ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಆರ್‌ಎಸ್ಸೆಸ್‌ ಸ್ವಯಂ ಸೇವಕ ಮೋಹನ್‌ಜಿ ವೈದ್ಯ ಜೊತೆ ನಾಗ್ಪುರಕ್ಕೆ ಭೇಟಿ ನೀಡಿದ್ದ ಗೂಳಿಹಟ್ಟಿ ಶೇಖರ್ ಹೆಡಗೆವಾರ್ (ನಿವಾಸ) ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಪರಿಶಿಷ್ಟ ಸಮುದಾಯದ ವ್ಯಕ್ತಿ ಎನ್ನುವ ಕಾರಣ ನೀಡಿ ಒಳಗಡೆ ಬಿಡದ ಹಿನ್ನಲೆಯಲ್ಲಿ ಮನನೊಂದು ಶೇಖರ್ ಆರ್‌ಎಸ್ಸೆಸ್‌ನಲ್ಲಿ ಅಸ್ಪೃಶ್ಯತೆ ಜೀವಂತವಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಹೊಸದುರ್ಗ(ಡಿ.07): ಸಂಘ ಪರಿವಾರದಲ್ಲಿ ಅಸ್ಪೃಶ್ಯತೆ ಆಚರಣೆಗೆ ಸ್ಪಷ್ಟನೆ ನೀಡುವಂತೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಬಿಜೆಪಿ‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಪ್‌ಗೆ ಮನವಿ ಮಾಡಿ ಕಳುಹಿಸಿರೋ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಆರ್‌ಎಸ್ಸೆಸ್‌ ಸ್ವಯಂ ಸೇವಕ ಮೋಹನ್‌ಜಿ ವೈದ್ಯ ಜೊತೆ ನಾಗ್ಪುರಕ್ಕೆ ಭೇಟಿ ನೀಡಿದ್ದ ಗೂಳಿಹಟ್ಟಿ ಶೇಖರ್ ಹೆಡಗೆವಾರ್ (ನಿವಾಸ) ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಪರಿಶಿಷ್ಟ ಸಮುದಾಯದ ವ್ಯಕ್ತಿ ಎನ್ನುವ ಕಾರಣ ನೀಡಿ ಒಳಗಡೆ ಬಿಡದ ಹಿನ್ನಲೆಯಲ್ಲಿ ಮನನೊಂದು ಶೇಖರ್ ಆರ್‌ಎಸ್ಸೆಸ್‌ನಲ್ಲಿ ಅಸ್ಪೃಶ್ಯತೆ ಜೀವಂತವಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ಚಿತ್ರದುರ್ಗದ ಸಂಸದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಕಾರಜೋಳಗೂ ಮ್ಯೂಸಿಯಂ ಒಳಗೆ ಬಿಟ್ಟಿಲ್ವಾ ಎಂದು ಪ್ರಶ್ನಿಸಿರುವ ಗೂಳಿಹಟ್ಟಿ ಶೇಖರ್ ಆರ್‌ಎಸ್ಸೆಸ್‌ ಹಾಗೂ ಬಿಜೆಪಿ‌ ನಾಯಕರ‌ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಸಂಘ ಪರಿವಾರದಲ್ಲಿ ಅಸ್ಪೃಶ್ಯತೆ ಆಚರಣೆ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ.

ವರ್ಣಾಶ್ರಮ ಜಾರಿಗೊಳಿಸುವುದು ಬಿಜೆಪಿ, ಆರ್‌ಎಸ್ಎಸ್ ಉದ್ದೇಶ: ದಿನೇಶ್ ಅಮೀನ್ ಮಟ್ಟು

ಇದಲ್ಲದೆ ತಮ್ಮ ಸಮಾಜದ ಗುರುಗಳಿಗೂ ತಮ್ಮ ಅಸ್ಪೃಶ್ಯತೆಯ ನೋವಿನ ಅಳಲನ್ನು ತೋಡಿಕೊಂಡಿರುವ ಆಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, ಘಟನೆ ನಡೆದು ಸುಮಾರು 6-7 ತಿಂಗಳ ನಂತರ ಈ ವಿಚಾರ ತಂದಿರುವುದಕ್ಕೆ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ಗೂಳಿಹಟ್ಟಿ ಆರೋಪ ನಿರಾಧಾರ: ಆರೆಸ್ಸೆಸ್‌ ಸ್ಪಷ್ಟನೆ

