'ಜನರಿಗೆ ಭರವಸೆ ಕೊಟ್ಟ ಜೋಡೆತ್ತುಗಳೆಲ್ಲಿ'..? ದರ್ಶನ್, ಯಶ್ಗೆ ಶಿವರಾಮೇ ಗೌಡ ಟಾಂಗ್
ಮಂಡ್ಯದಲ್ಲಿ ಮಾಜಿ ಸಂಸದ ಶಿವರಾಮೇ ಗೌಡ ಅವರು ನಟ ದರ್ಶನ್ ಹಾಗೂ ಯಶ್ಗೆ ಟಾಂಗ್ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭ ಬಂದಿದ್ದ ಜೋಡೆತ್ತುಗಳೆಲ್ಲಿ ಅಂತ ಪ್ರಶ್ನಿಸೋ ಮೂಲಕ ದರ್ಶನ್, ಹಾಗೂ ಯಶ್ ಅವರ ಕಾಲೆಳೆದಿದ್ದಾರೆ.
ಮಂಡ್ಯ(ಸೆ.28): ಕಳೆದ ಲೋಕಸಭಾ ಚುನಾವಣೆ ವೇಳೆ ಕಾಣಿಸಿಕೊಂಡಿದ್ದ ಜೋಡೆತ್ತುಗಳು ಈಗ ಜಿಲ್ಲೆಯ ರೈತರ ನೆರವಿಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಕಬ್ಬು ಬೆಳೆದಿರುವ ರೈತರ ಪರಿಸ್ಥಿತಿ ಹೇಳತೀರದಾಗಿದೆ ಎಂದು ಮಾಜಿ ಸಂಸದ ಶಿವರಾಮೇ ಗೌಡ ಅವರು ಮಂಡ್ಯದಲ್ಲಿ ಹೇಳಿದ್ದಾರೆ.
ಪಟ್ಟಣದ ಪ್ರವಾಸಿಮಂದಿರಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಮೇಗೌಡರು, ಸ್ವಾಭಿಮಾನದ ಹೆಸರಿನಲ್ಲಿ ಗೆದ್ದು ಸಂಸದರಾಗಿರುವ ಸುಮಲತಾ ಹಾಗೂ ಚುನಾವಣೆ ವೇಳೆ ಜನರಿಗೆ ಭರವಸೆ ಕೊಟ್ಟಿದ್ದ ಜೋಡೆತ್ತುಗಳು ಈಗ ಎಲ್ಲಿಹೋಗಿವೆ ಎಂದು ತಿಳಿಯದಾಗಿದೆ ಎಂದರು.
ಮಂಡ್ಯ: ದಸರಾ ಪೆಂಡಾಲ್ ಹಾಕೋದಿಕ್ಕೂ JDS, BJP ಜಗಳ
ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಸಂಸದರು ಹಾಗೂ ಜೋಡೆತ್ತುಗಳು ರೈತರ ನೆರವಿಗೆ ಬರಬೇಕೆಂದು ಸಂಸದೆ ಸುಮಲತಾ, ನಟ ದರ್ಶನ್ ಹಾಗೂ ಯಶ್ ಅವರನ್ನು ಪರೋಕ್ಷವಾಗಿ ಕುಟುಕಿದರು.
ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರೂ ಅಣ್ಣತಮ್ಮಂದಿರಂತೆ ಇದ್ದೇವೆ. ನಮ್ಮಿಬ್ಬರ ನಡುವಿನ ಸಣ್ಣ ಪುಟ್ಟವ್ಯತ್ಯಾಸಗಳನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದರು.
ಮೇಲಾಧಿಕಾರಿ ಲಂಚಕ್ಕೆ ಬೇಡಿಕೆ: ಬಸ್ ಚಾಲಕ ಆತ್ಮಹತ್ಯೆಗೆ ಯತ್ನ
ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕಾಣಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ನನಗೂ ಕಾಂಗ್ರೆಸ್ ಸಭೆಗೂ ಯಾವುದೇ ಸಂಬಂಧವಿಲ್ಲ. ಆತ್ಮೀಯ ಸ್ನೇಹಿತರೊಬ್ಬರನ್ನು ಭೇಟಿಮಾಡುವ ಸಲುವಾಗಿ ನಾನು ಅಲ್ಲಿಗೆ ಹೋಗಿದ್ದ ವೇಳೆ ಅಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿತ್ತು. ಅದನ್ನೇ ನೆಪ ಮಾಡಿಕೊಂಡು ಕೆಲ ಮಾಧ್ಯಮದವರು ಜನರಿಗೆ ತಪ್ಪು ಸಂದೇಶ ನೀಡಿದ್ದಾರೆ ಎಂದರು.