಬ್ಯಾಟರಿ ಚಾಲಿತ ವಾಹನಗಳು ರೋಗಿಗಳ ಸೇವೆಯನ್ನು ಶುಕ್ರವಾರ ಆರಂಭಿಸಿದವು. ಕಲ್ಯಾಣ ಕರ್ನಾಟಕ ಪೈಕಿ ಬಳ್ಳಾರಿಯಲ್ಲಿ ಮಾತ್ರ ಬ್ಯಾಟರಿ ಚಾಲಿತ ವಾಹನ ಸೇವೆಗೆ ವೈದ್ಯಕೀಯ ಇಲಾಖೆ ಕ್ರಮ ವಹಿಸಿದೆ ಎಂಬುದು ವಿಶೇಷ.

ಬ್ಯಾಟರಿ ಚಾಲಿತ ವಾಹನ ಸೇವೆ ಏಕೆ?

ಡೆಂಟಲ್‌ ಆಸ್ಪತ್ರೆ ಸೇರಿದಂತೆ ವಿಮ್ಸ್‌ ವಿವಿಧ ವಿಭಾಗಗಳಿಗೆ ತೆರಳುವ ರೋಗಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ವೃದ್ಧರು, ತೀವ್ರ ಅಸ್ವಸ್ಥ ರೋಗಿಗಳನ್ನು ಆಸ್ಪತ್ರೆಯ ನಿರ್ದಿಷ್ಟವಿಭಾಗಕ್ಕೆ ದಾಖಲು ಮಾಡುವುದು ಪೋಷಕರಿಗೆ ಕಷ್ಟಸಾಧ್ಯ ಎನಿಸಿತ್ತು. ವಿಮ್ಸ್‌ ಆಸ್ಪತ್ರೆಯಲ್ಲಿ ಹತ್ತಾರು ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಬಸ್‌ ನಿಲ್ದಾಣದಿಂದ ವಾರ್ಡ್‌ಗೆ ರೋಗಿಗಳನ್ನು ಎತ್ತಿಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನರಿತ ವಿಮ್ಸ್‌ ಆಡಳಿತ ಮಂಡಳಿ ಬ್ಯಾಟರಿ ವಾಹನಗಳ ನೀಡುವಂತೆ ವೈದ್ಯಕೀಯ ಇಲಾಖೆಗೆ ಮನವಿ ಮಾಡಿಕೊಂಡಿತ್ತು. ಈಗ ವಿಮ್ಸ್‌ ಆಸ್ಪತ್ರೆಗೆಂದು ನಾಲ್ಕು ಬ್ಯಾಟರಿ ಚಾಲಿತ ವಾಹನಗಳನ್ನು ವೈದ್ಯಕೀಯ ಇಲಾಖೆ ನೀಡಿದೆ. ಇದರ ಬಳಕೆಯ ಪ್ರಮಾಣ ನೋಡಿಕೊಂಡು ಮತ್ತಷ್ಟು ವಾಹನಗಳನ್ನು ತರಿಸಿಕೊಳ್ಳಲು ವಿಮ್ಸ್‌ ಅಧಿಕಾರಿಗಳು ನಿರ್ಧರಿಸಿದ್ದಾರೆ.

BALLARI; ಜನಾರ್ದನ ರೆಡ್ಡಿ ಆಪ್ತ ಮತ್ತು ಸಚಿವರ ಬೆಂಬಲಿಗರ ವಾಟ್ಸಾಪ್ ಕಿತ್ತಾಟ

ರೋಗಿಗಳು ನಿರಾಳ:

ವಿಮ್ಸ್‌ ಆಸ್ಪತ್ರೆಗೆ ರೋಗಿಗಳ ಸೇವೆಗೆಂದು ನೀಡಿರುವ ಬ್ಯಾಟರಿ ಚಾಲಿತ ವಾಹನಗಳಿಂದ ರೋಗಿಗಳು ಅಷ್ಟೇ ಅಲ್ಲ; ಪೋಷಕರು ಸಹ ನಿರಾಳಗೊಂಡಂತಾಗಿದೆ. ಈ ಕುರಿತು ‘ಕನ್ನಡಪ್ರಭ’ ಜೊತೆ ಸಂತಸ ಹಂಚಿಕೊಂಡ ವಿಮ್ಸ್‌ನ ರೋಗಿಗಳು ಇದೊಂದು ಅತ್ಯಂತ ಮಹತ್ವದ ಕಾರ್ಯ ಎಂದು ಸಂತಸಗೊಂಡರು.

ಕಳೆದ ಎರಡು ವರ್ಷಗಳ ಹಿಂದೆ ವಿಮ್ಸ್‌ ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿಯೋರ್ವ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಗಳನ್ನು ಬಸ್‌ ನಿಲ್ದಾಣದಿಂದ ಎತ್ತಿಕೊಂಡೇ ಓಡೋಡಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ಘಟನೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ತುರ್ತು ಚಿಕಿತ್ಸೆಗೆಂದು ವಿಮ್ಸ್‌ಗೆ ಬರುವವರು, ವೃದ್ಧರು ಹಾಗೂ ಒಂದಷ್ಟುಹೆಜ್ಜೆ ಇಡಲು ಕಷ್ಟವಾಗುವ ರೋಗಿಗಳಿಗೆ ಬ್ಯಾಟರಿ ಚಾಲಿತ ವಾಹನ ಹೆಚ್ಚು ಅನುಕೂಲವಾಗಲಿದೆ.

ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಅಂಬಾರಿ ವಿಹಾರ

ರೋಗಿಗಳ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳನ್ನು ನೀಡುವಂತೆ ವೈದ್ಯಕೀಯ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿತ್ತು. ನಾಲ್ಕು ವಾಹನ ನೀಡಿದ್ದು ಎರಡು ವಾಹನಗಳನ್ನು ವಿಮ್ಸ್‌ಗೆ ಮತ್ತೆರಡು ಟ್ರಾಮಾ ಕೇರ್‌ ಸೆಂಟರ್‌ಗೆ ಬಿಡಲಾಗಿದೆ. ಶುಕ್ರವಾರದಿಂದ ಕಾರ್ಯಾರಂಭ ಮಾಡಿವೆ ಅಂತ ಬಳ್ಳಾರಿ ವಿಮ್ಸ್‌ ನಿರ್ದೇಶಕ ಡಾ.ಟಿ.ಗಂಗಾಧರಗೌಡ ಹೇಳಿದ್ದಾರೆ. 

ವಿಮ್ಸ್‌ ಆಸ್ಪತ್ರೆಗೆ ಬ್ಯಾಟರಿ ಚಾಲಿತ ವಾಹನ ನೀಡಿರುವುದು ಅತ್ಯಂತ ಖುಷಿ ಸಂಗತಿ. ಬಸ್‌ ನಿಲ್ದಾಣದಿಂದ ರೋಗಿಗಳು ಆಸ್ಪತ್ರೆಗೆ ತೆರಳು ಕಷ್ಟವಾಗಿತ್ತು. ಸರ್ಕಾರದ ಈ ನಿರ್ಧಾರ ಅತ್ಯಂತ ಶ್ಲಾಘನೀಯ ಅಂತ ಬಳ್ಳಾರಿ ಉಪನ್ಯಾಸಕ ಸೋಮಶೇಖರ್‌ ಕಮ್ಮರಚೇಡು ತಿಳಿಸಿದ್ದಾರೆ.