ಬೆಂಗಳೂರು: ಜಾತಿ ಕಾರಣಕ್ಕೆ ನಾಗಪುರದ ಡಾ.ಹೆಡಗೇವಾರ್ ಸ್ಮಾರಕ ಕಟ್ಟಡದಲ್ಲಿ ತಮಗೆ ಪ್ರವೇಶ ನಿರಾಕರಿಸಲಾಯಿತು ಎಂಬ ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಆರೋಪವು ನಿರಾಧಾರವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸ್ಪಷ್ಟಪಡಿಸಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘದ ದಕ್ಷಿಣ-ಮಧ್ಯ ಕ್ಷೇತ್ರೀಯ ಕಾರ್ಯವಾಹಕ ನಾ.ತಿಪ್ಪೇಸ್ವಾಮಿ, ನಾಗಪುರದಲ್ಲಿ ಸಂಘ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಹಾಗಾಗಿ, ಗೂಳಿಹಟ್ಟಿ ಶೇಖರ್ ಆರೋಪದಲ್ಲಿ ಹುರುಳಿಲ್ಲ ಎಂದು ತಳ್ಳಿಹಾಕಿದ್ದಾರೆ. 

ಮುನಿಸು ಮರೆತು ಒಂದಾಗಿ ಕಾಣಿಸಿದ ಕಟೀಲ್- ಕಲ್ಲಡ್ಕ ಪ್ರಭಾಕರ ಭಟ್‌

ಆರೆಸ್ಸೆಸ್‌ನ ಯಾವುದೇ ಕಚೇರಿಯಲ್ಲಾಗಲಿ ಅಥವಾ ಈ ರೀತಿಯ ಸ್ಮಾರಕ ಕಟ್ಟಡಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಎಲ್ಲಾ ಜಾತಿ, ವರ್ಗದ ಸಾವಿರಾರು ಜನ ನಿತ್ಯ ಬಂದು ಹೋಗುವ ವ್ಯವಸ್ಥೆ ಇದೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಬಂದಿಲ್ಲ. ಇಷ್ಟಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಅವರು, ಆನಂತರ ಅನೇಕ ಸಂಘದ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ ಅವಮಾನದ ಬಗ್ಗೆ ಹೇಳಿರಲಿಲ್ಲ. ಹತ್ತು ತಿಂಗಳ ನಂತರ ಇದೀಗ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರವಾಗಿದೆ ಎಂದಿದ್ದಾರೆ.

ಗೂಳಿಹಟ್ಟಿ ಹೇಳಿಕೆ ಸರಿಯಲ್ಲ: ಕಾರಜೋಳ

ಗೂಳಿಹಟ್ಟಿ ಶೇಖರ್ ಅವರು ಬಿಜೆಪಿಯಲ್ಲಿ ಇದ್ದಾಗ ಒಂದು, ಹೊರಗಡೆ ಹೋದಾಗ ಮತ್ತೊಂದು ರೀತಿ ಮಾತನಾಡುತ್ತಾರೆ. ಇದು ಸರಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗರಹಿತ, ಜಾತಿ ಇಲ್ಲದ ಸಮಾಜ ನಿರ್ಮಿಸುವುದೇ ಆರೆಸ್ಸೆಸ್ ಧ್ಯೇಯವಾಗಿದೆ. ಆರೆಸ್ಸೆಸ್‍ನಲ್ಲಿ ಇರುವವರಿಗೆ ಒಬ್ಬರಿಗೆ ಒಬ್ಬರ ಜಾತಿ ಗೊತ್ತಿರುವುದಿಲ್ಲ. ಯಾರೂ ಯಾರ ಜಾತಿಯನ್ನೂ ಕೇಳುವುದಿಲ್ಲ. ಎಲ್ಲರೂ ಅಲ್ಲಿ ಸರಿಸಮಾನರು. ಗುರೂಜಿ ಅವರು ಅಸ್ಪೃಶ್ಯತೆ ಆಚರಣೆ ಮಾಡುವವರು ಕೊಳಕು ಮನಸ್ಸಿನವರು ಎಂದಿದ್ದರು. ಗೂಳಿಹಟ್ಟಿ ಶೇಖರ್ ಅವರ ಮನಸ್ಥಿತಿ ಯಾಕೆ ಹೀಗಾಗಿದೆ ಎಂದು ಗೊತ್ತಿಲ್ಲ ಎಂದರು.