ಕೊರೋನಾ ಸಂಬಂಧ ಇದುವರೆಗೂ 3300 ಕೋಟಿ ಖರ್ಚು ಮಾಡಿರುವುದಾಗಿ ಸರ್ಕಾರ ಲೆಕ್ಕ ತೋರಿಸುತ್ತಿದೆ| ವೆಂಟಿಲೇಟರ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌, ಹಾಸಿಗೆ ಬಾಡಿಗೆ ನೆಪದಲ್ಲಿ ಕೋಟ್ಯಂತರ ರು. ದುರುಪಯೋಗ ಮಾಡಿದೆ| ಅಥಣಿಯಲ್ಲಿ, ಕಾಗವಾಡ ಕ್ಷೇತ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶತಕ ಬಾರಿಸಿದ್ದು, 12 ಜನರನ್ನು ಬಲಿ ಪಡೆದಿದೆ|

ಕಾಗವಾಡ(ಜು.20): ರಾಜ್ಯದಲ್ಲಿ ಕೋವಿಡ್‌-19ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ರಾಜು ಕಾಗೆ ಆರೋಪಿಸಿದ್ದಾರೆ. 

Add Asianetnews Kannada as a Preferred SourcegooglePreferred

ಶನಿವಾರ ಉಗಾರ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆಯೇ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯೂ ಹೆಚ್ಚಾಗುತ್ತಿದೆ. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾಯುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕೊರೋನಾ ಸಂಬಂಧ ಇದುವರೆಗೂ 3300 ಕೋಟಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸುತ್ತಿರುವ ಸರ್ಕಾರ ವೆಂಟಿಲೇಟರ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌, ಹಾಸಿಗೆ ಬಾಡಿಗೆ ನೆಪದಲ್ಲಿ ಕೋಟ್ಯಂತರ ರು. ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿ: ಕಾಂಗ್ರೆಸ್‌ ಶಾಸಕನಿಗೆ ಅಂಟಿದ ಕೊರೋನಾ ಸೋಂಕು, ಹೆಚ್ಚಿದ ಆತಂಕ..!

ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ದೊಡ್ಡದಾಗಿದ್ದು, ಜಿಲ್ಲೆಯಲ್ಲಿ ಒಬ್ಬರು ಕೇಂದ್ರ ಸಚಿವರು, ಇಬ್ಬರು ಸಂಸದರು, ನಾಲ್ಕು ಜನ ಸಚಿವರಿದ್ದರೂ ಕೊರೋನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದ ಅವರು, ಅಥಣಿಯಲ್ಲಿ, ಕಾಗವಾಡ ಕ್ಷೇತ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶತಕ ಬಾರಿಸಿದ್ದು, 12 ಜನರನ್ನು ಬಲಿ ಪಡೆದಿದೆ. ಶನಿವಾರ ಒಂದೇ ದಿನ ಅಥಣಿ ಹಾಗೂ ಕಾಗವಾಡದಲ್ಲಿ 41 ಜನರಿಗೆ ಸೋಂಕು ತಗುಲಿದೆ ಎಂದರು.